ಬೆಂಗಳೂರು:
ರಾಜ್ಯದಲ್ಲಿ ಮುಂದಿನ ರಾಜ್ಯರಾಜಕಾರಣ ಉಳಿಯಲು ಜೆಡಿಎಸ್ ಪಕ್ಷದ ಅವಶ್ಯಕತೆಯಿದ್ದು, 2023 ರಲ್ಲಿ ಜನತಾದಳದ ಟಾರ್ಗೆಟ್ ಮಿಷನ್ 123 ಇದನ್ನು ಕಾದು ನೋಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.
ಗುಲ್ಬರ್ಗಾ ಮತ್ತು ಬಳ್ಳಾರಿ ಜಿಲ್ಲೆಯಲ್ಲಿನ ಕಾರ್ಪೋರೇಷನ್ ಚುನಾವಣೆ ಹಿನ್ನಲೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಪಕ್ಷದ ಮುಖಂಡರೊಂದಿಗೆ ಪಕ್ಷ ಸಂಘಟನೆ ಸಂಬಂಧ ಗುರುವಾರ ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನು ಹಳೆ ಕರ್ನಾಟಕದಲ್ಲಿ ಮುಗಿಸೇಬಿಟ್ಟಿದ್ದೇವೆ ಎಂದವರೀಗ ಜೆಡಿಎಸ್ ನೆರಳಿನಲ್ಲಿ ರಾಜಕಾರಣ ಮಾಡಬೇಕಾದಂತಹ ಅನಿವಾರ್ಯತೆ ಈಗ ಎದುರಾಗಿದೆ.ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ನಿಂದ ಭೀತಿ ಶುರುವಾಗಿದೆ. ಜೆಡಿಎಸ್ ಪಕ್ಷದಿಂದಲೇ ಮುಂದಿನ ರಾಜ್ಯರಾಜಕಾರಣ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆ ಕರ್ನಾಟಕ ಭಾಗದಲ್ಲಿಯೇ ಜೆಡಿಎಸ್ ಅನ್ನು ಮುಗಿಸಿಬಿಟ್ಟಿದ್ದೇವೆ. ಈಗಿನ ಬಿಜೆಪಿ ಸರ್ಕಾರ ಉಳಿಯಲು ಸರ್ಕಾರದ ರಕ್ಷಣೆಗೆ ಜೆಡಿಎಸ್ ನ ಸಹಕಾರದ ಹೆಸರು ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷವಿದೆ ಎನ್ನುವ ಗುಮ್ಮವನ್ನು ಮುಂದೆ ಬಿಟ್ಟು ಈಗ ಸರ್ಕಾರವನ್ನು ಉಳಿಸಲು ಜೆಡಿಎಸ್ ನೆರಳನ್ನು ಆಶ್ರಯಿಸುತ್ತಿದ್ದಾರೆಂದು ಸೂಚ್ಯವಾಗಿ ಹೇಳಿದರು.
ಪ್ರಾದೇಶಿಕ ನೆಲಗಟ್ಟನ್ನು ಹೊಂದಿರುವ ಜೆಡಿಎಸ್ ಪಕ್ಷ ಇದಾಗಿದ್ದು, ಚಂದ್ರಬಾಬು ನಾಯುಡು ದೇವೇಗೌಡರು ಪ್ರಧಾನಿಯಾಗಿದ್ದಾಗ ನೀಡಿದ ಬೆಂಬಲ ಹಿಂಪಡೆಯಲು ಬೆದರಿಕೆ ಹಾಕಿದ್ದರ ಬಗ್ಗೆ ಈಗ ಪತ್ರಿಕೆಗಳಲ್ಲಿ ಚರ್ಚೆಯಾಗುತ್ತಿದೆ. ದೇವೇಗೌಡರಿಗೂ ಜನತಾದಳಕ್ಕೂ ಕಾಂಗ್ರೆಸ್ ಬಿಜೆಪಿಗೂ ಇರುವ ವ್ಯತ್ಯಾಸವೇನು ಎನ್ನುವುದನ್ನು ಉತ್ತರ ಕರ್ನಾಟಕದ ಜನರು ಅರ್ಥಮಾಡಿಕೊಳ್ಳಬೇಕು.ಬೆಂಗಳೂರಿಗರಿಗೆ ಕುಡಿಯಲು ಕಾವೇರಿ ನೀರು ನೀಡಿದ್ದು ದೇವೇಗೌಡರು ನೀಡಿದ ಕೊಡುಗೆಯೇ ಹೊರತು ಕಾಂಗ್ರೆಸ್, ಬಿಜೆಪಿಯಾಗಲೀ ಅಲ್ಲ. ಕರ್ನಾಟಕ ಜನರು ತಮ್ಮ ಶಕ್ತಿ ಎಲ್ಲಿದೆ ಎನ್ನುವುದನ್ನು ಅರಿಯಬೇಕು. ಜನರು ಬುದ್ಧಿವಂತರಾಗದೇ ಇದ್ದರೆ ರಾಜ್ಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಆಗುತ್ತಿರುವ ಅವಮಾನವನ್ನು ಕಾಪಾಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.