ಹಾವೇರಿ (ಹಿರೇಕೆರೂರು):
ಅನಿಶ್ಚಿತತೆಯಲ್ಲಿ ಬದುಕುತ್ತಿರುವ ರೈತರನ್ನು ಸಶಕ್ತಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು “ವಿಕ ಸೂಪರ್ ಸ್ಟಾರ್ ರೈತ – 2021” ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವರು ಕಾರ್ಮಿಕನ ಶ್ರಮದಲ್ಲಿದ್ದಾನೆ, ರೈತನ ಬೆವರಿನಲ್ಲಿದ್ದಾನೆ ಎಂದು ಕವಿ ರವೀಂದ್ರ ಟ್ಯಾಗೋರ್ ಎಂದಿದ್ದರು. ಇದು ನಮ್ಮ ರಾಷ್ಟ್ರದ ರೈತರ ಬಗೆಗೆ ಇರುವ ಗೌರವ. ಕೃಷಿ ಕ್ಷೇತ್ರದಲ್ಲಿ ವಿವಿಧ ಸಂಶೋಧನೆ, ಹೊಸ ತಳಿಗಳು ಬೆಳವಣಿಗೆಗಳು ಆಗಿದೆ. ರೈತರ ಶ್ರಮದಿಂದ ಹಸಿರು ಕ್ರಾಂತಿ ಸಾಧ್ಯವಾಯಿತು. ಇದರಿಂದ ಆಹಾರ ಸುರಕ್ಷತೆ ಸಾಧಿಸುವ ಮೂಲಕ ಭಾರತ ಸ್ವಾವಲಂಬಿ ದೇಶವಾಗಲು ಸಾಧ್ಯವಾಗಿದೆ. ಕೃಷಿ ಕಾಲಕಾಲಕ್ಕೆ ಅಭಿವೃದ್ಧಿ ಹೊಂದಿದಂತೆ ರೈತ ಅಭಿವೃದ್ಧಿ ಹೊಂದುತ್ತಿಲ್ಲ. ವಿವಿಧ ದೇಶಗಳಿಂದ ಬರುವ ಕೃಷಿ ಉತ್ಪನ್ನಗಳ ಜೊತೆ ತಾವು ಬೆಳೆದ ಉತ್ಪನ್ನಗಳಿಂದ ಪೈಪೋಟಿ ನೀಡಲು ರೈತರಿಗೆ ಆಗುತ್ತಿಲ್ಲ. ರೈತರನ್ನು ಸಬಲರಾಗಬೇಕಾದರೆ ಅವರ ಅವಲಂಬಿತರನ್ನು ಸಬಲರನ್ನಾಗಿಸಬೇಕಿದೆ. ರೈತರ ಮಕ್ಕಳಿಗೆ ಶಿಕ್ಷಣ ಒದಗಿಸಲು ರೈತ ವಿದ್ಯಾನಿಧಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.