ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಲಯ ವ್ಯಾಪ್ತಿಯ ಬಾಗಲಗುಂಟೆ ವಾರ್ಡ್ ಸಂಖ್ಯೆ-14 ರಲ್ಲಿ ಬರುವ ಕಾರ್ಮಿಕ ಭವನದಲ್ಲಿ 127 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರಕ್ಕೆ ಇಂದು ಚಾಲನೆ ನೀಡಲಾಯಿತು.
ಕೋವಿಡ್ ಆರೈಕೆ ಕೇಂದ್ರಕ್ಕೆ ಕಂದಾಯ ಸಚಿವರು ಆರ್.ಅಶೋಕ್ ರವರು ಚಾಲನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 12 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ದಾಸರಹಳ್ಳಿ ವಲಯದ ಕಾರ್ಮಿಕ ಭವನದಲ್ಲಿ ಇಂದು 127 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲಾಗಿದ್ದು, ಅದರಲ್ಲಿ 10 ಆಕ್ಸಿಜನ್ ಹಾಸಿಗೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದರು.
![ಕಾರ್ಮಿಕ ಭವನದಲ್ಲಿ 127 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ 1 BBMP starts 127 bed capacity Covid care center in Dasarahalli2](https://kannada.thebengalurulive.com/wp-content/uploads/2021/04/BBMP-starts-127-bed-capacity-Covid-care-center-in-Dasarahalli2-1024x682.jpg)
ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಕಂದಾಯ ಸಚಿವರು ಮಾತನಾಡಿ, ಕಾರ್ಮಿಕ ಭವನದಲ್ಲಿ ಕೋವಿಡ್ ಆರೈಕೆ ಕೇಂದ್ರ ಸುಸಜ್ಜಿತವಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ನಿಯೋಜನೆ ಮಾಡಲಾಗಿದೆ. ಒಂದು ಪಾಳಿಯಲ್ಲಿ 14 ಮಂದಿ ಕೆಲಸ ಮಾಡಲಿದ್ದಾರೆ. ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶೌಚಾಲಯ, ಸ್ನಾನದ ಕೊಠಡಿ, ಅಡುಗೆ ವ್ಯವಸ್ಥೆ, ಊಟ ಮಾಡುವ ಕೊಠಡಿ, ಮನರಂಜನಾ ಕೊಠಡಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕು ದೃಢಪಟ್ಟು ಎಸಿಮ್ಟಮ್ಯಾಟಿಕ್ ಇದ್ದು ಮನೆಯಲ್ಲಿ ಉಳಿಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದಿರುವವರು ಕೋವಿಡ್ ಆರೈಕೆ ಕೇಂದ್ರಗಳಿಗೆ ಬಂದು ಆರೈಕೆ ಪಡೆಯಿರಿ ಎಂದು ತಿಳಿಸಿದರು.
ಈ ವೇಳೆ ದಾಸರಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸಚಿವರು ಕೆ.ಗೋಪಾಲಯ್ಯ, ಸ್ಥಳೀಯ ಶಾಸಕರು ಮಂಜುನಾಥ್, ಆಡಳಿತಗಾರರು ರಾಕೇಶ್ ಸಿಂಗ್, ಮುಖ್ಯ ಆಯುಕ್ತರು ಗೌರವ್ ಗುಪ್ತ, ವಲಯ ಆಯುಕ್ತ ರವೀಂದ್ರ, ಜಂಟಿ ಆಯುಕ್ತರು ನರಸಿಂಹಮೂರ್ತಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.