Cauvery Water to Tamil Nadu | ಶುಕ್ರವಾರದ ಕರ್ನಾಟಕ ಬಂದ್ ಯಶಸ್ವಿಯಾಗಲಿದೆ: ಕನ್ನಡಪರ ಸಂಘಟನೆಗಳ ವಿಶ್ವಾಸ
ಬೆಂಗಳೂರು:
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಶುಕ್ರವಾರ (ಸೆ.29 ರಂದು) ಬಂದ್ ಗೆ ಕರೆ ನೀಡಿದ್ದು, ಬಂದ್ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿವೆ.
ಸರ್ಕಾರ ಏನಾದರೂ ಬಂದ್ ನ್ನು ಮೊಟಕುಗೊಳಿಸಲು ಯತ್ನಿಸುವುದರ ವಿರುದ್ಧ ಸಂಘಟನೆಗಳು ಎಚ್ಚರಿಕೆ ನೀಡಿವೆ. 6 ರಿಂದ ಸಂಜೆ 6 ವರೆಗೆ ಬಂದ್ ಇರಲಿದ್ದು, ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ಎಲ್ಲಾ ವರ್ಗಗಳ ಜನರು ಬಂದ್ ನಲ್ಲಿ ಭಾಗಿಯಾಗಲಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ.
ಬಂದ್ ಗೆ ಕರೆ ನೀಡುತ್ತಿರುವುದು ಇಡೀ ಕರ್ನಾಟಕಕ್ಕೆ ಅನ್ವಯವಾಗಲಿದೆ ಹೆದ್ದಾರಿ, ಟೋಲ್ ಗೇಟ್, ರೈಲು ಹಾಗೂ ವಿಮಾನ ನಿಲ್ದಾಣಗಳನ್ನೂ ಬಂದ್ ಮಾಡುವುದಾಗಿ ಒಕ್ಕೂಟ ಹೇಳಿದೆ.
ರೈತರು ಹಾಗೂ ಕನ್ನಡ ಸಂಘಟನೆಗಳ ಒಕ್ಕೂಟವಾಗಿರುವ ಕರ್ನಾಟಕ ಜಲ ಸಂರಕ್ಷಣ ಸಮಿತಿ ಕರೆ ನೀಡಿರುವ ಬಂದ್ ಗೆ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲ ನೀಡಿವೆ. ಸೆ.26 ರಂದು (ಮಂಗಳವಾರ) ಕರೆ ನೀಡಲಾಗಿದ್ದ ಬೆಂಗಳೂರು ಬಂದ್ ಗೆ ಕನ್ನಡ ಒಕ್ಕೂಟ ಬೆಂಬಲ ಘೋಷಿಸಿರಲಿಲ್ಲ. ಶುಕ್ರವಾರದ ಬಂದ್ ಗೆ 1,900 ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿವೆ.
