ಬೆಂಗಳೂರು:
ಹೈಕಮಾಂಡ್ ನಿಂದ ಇದುವರೆಗೂ ಯಾವುದೇ ಸಂದೇಶ ಬಂದಿಲ್ಲ, ರಾತ್ರಿ ಅಥವಾ ನಾಳೆ ಸಂದೇಶ ಬರಲಿದ್ದು, ಯಾವ ಸೂಚನೆ ನೀಡುತ್ತಾರೋ ಅದನ್ನು ಪಾಲಿಸುತ್ತೇನೆ, ಕೊನೆ ಕ್ಷಣದವರೆಗೂ ನಾನು ಕೆಲಸ ಮಾಡಿಕೊಂಡಿರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಪ್ರವಾಸದಿಂದ ಅಧಿಕೃತ ನಿವಾಸ ಕಾವೇರಿಗೆ ಮರಳಿದ ಸಿಎಂ, ಇದುವರೆಗೂ ಹೈಕಮಾಂಡ್ ನಿಂದ ಸಂದೇಶ ಬಂದಿಲ್ಲ, ನಾಳೆ ಸಾಧನಾ ಸಮಾವೇಶದಲ್ಲಿ ನಮ್ಮ ಸರ್ಕಾರದ ಸಾಧನೆ ಬಗ್ಗೆ ಮಾತನಾಡಲಿದ್ದೇನೆ, ಕಾರವಾರ ಪ್ರವಾಸದ ಬಗ್ಗೆಯೂ ನಾಳೆ ತೀರ್ಮಾನ ಮಾಡಲಿದ್ದೇನೆ ಎಂದರು.
ಕೊನೆ ನಿಮಿಷದವರೆಗೂ ಕೆಲಸ ಮಾಡಲು ತೀರ್ಮಾನ ಮಾಡಿದ್ದೇನೆ. ಯಾವಾಗ ರಾಜೀನಾಮೆ ಕೇಳುತ್ತಾರೋ ಆಗ ಕೊಡಲು ಸಿದ್ದನಿದ್ದೇನೆ, ಇದುವರೆಗೂ ಸಂದೇಶ ಬಂದಿಲ್ಲ, ಬಂದ ತಕ್ಷಣ ಮುಂದುವತೆಯಿರಿ ಅಂದರೆ ಮುಂದುವತೆಯುತ್ತೇನೆ ಇಲ್ಲ, ಪಕ್ಷದಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ, ಇಂದು ರಾತ್ರಿ ಅಥವಾ ನಾಳೆ ಗೊತ್ತಾಗಲಿದೆ ಎಂದರು.