ಬೆಂಗಳೂರು:
ಮುಂದಿನ 15 ದಿನಗಳಲ್ಲಿ ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಸುಮಾರು 5 ಲಕ್ಷ ನಾಗರಿಕರು ಕೋವಿಡ್ ಲಸಿಕೆ ಪಡೆಯಲಿದ್ದು , ಇದಕ್ಕಾಗಿ ಬಿಬಿಎಂಪಿ, ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ಹಾಗೂ ಸಚಿವರಾದ ಆರ್ ಅಶೋಕ್ ತಿಳಿಸಿದರು.
ಮಾರ್ಚ್ 1 ರ ವರೆಗೆ 45 ವರ್ಷಕ್ಕೂ ಮೇಲ್ಪಟ್ಟ 2.5 ಲಕ್ಷ ನಾಗರಿಕರು ಲಸಿಕೆ ಪಡೆದಿದ್ದು, ಇನ್ನುಳಿದ ಜನತೆಗೆ ಮುಂದಿನ 15 ದಿನಗಳಲ್ಲಿ ಲಸಿಕೆ ಹಾಕುವ ಗುರಿ ಹಾಕಿಕೊಂಡಿರುವುದಾಗಿ ವಿವರಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳೊಂದಿಗೆ ಬಿಬಿಎಂಪಿ ಹಾಗೂ ಖಾಸಗೀ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಕೋವಿಡ್-19 ನಿರ್ವಹಣೆ, ಲಸಿಕಾ ಅಭಿಯಾನದ ಪರಿಶೀಲನೆ ನಡೆಸಿದ ಸಂಸದ ತೇಜಸ್ವೀ ಸೂರ್ಯ ರವರು, ಪ್ರಧಾನಿ ನರೇಂದ್ರ ಮೋದಿಯವರ ‘ಲಸಿಕಾ ಉತ್ಸವ’ ಕರೆಯ ಅನ್ವಯ ಏಪ್ರಿಲ್ 11 ರಿಂದ 14ರ ವರೆಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ಲಸಿಕೆ ಹಾಕುವ ಮೂಲಕ ‘ಲಸಿಕಾ ಉತ್ಸವ’ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು. ಈ ಪರಿಶೀಲನಾ ಸಭೆಯಲ್ಲಿ ಬಸವನಗುಡಿ ಶಾಸಕರಾದ ರವಿ ಸುಬ್ರಹ್ಮಣ್ಯ, ವಿಜಯನಗರ ಶಾಸಕರಾದ ಎಂ ಕೃಷ್ಣಪ್ಪ, ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ಉಪಸ್ಥಿತರಿದ್ದರು.
![ಬೆಂಗಳೂರು ದಕ್ಷಿಣ ವಲಯಲ್ಲಿ 5 ಲಕ್ಷ ಕೋವಿಡ್-19 ಲಸಿಕೆ ಹಾಕುವ ಗುರಿ 1 R Ashoka and Tejasvi Surya](https://kannada.thebengalurulive.com/wp-content/uploads/2021/04/R-Ashoka-and-Tejasvi-Surya.jpg)
ಬೆಂಗಳೂರು ದಕ್ಷಿಣ ಬಿಬಿಎಂಪಿ ವಲಯದ 6 ವಿಧಾನಸಭಾ ಕ್ಷೇತ್ರಗಳಲ್ಲಿ 45 ವರ್ಷಕ್ಕೂ ಮೇಲ್ಪಟ್ಟ 7,49,946 ನಾಗರಿಕರಿದ್ದು,ಈಗಾಗಲೇ 2,44,510 ಜನ ಲಸಿಕೆ ಪಡೆದಿರುತ್ತಾರೆ. ಇನ್ನುಳಿದಿರುವ 5.5 ಲಕ್ಷ ನಾಗರಿಕರಿಗೆ ಮುಂಬರುವ15 ದಿನಗಳಲ್ಲಿ ಲಸಿಕೆ ಹಾಕುವ ನಿಟ್ಟಿನಲ್ಲಿ, ಆರ್ಥಿಕವಾಗಿ ಹಿಂದುಳಿದಿರುವ ಜನರಲ್ಲಿ ಅರಿವು ಮೂಡಿಸುವ ಅಗತ್ಯತೆ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಲಾಯಿತು.
ಖಾಸಗಿ ಅಸ್ಪತ್ರೆಗಳಲ್ಲಿ ಇದುವರೆಗೆ ಶೇ 80 ರಷ್ಟು ಪ್ರಮಾಣದ ಲಸಿಕೆ ಪಡೆದುಕೊಂಡಿದ್ದು, ಭಿತ್ತಿಪತ್ರ, ಆಟೋ ಧ್ವನಿವರ್ಧಕಗಳು, ಸಾರ್ವಜನಿಕ ಬೀದಿ ಬೀದಿ ಗಳಲ್ಲಿ ಸಾರ್ವಜನಿಕ ಪ್ರಚಾರದ ಮೂಲಕ ಲಸಿಕಾ ಅಭಿಯಾನದ ಕುರಿತಾಗಿ ಜನ ಜಾಗ್ರತಿ ಮೂಡಿಸಿ, ಸರ್ಕಾರಿ ಅಸ್ಪತ್ರೆಗಳಲ್ಲೂ ಕೂಡ ಲಸಿಕಾ ಪ್ರಮಾಣ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕುರಿತಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
![ಬೆಂಗಳೂರು ದಕ್ಷಿಣ ವಲಯಲ್ಲಿ 5 ಲಕ್ಷ ಕೋವಿಡ್-19 ಲಸಿಕೆ ಹಾಕುವ ಗುರಿ 2 covid meeting in Pai Vista convention Hall Copy](https://kannada.thebengalurulive.com/wp-content/uploads/2021/04/covid-meeting-in-Pai-Vista-convention-Hall-Copy.jpg)
ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಗಳು, ಎನ್ ಜಿ ಓ ಗಳು ಹಾಗೂ ಇತರರಲ್ಲಿ ಮನವಿ ಮಾಡಿ, ಲಸಿಕಾ ಅಭಿಯಾನಕ್ಕೆ ಸಹಕಾರ ಒದಗಿಸುವಂತೆ ಕೋರಿದ ಸಂಸದ ತೇಜಸ್ವೀ ಸೂರ್ಯ ರವರು, ಎಲ್ಲ ಶಾಸಕರು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಗಳು ಹಾಗೂ ಇತರ ಎನ್ ಜಿ ಓ ಗಳೊಂದಿಗೆ ಈ ಕುರಿತು ಗಮನಹರಿಸುವವಂತೆ ಸಂಸದರು ಮನವಿ ಮಾಡಿದರು.
ಪ್ರಯಾಣದಿಂದ (ಶೇ 34.1 ಪ್ರಮಾಣ ಮಾರ್ಚ್ ತಿಂಗಳಿನಲ್ಲಿ) ಬಿಬಿಎಂಪಿ ದಕ್ಷಿಣ ವಲಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸೋಂಕು ಪಸರಿಸಲು ಬಹುಮುಖ್ಯ ಕಾರಣ ಎನ್ನುವುದು ಬಿಬಿಎಂಪಿ ಅಭಿಪ್ರಾಯ ವಾಗಿದ್ದು, ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಇತರ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ, ಹೋಮ್ ಗಾರ್ಡ್ಸ್ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತೇಜಸ್ವೀ ಸೂರ್ಯ ರವರು ವಿವರಿಸಿದರು.
![ಬೆಂಗಳೂರು ದಕ್ಷಿಣ ವಲಯಲ್ಲಿ 5 ಲಕ್ಷ ಕೋವಿಡ್-19 ಲಸಿಕೆ ಹಾಕುವ ಗುರಿ 3 covid meeting in Pai Vista convention Hall 1 Copy](https://kannada.thebengalurulive.com/wp-content/uploads/2021/04/covid-meeting-in-Pai-Vista-convention-Hall-1-Copy-1024x682.jpg)
ನಂತರ ಮಾತನಾಡಿದ ಕಂದಾಯ ಸಚಿವರಾದ ಆರ್ ಅಶೋಕ್ ರವರು, ಬೆಂಗಳೂರು ದಕ್ಷಿಣ ವಲಯದಲ್ಲಿ ಪ್ರತಿನಿತ್ಯ 35,000 ಜನರು ಲಸಿಕೆ ಪಡೆಯಬಹುದಾಗಿದ್ದು, ಇದರ ಪ್ರಮಾಣವನ್ನು 70,000 ಕ್ಕೆ ಏರಿಸಲು ಕ್ರಮ ಕೈಗೊಂಡು, ಇದಕ್ಕೆ ತಕ್ಕಂತೆ ಲಸಿಕಾ ಕೇಂದ್ರಗಳನ್ನು ಕೂಡ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ದೊಡ್ಡ ಪ್ರಮಾಣದ ಸಭೆಗಳು, ಕಾರ್ಯಕ್ರಮಗಳು, ಹೆಚ್ಚಿನ ಜನ ಸೇರುವ ಮದುವೆ ಕಾರ್ಯಕ್ರಮಗಳು ಹಾಗೂ ಮುಂಬರಲಿರುವ ಹಬ್ಬಗಳಲ್ಲಿ ಸೇರುವ ಜನರ ಕುರಿತು ನಿಗಾ ಇರಿಸುವಂತೆ ಸಚಿವರಾದ ಆರ್ ಅಶೋಕ್ ರವರು ಪೊಲೀಸ್ ಇಲಾಖೆಗೆ ಸೂಚಿಸಿದರು.
ಈ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ, ಪಂಕಜ್ ಕುಮಾರ್ ಪಾಂಡೆ, ರಾಜೇಂದ್ರ ಚೋಳನ್ ತುಳಸಿ ಮದ್ದಿನೇನಿ ಹಾಜರಿದ್ದರು.