Home ರಾಜಕೀಯ ಬಿಜೆಪಿ ತತ್ವ, ಸಿದ್ಧಾಂತದ ಆಧಾರದಲ್ಲಿ ಬೆಳೆದ ಪಕ್ಷ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಬಿಜೆಪಿ ತತ್ವ, ಸಿದ್ಧಾಂತದ ಆಧಾರದಲ್ಲಿ ಬೆಳೆದ ಪಕ್ಷ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

65
0
CT Ravi talking to media at party office

ಬೆಂಗಳೂರು:

ಭಾರತೀಯ ಜನತಾ ಪಕ್ಷವು ತತ್ವ ಹಾಗೂ ಸಿದ್ಧಾಂತದ ಆಧಾರದಲ್ಲಿ ಬೆಳೆದುಬಂದ ಪಕ್ಷ. ಎಲ್ಲಾ ಮತ ಸಂಪ್ರದಾಯಗಳನ್ನೂ ಒಳಗೊಂಡ ಪಕ್ಷ ನಮ್ಮದು. ಪಕ್ಷಕ್ಕೆ ಮಠಾಧೀಶರ ಆಶೀರ್ವಾದ ಸದಾ ಇರಬೇಕು ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ ಅವರು ತಿಳಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಹುಟ್ಟಿನ ಕಾರಣಕ್ಕೆ ಯಾರೂ ಕನಿಷ್ಠರಲ್ಲ. ಯಾರೂ ಶ್ರೇಷ್ಠರಾಗಲು ಸಾಧ್ಯವಿಲ್ಲ. ನಮ್ಮ ಬದುಕಿನ ರೀತಿಯ ಕಾರಣಕ್ಕೆ ನಮ್ಮ ಸಮಾಜ ವ್ಯವಸ್ಥೆ ನಮ್ಮನ್ನು ಆರಾಧಿಸುತ್ತದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.

ಪಕ್ಷಕ್ಕೆ ಒಬ್ಬೊಬ್ಬರೇ ಶಾಸಕ, ಸಂಸದ ಇದ್ದಾಗ ನನ್ನಂಥ ಸಾವಿರಾರು ಜನ ಪಕ್ಷದ ಧ್ಯೇಯ- ಸಿದ್ಧಾಂತಕ್ಕಾಗಿ ಮತ್ತು ಪಕ್ಷಕ್ಕಾಗಿ ದುಡಿದಿದ್ದಾರೆ. ಅಧಿಕಾರ ಸಿಕ್ಕಿದ ಬಳಿಕ ನಮ್ಮ ಹಿಂದೆ ಜಾತಿ ಬರುತ್ತದೆ. ಬೀದಿಯಲ್ಲಿ ಹೊಡೆದಾಟ ಮಾಡುವಾಗ, ಹೋರಾಟ ಮಾಡುವಾಗ ಮತ್ತು ಜೈಲಿಗೆ ಹೋಗುವ ವೇಳೆ ನಮ್ಮ ಜೊತೆಗಿದ್ದವರು ಕೇವಲ ಕಾರ್ಯಕರ್ತರು. ಹಾಗಾಗಿ ಕಾರ್ಯಕರ್ತರ ಆಶಯಕ್ಕೆ ತಕ್ಕಂತೆ ನಮ್ಮ ಪಕ್ಷವು ಎಲ್ಲಾ ಜಾತಿಯವರನ್ನು ಒಳಗೊಂಡು ಮುನ್ನಡೆಯುತ್ತದೆ. ರಾಜಕಾರಣದಲ್ಲಿ ಜಾತಿಯ ಪ್ರಭಾವ ಇರುತ್ತದೆ. ಆದರೆ, ಒಂದೇ ಜಾತಿಯಿಂದ ಚುನಾವಣೆ ಗೆಲ್ಲಲು ಅಸಾಧ್ಯ. ಭಾರತೀಯ ಸಮಾಜ ವ್ಯವಸ್ಥೆ ನೀತಿಯನ್ನು ಗುರುತಿಸಿದೆ. ರಾವಣ ಹುಟ್ಟಿನಿಂದ ಮಹಾ ಬ್ರಾಹ್ಮಣ. ಆದರೂ, ಬಹುತೇಕ ಬ್ರಾಹ್ಮಣರ ಮನೆಗಳಲ್ಲಿ ಪೂಜೆಗೆ ಒಳಗೊಳ್ಳುವವನು ರಾವಣನನ್ನು ಹತ್ಯೆ ಮಾಡಿದ ಶ್ರೀರಾಮ ಎಂದು ವಿವರಿಸಿದರು.

ಪಕ್ಷದ ಬೆಳವಣಿಗೆಗೆ ನೂರಾರು ಜನ ವಿವಿಧ ಜಾತಿಯ, ಸಮುದಾಯಗಳ ಮಠಾಧೀಶರು ಬೆಂಬಲಿಸಿದ್ದಾರೆ. ನಾವು ಚುನಾವಣೆಯಲ್ಲಿ ಗೆಲ್ಲಲು ಅವರ ಆಶೀರ್ವಾದ- ಬೆಂಬಲ ಕಾರಣವಾಗಿದೆ. ಇದೇ ಕಾರಣಕ್ಕೆ ಪಕ್ಷದ 104 ಶಾಸಕರು ಗೆದ್ದಿದ್ದಾರೆ. ಮತ್ತೆ ನಡೆದ ಉಪ ಚುನಾವಣೆಯಲ್ಲೂ ಪಕ್ಷ ಗೆದ್ದು ಬಂದಿದೆ. ಇದಕ್ಕಾಗಿ ಆ ಎಲ್ಲಾ ಮಠಾಧಿಪತಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಬೆಂಬಲ ಮತ್ತು ಆಶೀರ್ವಾದ ನಮ್ಮ ಪಕ್ಷಕ್ಕೆ ಬೇಕು. ಆದರೆ, ನಮ್ಮ ಪಕ್ಷಕ್ಕೆ ಜಾತಿ ಇಲ್ಲ; ಪಕ್ಷವು ಜಾತಿ ಕೇಂದ್ರಿತವಲ್ಲ. ಪಕ್ಷಕ್ಕೆ ಸಿದ್ಧಾಂತ ಇದೆ. ಆ ಸಿದ್ಧಾಂತದಿಂದ ಪಕ್ಷ ಬೆಳೆದಿದೆ ಎಂದು ತಿಳಿಸಿದರು.

ನಮ್ಮ ಪಕ್ಷವು ಭ್ರಷ್ಟಾಚಾರದ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದೆ. ಪ್ರಧಾನಮಂತ್ರಿಯವರೂ “ಮೈ ನಹೀ ಖಾವೂಂಗಾ, ನ ಖಾನೆ ದೂಂಗಾ” ಎಂದಿದ್ದಾರೆ. ಅದೇ ವಿಚಾರಧಾರೆ ಪಕ್ಷದ್ದಾಗಿದೆ. ಆರೋಪಗಳು ಸಾಬೀತಾದಾಗ ಮಾತ್ರ ಅದು ಅಪರಾಧವಾಗುತ್ತದೆ. ಎಲ್ಲಾ ಆರೋಪಗಳೂ ಅಪರಾಧವಾಗಿರುವುದಿಲ್ಲ. ನನಗೆ ಪ್ರಾಥಮಿಕ ಮಾಹಿತಿಯೂ ಇಲ್ಲದೆ ಇಲ್ಲೇ ತೀರ್ಪು ನೀಡಲು ಅಸಾಧ್ಯ. ವಿಷಯದ ಅಧ್ಯಯನ ಮಾಡದೆ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದ ಹಿತಾಸಕ್ತಿಯನ್ನು ಆಧರಿಸಿ, ಪಕ್ಷದ ಬೆಳವಣಿಗೆಯನ್ನೂ ಆಧರಿಸಿ ಆಗುಹೋಗುಗಳ ಬಗ್ಗೆ ಕೋರ್ ಕಮಿಟಿ ಚರ್ಚೆ ಮಾಡಲಿದೆ. ಪಕ್ಷ ಹಿತ ಮತ್ತು ರಾಜ್ಯದ ಹಿತವನ್ನು ಗಮನದಲ್ಲಿ ಇಟ್ಟುಕೊಡು ನಾವು ಚರ್ಚೆ ನಡೆಸಲಿದ್ದೇವೆ. ಆದರೆ, ಎಲ್ಲಾ ವಿಷಯಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲು ಅಸಾಧ್ಯ ಎಂದರು.

ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಪಕ್ಷ ಸಲಹೆ ನೀಡಬಹುದೇ ಹೊರತು ಅಂತಿಮ ಅಧಿಕಾರ ಇರುವುದು ಮುಖ್ಯಮಂತ್ರಿಗಳಿಗೇ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

LEAVE A REPLY

Please enter your comment!
Please enter your name here