ಚಾಮರಾಜನಗರ:
ಜಿಲ್ಲೆಯ ಸರ್ವಾಂಗೀಣ ಅಭೀವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ನಮ್ಮ ಸರ್ಕಾರ ಬದ್ದವಾಗಿದೆ. ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡಿದ್ದೇವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು. ಅವರು ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕುಂದುಕೊರತೆ ಆಲಿಸಿದರು.
ಚಾಮರಾಜನಗರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಅವಿರತ ಶ್ರಮಿಸುತ್ತಿದೆ. ಮುಖ್ಯಮಂತ್ರಿಗಳು ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ ಎಂದು ಸಚಿವ ನಾರಾಯಣಗೌಡ ಹೇಳಿದರು. ಅಲ್ಲದೆ ಜಿಲ್ಲೆಯ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಕೋರೊನಾ ಸಂದರ್ಭದಲ್ಲಿ ಮಾಡಿದ ಸಮಾಜ ಸೇವೆ ಶ್ಲಾಘನೀಯ. ಕೊರೊನಾ ವಾರಿಯರ್ಸ್ ರೀತಿಯಲ್ಲಿ ಕೆಲಸ ಮಾಡಿದ್ದು ಸ್ಮರಣೀಯ. ಇದಕ್ಕಾಗಿ ಪಕ್ಷದ ಎಲ್ಲ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ. ಕೇಂದ್ರ ಸರ್ಕಾರದ ಎರಡನೆ ಅವಧಿಯ ಎರಡನೇ ವರ್ಷಾಚರಣೆಯನ್ನು ಸೇವಾ ಹಿ ಸಂಘಟನ್ ಎಂಬ ಘೋಷವಾಖ್ಯದಲ್ಲಿ ಎಲ್ಲರು ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ರೀತಿ ಸಮಾಜ ಸೇವೆ ಮುಂದುವರಿಸಿಕೊಂಡು, ಜಿಲ್ಲೆಯ ಎಲ್ಲ ಪ್ರಮುಖರ ಸಾರಥ್ಯದಲ್ಲಿ ಎಲ್ಲ ನಾಲ್ಕೂ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಬೇಕು. ಪಕ್ಷ ತಾಯಿ ಇದ್ದಂತೆ, ಪಕ್ಷಕ್ಕೆ ನಿಷ್ಟರಾಗಿ ಕೆಲಸ ಮಾಡಬೇಕು. ನಿಷ್ಟಾವಂತರನ್ನ ಗುರುತಿಸುವ ಕಾರ್ಯವನ್ನು ನಮ್ಮ ಪಕ್ಷ ಮಾತ್ರ ಮಾಡುತ್ತದೆ. ಕಾರ್ಯಕರ್ತರೇ ಪಕ್ಷದ ಶಕ್ತಿ. ಬಿಜೆಪಿಯಲ್ಲಿ ಮಾತ್ರ ಇಂತಹ ಕಾರ್ಯಕರ್ತರು ಇರಲು ಸಾಧ್ಯ ಎಂದು ಸಚಿವರು ಹೇಳಿದರು.

ಕ್ರೀಡಾ ಕ್ಷೇತ್ರದಲ್ಲೂ ಜಿಲ್ಲೆಗೆ ಆಗಬೇಕಾದ ಕೆಲಸದ ಬಗ್ಗೆ ಶಾಸಕರು ತಿಳಿಸಬೇಕು. ಪ್ರತಿ ತಾಲ್ಲೂಕಿನಲ್ಲೂ ಸುಸಜ್ಜಿತ ಕ್ರೀಡಾಂಗಣ ಇರಬೇಕು. ಈಗಾಗಲೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗು ಪತ್ರ ಬರೆದು, ಕ್ರೀಡಾಂಗಣ ಇಲ್ಲದ ತಾಲ್ಲೂಕಿನಲ್ಲಿ ನಿವೇಶನ ಗುರುತಿಸಲು ಮನವಿ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ನಿರಂಜನ್ ಕುಮಾರ್, ಜನರಲ್ ಸೆಕ್ರೇಟ್ರಿ ನಾಗಶ್ರೀ, ನಗರ ಅಧ್ಯಕ್ಷ ರಾಜು, ಗ್ರಾಮೀಣ ಅಧ್ಯಕ್ಷ ಬಸವಣ್ಣ , ನಗರಸಭೆ ಸದಸ್ಯೆ ಆಶಾ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.