Home ಆರೋಗ್ಯ ಕರ್ನಾಟಕಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ – ಸದಾನಂದ ಗೌಡ

ಕರ್ನಾಟಕಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ – ಸದಾನಂದ ಗೌಡ

32
0

ಕೇಂದ್ರದಿಂದ ರಾಜ್ಯಗಳಿಗೆ ನಿಷ್ಪಕ್ಷಪಾತವಾಗಿ ಕೊವಿಡ್ ಸಂಪನ್ಮೂಲ ಹಂಚಿಕೆ

ಸಹಜ ಸ್ಥಿತಿಯತ್ತ ಕೋವಿಡ್ ಔಷಧಗಳ ಸರಬರಾಜು

ಬೆಂಗಳೂರಿನಲ್ಲಿ ಕೋವಿಡ್ ಕೇಂದ್ರಗಳಿಗೆ ಸಚಿವರ ಭೇಟಿ

ಬೆಂಗಳೂರು:

ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ 23 ಲಕ್ಷ ವಯಲ್ಸ್ (ಸೀಸೆ) ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ ಈ ಸಲ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಒದಗಿಸಲಾಗಿದೆ.

ಇಂದು ಇಲ್ಲಿ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ಕರ್ನಾಟಕದಲ್ಲಿರುವ ಅತಿಹೆಚ್ಚು ಸಕ್ರೀಯ ಪ್ರಕರಣವನ್ನು ಆಧರಿಸಿ ರಾಜ್ಯಕ್ಕೆ ಈ ವಾರ ಅತಿಹೆಚ್ಚು ರೆಮ್ಡೆಸಿವಿರ್ ಚುಚ್ಚುಮದ್ದು ಒದಗಿಸಲಾಗಿದೆ. ಏಪ್ರಿಲ್ 21ರಿಂದ ಇದುವರೆಗೆ ಕೇಂದ್ರವು ಒಟ್ಟು 76 ಲಕ್ಷ ವಯಲ್ಸ್ ಹಂಚಿಕೆ ಮಾಡಿದ್ದು ರಾಜ್ಯಕ್ಕೆ 10 ಲಕ್ಷ ವಯಲ್ಸ್ ಲಭ್ಯವಾಗಿದೆ ಎಂದರು.

ಉಳಿದಂತೆ, ಈ ವಾರದ ಬಳಕೆಗಾಗಿ ಮಹಾರಾಷ್ಟ್ರಕ್ಕೆ 3.35 ಲಕ್ಷ, ತಮಿಳುನಾಡಿಗೆ 1.45 ಲಕ್ಷ, ಆಂಧ್ರ ಪ್ರದೇಶಕ್ಕೆ 1.4 ಲಕ್ಷ, ಉತ್ತರಪ್ರದೇಶಕ್ಕೆ 1.3 ಲಕ್ಷ, ರಾಜಸ್ಥಾನಕ್ಕೆ 1.28 ಲಕ್ಷ ಹಾಗೂ ಗುಜರಾತಿಗೆ 91 ಸಾವಿರ ರೆಮ್ಡೆಸಿವಿರ್ ವಯಲ್ಸ್ ಹಂಚಲಾಗಿದೆ. ಉಳಿದ ರಾಜ್ಯಗಳಿಗೂ ಸಕ್ರಿಯ ಕೋವಿಡ್ ಪ್ರಕರಣಗಳನ್ನು ಆಧರಿಸಿಯೇ ಈ ಔಷಧದ ಪ್ರಮಾಣವನ್ನು ನಿಗದಿಪಡಿಸಲಾಗಿದೆ ಎಂದು ಫಾರ್ಮಾ ಸಚಿವರೂ ಆಗಿರುವ ಸದಾನಂದ ಗೌಡ ತಿಳಿಸಿದರು.

ವಿದೇಶಗಳಿಂದಲೂ ನೆರವಿನ ರೂಪದಲ್ಲಿ ಔಷಧ, ಆಮ್ಲಜನಕ ಸಿಲಿಂಡರ್, ವಂಟಿಲೇಟರ್ ಮುಂತಾದ ವಸ್ತುಗಳು ಭಾರತಕ್ಕೆ ಹರಿದುಬರುತ್ತಿದ್ದು ಈ ಪೈಕಿ ಹೊಸದಾಗಿ 40,000 ವಯಲ್ಸ್ ರೆಮ್ಡೆಸಿವಿರ್ ಬಂದಿದೆ. ರೆಮ್ಟೆಸಿವಿರ್ ಚುಚ್ಚುಮದ್ದೇ ಇರಲಿ ಅಥವಾ ಪ್ರಾಣವಾಯು ಆಮ್ಲಜನಕವೇ ಇರಲಿ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಲಭ್ಯವಿರುವ ಕೋವಿಡ್ ಸಂಪನ್ಮೂಲವನ್ನು ಎಲ್ಲ ರಾಜ್ಯಗಳಿಗೂ ಅತ್ಯಂತ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ವಿತರಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

ರೆಮ್ಡೆಸಿವಿರ್ ಸೇರಿದಂತೆ ಕೆಲವೊಂದು ಮಾತ್ರೆಗಳು ಕೊರೊನಾ ಬಂದವರೆಲ್ಲ ತೆಗೆದುಕೊಳ್ಳುವಂತಹುದಲ್ಲ. ಯಾರಿಗೆ ಅಗತ್ಯವಿದೆ ಎಂಬುದುನ್ನು ವೈದ್ಯರು ನಿರ್ಧರಿಸುತ್ತಾರೆ ಮತ್ತು ಅಗತ್ಯವಾದ ಪ್ರಮಾಣದಲ್ಲಿ ಅದು ದೇಶದಲ್ಲಿ ಲಭ್ಯವಿದೆ. ಬಹುತೇಕ ಸೋಂಕಿತರಿಗೆ ಅದರ ಅಗತ್ಯವೇ ಬೀಳುವುದಿಲ್ಲ. ಮನೆಯಲ್ಲಿ ಸಂಗ್ರಹಿಸುವ ಮದ್ದೂ ಅದಲ್ಲ. ಹಾಗಾಗಿ ಜನರು ಮುಂದೆ ಬೇಕಾಗಬಹುದು ಎಂಬ ಹೆದರಿಕೆಯಿಂದ ಅನವಶ್ಯಕವಾಗಿ ಖರೀದಿಗೆ ಮೂಗಿಬೀಳಬಾರದು. ಇದರಿಂದ ನಿಜವಾಗಿಯೂ ಅಗತ್ಯ ಇರುವವರಿಗೆ ತೊಂದರೆಯಾಗುತ್ತದೆ. ಜನರ ಮನಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕೆಲವರು ಕೋವಿಡ್ ಔಷಧಗಳ ಕಾಳಸಂತೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಇದನ್ನು ತಡೆಯಲು ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ. ಸೀಮಿತವಾಗಿ ಲಭ್ಯವಿರುವ ಔಷಧಗಳ ಅತ್ಯಂತ ನ್ಯಾಯಸಮ್ಮತ ವಿತರಣೆ ಹಾಗೂ ಬಳಕೆಯಾಗುವಂತೆ ನೋಡಿಕೊಳ್ಳಲು ಅಗತ್ಯ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಎಲ್ಲ ರಾಜ್ಯ ಸರ್ಕಾರಗಳಿಗೆ ಅತ್ಯಂತ ಕಳಕಳಿಯಿಂದ ಮನವಿ ಮಾಡುತ್ತಿರುವುದಾಗಿ ಕೇಂದ್ರ ಸಚಿವರು ತಿಳಿಸಿದರು.

ಕೋವಿಡ್ ಪ್ರೊಟೋಕಾಲ್ ಅಡಿಯಲ್ಲಿ ಬರುವ ಎಲ್ಲ ಔಷಧಗಳ ಸರಬರಾಜನ್ನು ಕೇಂದ್ರವು ಸತತವಾಗಿ ಗಮನಿಸುತ್ತಿದೆ ಮತ್ತು ನಿರ್ದೇಶಿಸುತ್ತಿದೆ. ಈ ಬಗ್ಗೆ ನಾವು ಸಹಾಯವಾಣಿಯನ್ನೂ (No.-1800111255. Email: monitoring-nppa@gov.in) ಸ್ಥಾಪಿಸಿದ್ದೇವೆ. ಏಪ್ರಿಲ್ ತಿಂಗಳ ಕೊನೆಯ ಎರಡು ವಾರಗಳಲ್ಲಿ 767 ದೂರುಗಳು ಬಂದಿದ್ದವು. ಈ ತಿಂಗಳ ಮೊದಲೆರಡು ವಾರಗಳಲ್ಲಿ 147 ದೂರುಗಳಷ್ಟೇ ಬಂದಿವೆ. ಇದು ಕೋವಿಡ್ ಪ್ರೊಟೊಕಾಲ್ ಔಷಧಗಳ ಸರಬರಾಜು ಸಹಜಸ್ಥಿತಿಗೆ ಬರುತ್ತಿರುವುದರ ಸೂಚನೆಯಾಗಿದೆ ಎಂದು ಸದಾನಂದ ಗೌಡ ವಿವರಿಸಿದರು.

ಕೋವಿಡ್ ಕೇಂದ್ರಗಳಿಗೆ ಭೇಟಿ: ಸಚಿವರು ಇಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಅಮೃತಹಳ್ಳಿ, ಸಹಕಾರನಗರ ಹಾಗೂ ಕೊಡಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕೋವಿಡ್ ಲಸಿಕೆ ನೀಡಿಕೆ ಹ಻ಗೂ ಕೋವಿಡ್ ಪರೀಕ್ಷೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಹಾಗೆಯೇ ಹೆಬ್ಬಾಳ ಪಶುವಿಜ್ಞಾನ ಸಂಸ್ಥೆ ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ‘ಬಯಾಪ’ (BIAAPA) ಅಧ್ಯಕ್ಷ ಎ ರವಿ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ ನಾರಾಯಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here