Home Uncategorized ತೆರಿಗೆ ಹೆಸರಲ್ಲಿ ಪಾಲಿಕೆ ಅಧಿಕಾರಿಗಳಿಂದ ಮೀಟರ್ ಬಡ್ಡಿ ದಂಧೆ: ರಾಮಲಿಂಗಾ ರೆಡ್ಡಿ

ತೆರಿಗೆ ಹೆಸರಲ್ಲಿ ಪಾಲಿಕೆ ಅಧಿಕಾರಿಗಳಿಂದ ಮೀಟರ್ ಬಡ್ಡಿ ದಂಧೆ: ರಾಮಲಿಂಗಾ ರೆಡ್ಡಿ

56
0

ಬೆಂಗಳೂರು:

‘ಬೆಂಗಳೂರು ನಗರದಲ್ಲಿ 20 ಲಕ್ಷ ಆಸ್ತಿಗಳಿಂದ್ದು, ಅದರಲ್ಲಿ 18 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ ಪಾಲಿಕೆ ತಮ್ಮ ಅಧಿಕಾರಿಗಳ ತಪ್ಪಿನಿಂದ ಆಗಿರುವ ಅಚಾತುರ್ಯಕ್ಕೆ 78 ಸಾವಿರ ಆಸ್ತಿಗಳ ಮಾಲೀಕರಿಗೆ ತೆರಿಗೆ ಪಾವತಿ ಮಾಡಿಲ್ಲ ಎಂದು ಎರಡರಿಂದ ಮೂರು ಪಟ್ಟು ದುಬಾರಿ ದಂಡ ವಿಧಿಸಿದೆ. ಈ ಆಸ್ತಿ ಮಾಲೀಕರಿಂದ 120 ಕೋಟಿ ರೂ. ತೆರಿಗೆ ಬಾಕಿ ಬರಬೇಕಾಗಿದ್ದು, ಅದಕ್ಕೆ 240 ಕೋಟಿ.ರೂ ಬಡ್ಡಿ ಹಾಕಿದ್ದಾರೆ. ಆ ಮೂಲಕ ಪಾಲಿಕೆ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸಲು ಮುಂದಾಗಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ರಾಮಲಿಂಗಾ ರೆಡ್ಡಿ ಅವರು ಪತ್ರಿಕಾಗೋಷ್ಠಿ ನಡೆಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಕಾಂಗ್ರೆಸ್ ಪಕ್ಷದಿಂದ ಪಾಲಿಕೆಯ ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ, ಪಿ.ಆರ್ ರಮೇಶ್, ಕೆ.ಚಂದ್ರಶೇಖರ್, ಪದ್ಮಾವತಿ, ಗಂಗಾಬಿಕೆ, ಮಂಜುನಾಥ್ ರೆಡ್ಡಿ ಅವರು ಇದ್ದರು.

ಈ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಬೆಂಗಳೂರು ಮಹಾನಗರ ಪಾಲಿಕೆ ಜನರ ಮೇಲೆ ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹಾಕುತ್ತಿದೆ. ಅಧಿಕಾರಿಗಳು ಐದು ವರ್ಷಗಳ ಹಿಂದೆ ವಲಯ ವಿಂಗಡಣೆಯನ್ನು ಸರಿಯಾಗಿ ಮಾಡದೇ, ಜನರಲ್ಲಿ ಗೊಂದಲ ಮೂಡಿಸಿದೆ. ಅಧಿಕಾರಿಗಳು ನಿಗದಿ ಮಾಡಿದ ವಲಯದಲ್ಲಿ ತೆರಿಗೆ ಪಾವತಿಸಿದ್ದಾರೆ. ಆದರೆ ಈಗ ಅಧಿಕಾರಿಗಳು ನೀವು ಬೇರೆ ವಲಯಕ್ಕೆ ಅನ್ವಯವಾಗುವಂತೆ ತೆರಿಗೆ ಪಾವತಿ ಮಾಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ಅಧಿಕಾರಿಗಳಿಗೆ ಆಡಳಿತ ವಿಚಾರದಲ್ಲಿ ಮೇಯರ್ ಅವರ ಅಧಿಕಾರವನ್ನು ನೀಡಿರಬಹುದು. ಆದರೆ ತೆರಿಗೆ ಹೆಚ್ಚಳ ವಿಚಾರದಲ್ಲಿ ಇದು ಮುಖ್ಯಮಂತ್ರಿಗಳ ಗಮನಕ್ಕೆ ಬರದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರ ಗಮನಕ್ಕೆ ಈ ವಿಚಾರ ಬಂದಿರುತ್ತದೆ. ಹೀಗಾಗಿ ಈ ಮೀಟರ್ ಬಡ್ಡಿ ವ್ಯವಹಾರ ದಂಧೆಗೆ ಬಿಜೆಪಿ ಸರ್ಕಾರವೇ ಕಾರಣವಾಗಿದೆ. ಪಾಲಿಕೆ ಮೊದಲು ಈ ಬಡ್ಡಿ ದಂಧೆಯನ್ನು ನಿಲ್ಲಿಸಬೇಕು. ಪಾಲಿಕೆ ಅಧಿಕಾರಿಗಳು 2016ರಲ್ಲಿ ಸರಿಯಾಗಿ ವಲಯ ವರ್ಗಿಕರಣ ಮಾಡಿದ್ದರೆ ಜನರು ಅದೇ ವಲಯದಲ್ಲಿ ತೆರಿಗೆ ಕಟ್ಟುತ್ತಿದ್ದರು. ಆದರೆ ಇಂದು ಯಾವುದೇ ತಪ್ಪು ಮಾಡದ ಜನರಿಗೆ ಈ ರೀತಿಯಾಗಿ ಮೂರು ಪಟ್ಟು ತೆರಿಗೆ ಕಟ್ಟುವಂತೆ ನೋಟೀಸ್ ಜಾರಿ ಮಾಡಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಅಧಿಕಾರಿಗಳು ಹಿಂಪಡೆಯಬೇಕು. ಈ ನಿರ್ಧಾರ ಹಿಂಪಡೆಯದಿದ್ದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಆಗ್ರಹಿಸಿದ್ದಾರೆ.

‘ಅಧಿಕಾರಿಗಳು ಈ ಹಿಂದೆ ಜಾರಿಯಲ್ಲಿದ್ದ ಕಾಯ್ದೆ ಆಧಾರವಾಗಿ ಜನರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಹಳೇ ಕಾಯ್ದೆಯಲ್ಲಿ ನೋಟೀಸ್ ಜಾರಿ ಮಾಡಲು ಕೇವಲ 3 ವರ್ಷಗಳ ಕಾಲಾವಕಾಶವಿದೆ. 3 ವರ್ಷಗಳ ಒಳಗಾಗಿ ಅವರು ನೋಟೀಸ್ ನೀಡಬೇಕಾಗಿತ್ತು. ಆದರೆ ನೀಡಿಲ್ಲ. ನೂತನ ಕಾಯ್ದೆಯಲ್ಲಿ ಇದನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆಯಾದರೂ, ಹಳೇಯ ಕಾಯ್ದೆ ಆಧಾರದ ಮೇಲೆ ನೋಟೀಸ್ ಅನ್ನು ನೀಡಲಾಗಿದೆ. ಪಾಲಿಕೆ ಅಧಿಕಾರಿಗಳ ಈ ನಿರ್ಧಾರ ಮಹಾ ಅಪರಾಧವಾಗಿದೆ’ ಎಂದು ಎಚ್ಚರಿಕೆ ನೀಡಿದರು.

‘ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪಾಲಿಕೆಯಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಮೊದಲ ಬಾರಿಗೆ ಭ್ರಷ್ಟಾಚಾರ ನಿಯಂತ್ರಿಸಲು ಸ್ವಯಂ ಘೋಷಣಾ ಆಸ್ತಿ ತೆರಿಗೆ ಪದ್ಧತಿ ಜಾರಿಗೊಳಿಸಲಾಗಿತ್ತು. ಆಗ ಬೆಂಗಳೂರು ನಗರ ಪ್ರದೇಶವನ್ನು ತೆರಿಗೆ ಸಂಗ್ರಹಿಸಲು ಎ,ಬಿ,ಸಿ,ಡಿ,ಇ ಹಾಗೂ ಎಫ್ ವಲಯಗಳನ್ನಾಗಿ ವಿಂಗಡಿಸಲಾಗಿತ್ತು. 2016ರಲ್ಲಿ ಪಾಲಿಕೆಯು ಆಸ್ತಿ ತೆರಿಗೆ ಪರಿಷ್ಕರಿಸಿ ಯೂನಿಟ್ ದರಗಳನ್ನು ವಸತಿಗೆ ಶೇ.20ರಷ್ಟು ಹಾಗೂ ವಸತಿಯೇತರಕ್ಕೆ ಶೇ.25ರಷ್ಟು ಹೆಚ್ಚಳ ಮಾಡಿತ್ತು. ಆರಂಭದಲ್ಲಿ ಈ ತೆರಿಗೆ ಪಾವತಿ ಮಾಡುವ ತಂತ್ರಾಂಶಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸಲು ಅಲೇಕ ದಿನಗಳ ಸಮಯ ತೆಗೆದುಕೊಳ್ಳಲಾಯಿತು. ಇದರಿಂದಾಗಿ 2016-17ನೇ ಸಸಾಲಿನಲ್ಲಿ ಕಡಿಮೆ ಆಸ್ತಿ ತೆರಿಗೆ ಮಾಡುವ ಮಾಲೀಕರು 2017-18ನೇ ಸಾಲಿನಲ್ಲಿ ಯಾವುದೇ ದಂಡ ಅಥವಾ ಬಡ್ಡಿ ಅಲ್ಲದೇ ತೆರಿಗೆ ಪಾವತಿ ಮಾಡಿರುತ್ತಾರೆ. ಆಸ್ತಿ ಮಾಲೀಕರು ತಮ್ಮ ವಲಯ ಗುರುತಿಸಲು ತೊಂದರೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ನೆರವನ್ನು ಪಡೆದು ಆಸ್ತಿ ತೆರಿಗೆ ಪಾವತಿ ಮಾಡಿರುತ್ತಾರೆ. ಈ ವೇಳೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ತೆರಿಗೆ ಸಂಗ್ರಹದಲ್ಲಿ 120 ಕೋಟಿಯಷ್ಟು ವ್ಯತ್ಯಾಸ ಕಂಡು ಬಂದಿದೆ. ಕಳೆದ ಐದು ವರ್ಷಗಳಲ್ಲಿ ತಂತ್ರಾಂಶವನ್ನು ಸರಿಪಡಿಸಿಕೊಳ್ಳದ ಪಾಲಿಕೆ ಅಧಿಕಾರಿಗಳು 2021ರಲ್ಲಿ ತಂತ್ರಾಂಶ ಸರಿಪಡಿಸಿಕೊಂಡು ಈಗ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಬಾಕಿ ತೆರಿಗೆ ಪಾವತಿ ಮಾಡುವುದರ ಜತೆಗೆ ಈ ಅವಧಿಗೆ ಮೂರುಪಟ್ಟು ಬಡ್ಡಿಯನ್ನು ವಿಧಿಸಿರುವುದು ಖಂಡನೀಯ’ ಎಂದು ಕಿಡಿಕಾರಿದರು.

ಇಂದು ಪಾಲಿಕೆ ಅಧಇಕಾರಿಗಳು 78 ಸಾವಿರ ಆಸ್ತಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಸೆಕ್ಷನ್ 108 ಎ ಪ್ರಕಾರ ನೋಟೀಸ್ ಜಾರಿ ಮಾಡಲಾಗಿದೆ. 2016-17ರಿಂದ 2019-20ರವರೆಗೂ ಈ ತೆರಿಗೆ ಪರಿಷ್ಕರಿಸಿದ್ದು, ಬಾಕಿ ಇರುವ ತೆರಿಗೆ ಪಾವತಿಸಬೇಕು ಎಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ. ಈ ನೋಟೀಸ್ ಯಾವ ಅಧಿಕಾರದ ಮೇಲೆ ನೀಡಿದ್ದಾರೆ ಎಂಬುದು ಇಲ್ಲಿ ಪ್ರಶ್ನೆಯಾಗಿದೆ. ಈ ಹಿಂದಿನ ತೆರಿಗೆ ಕಾಯ್ದೆ ಮಾರ್ಚ್ 21ರವರೆಗೂ ಜಾರಿಯಲ್ಲಿತ್ತು. ನಂತರ ನೂತನ ಬಿಬಿಎಂಪಿ ಕಾಯ್ದೆ ಜಾರಿಗೆ ಬಂದಿದೆ. ಈ ನೋಟೀಸ್ ಅನ್ನು 23-2-2021ರ ದಿನಾಂಕದ ಮೇಲೆ ನೀಡಲಾಗಿದೆ ಅಂದರೆ ಈ ಕಾಯ್ದೆ ಅಂತ್ಯವಾಗುವ ಒಂದು ತಿಂಗಳ ಹಿಂದಿನ ದಿನಾಂಕದ ಮೇಲೆ ನೀಡಿದ್ದಾರೆ. ಆದರೆ ಈ ನೋಟೀಸ್ ಜಾರಿ ಯಾವಾಗ ಮಾಡಿದ್ದಾರೆ ಎಂದು ನೋಡುವುದಾದರೆ, ಕೇವಲ ಒಂದು ವಾರದ ಹಿಂದಷ್ಟೇ ನೀಡಿದ್ದಾರೆ. ಈ ನೋಟೀಸ್ ನಲ್ಲಿ 2016-17ರಿಂದ ತೆರಿಗೆ ಕಟ್ಟಿರುವುದನ್ನು ಪರಿಷ್ಕರಿಸಿದ್ದಾರೆ. ಹಳೇ ಕಾಯ್ದೆ ಪ್ರಕಾರ ಈ ಪರಿಷ್ಕರಣೆಗೆ ಕೇವಲ ಮೂರು ವರ್ಷಗಳ ಕಾಲಾವಧಿ ಇರುತ್ತದೆ. ಅಧಿಕಾರಿಗಳು ನಾಲ್ಕನೇ ವರ್ಷ ಪರಿಷ್ಕರಣೆ ಮಾಡುತ್ತಿದ್ದಾರೆ. ಕಾಯ್ದೆಯಲ್ಲಿ ಅದಕ್ಕೆ ಅವಕಾಶವೇ ಇಲ್ಲವಾಗಿದೆ. 108 ಎ ನಲ್ಲಿ 13 ಸಬ್ ಸೆಕ್ಷನ್ ಗಳಿವೆ. ಅದರ ಪ್ರಕಾರ 2016ರಲ್ಲಿ ನೀಡಿರುವ ಪರಿಷ್ಕರಣೆ ತಪ್ಪು ಎಂದು ಗೊತ್ತಾದರೆ 60 ದಿನಗಳ ಒಳಗಾಗಿ ನೋಟೀಸ್ ನೀಡಬೇಕು. ನಂತರ ತೆರಿಗೆದಾರರಿಗೆ 30 ದಿನಗಳ ಒಳಗಾಗಿ ಬಾಕಿ ತೆರಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅಧಿಕಾರಿಗಳು ಇಂದು ನಾಲ್ಕು ವರ್ಷಗಳ ತೆರಿಗೆಗೆ ನೋಟೀಸ್ ಕೊಟ್ಟಿದ್ದಾರೆ. ಅಧಿಕಾರಿಗಳು ರದ್ದಾಗಿರುವ ಹಳೇಯ ಕಾಯ್ದೆ ಆಧಾರದ ಮೇಲೆ ನೋಟೀಸ್ ಕೊಡುತ್ತಿರುವುದು ಎಷ್ಟು ಸರಿ? ಈ ಕಾಲಾವಧಿ ಮೀರಿದರೆ ನಂತರ ತೆರಿಗೆಯನ್ನು ಮರುಪರಿಷ್ಕರಿಸಲು ಅವಕಾಶವಿಲ್ಲ ಎಂದು ಹಳೆಯ ಕಾಯ್ದೆಯಲ್ಲಿ ತಿಳಿಸಲಾಗಿದೆ’ ಎಂದು ವಿವರಿಸಿದರು.

‘ಪಾಲಿಕೆ ಅಧಿಕಾರಿಗಳು ಈ ವಿಚಾರದಲ್ಲಿ ನಾಜೂಕಾಗಿ ತೆರಿಗೆದಾರರಿಗೆ ಟೋಪಿ ಹಾಕಲು ಮುಂದಾಗಿದ್ದಾರೆ. ಬೆಂಗಳೂರಿನ ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಪ್ರಮಾದವಾಗಿದ್ದು, ತಂತ್ರಾಂಶದಲ್ಲಿ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ. ನಿಮ್ಮ ಆಡಳಿತ ವೈಫಲ್ಯದಿಂದ ಇಂತಹ ಸಮಸ್ಯೆ ಬಂದಿದ್ದು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರಿಗೆ ಶಿಕ್ಷೆ ನೀಡಲಾಗುತ್ತಿದೆ. ಈ ರೀತಿಯಾಗಿ ಕಿರುಕುಳ ನೀಡುತ್ತಿರುವ ಅದಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here