ಬೆಂಗಳೂರು:
ರಾಜ್ಯದಲ್ಲಿ ಕೊರೋನಾ ಎರಡನೆ ಅಲೆಯ ಅರ್ಬಟ ನಿಯಂತ್ರಣ ಕುರಿತಂತೆ ನಾಳೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ ಅವರು ಮಂಗಳವಾರ ವಿಧಾನಸಭೆಯ ಉಭಯ ಸದನಗಳ ಮುಖಂಡರೊಂದಿಗೆ ಕೊರೋನಾ ಎರಡನೆ ಅಲೆಯ ಅರ್ಬಟ ಪರಿಸ್ಥಿತಿ ಚರ್ಚಿಸಲು ಸಂಜೆ 4.30 ಕ್ಕೆ ನಿಗದಿಯಾಗಿದ್ದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.
![ಕೊರೋನಾ: ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಾಳೆ ಸರ್ವಪಕ್ಷಗಳ ಸಭೆ 1 Screenshot 131](https://kannada.thebengalurulive.com/wp-content/uploads/2021/04/Screenshot_131.jpg)
ಸಿಎಂ ಈ ಹಿಂದೆ ಭಾನುವಾರ ವಿರೋಧ ಪಕ್ಷದ ಮುಖಂಡರೊಂದಿಗೆ ಸಭೆ ಕರೆದಿದ್ದರು, ಆದರೆ ಯಡಿಯೂರಪ್ಪ ಅವರು ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಮುಖಂಡರ ಸಭೆಯನ್ನು ರದ್ದುಗೊಳಿಸಲಾಗಿತ್ತು.
ಏಪ್ರಿಲ್ 14 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ವೆಂಕಯ್ಯ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ರಾಜ್ಯಪಾಲ ವಾಲಾ ಭಾಗವಹಿಸಿದ್ದರು ಮತ್ತು ಎಲ್ಲಾ ರಾಜ್ಯಗಳ ರಾಜ್ಯಪಾಲರು ಭಾಗವಹಿಸಿ, ಕೋವಿಡ್ ಪರಿಸ್ಥಿತಿ ಮತ್ತು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಚಾಲನೆಯ ಪ್ರಗತಿಯನ್ನು ಚರ್ಚಿಸಿದರು.