Home ಬೆಂಗಳೂರು ನಗರ ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ ಒಡಂಬಡಿಕೆ

ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ ಒಡಂಬಡಿಕೆ

67
0
Karnataka signs Agreement on Skill Strengthening of Agricultural Activities
Advertisement
bengaluru

ಬೆಂಗಳೂರು:

ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ ಸ್ಮಾರ್ಟ್ ಕೃಷಿ ಕೇಂದ್ರಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಈ ನಿಟ್ಟಿನಲ್ಲಿ ಹೆಕ್ಸಾಗಾನ್ ಮ್ಯಾನ್ಯುಫ್ಯಾಕ್ಚರಿಂಗ್ ಇಂಟಲಿಜೆನ್ಸ್ ಇಂಡಿಯಾ ಕಂಪೆನಿ ಜೊತೆ ಕೃಷಿ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ.

ವಿಕಾಸಸೌಧದ ಸಭಾಂಗಣದಲ್ಲಿ ಹೆಕ್ಸಗಾನ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಧರ್ಮರಾಜನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೃಷಿ ಅಭಿವೃದ್ಧಿಯಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಇಟ್ಟಿದ್ದು, ದೇಶದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿರುವ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರವು ಈ ಮಹತ್ವದ ಒಡಂಬಡಿಕೆಯನ್ನು ಮಾಡಿಕೊಂಡಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮಯದಲ್ಲಿ ಹೆಕ್ಸಾನ್ ಕಂಪೆನಿ ಜೊತೆ ಚರ್ಚಿಸಿ ಈ ಒಡಂಬಡಿಕೆಗೆ ಮುಂದಾಗಿದ್ದೆವು. ಸಿಎಂ ಮಾರ್ಗದರ್ಶನದಂತೆ ಹಣಕಾಸು ಇಲಾಖೆಯಿಂದ ಒಪ್ಪಿಗೆಯನ್ನು ಇದಕ್ಕೆ ಪಡೆದು ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ಎರಡನೇ ಹೆಜ್ಜೆ ಹೆಜ್ಜೆ ಇಟ್ಟಿದೆ. ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ 700 ಕೋಟಿ ರೂ.ಮೌಲ್ಯದ ಒಡಂಬಡಿಕೆಯಾಗಿದ್ದು, ಈ ಒಡಂಬಡಿಕೆಯ ಮೂಲಕ ರಾಜ್ಯದ 4 ಕೃಷಿ ವಿಶ್ವವಿದ್ಯಾಲಯಗಳಲ್ಲಿ 7 CIDSA ಕೇಂದ್ರಗಳನ್ನು ಬೆಂಗಳೂರು, ಚಾಮರಾಜನಗರ, ಶಿವಮೊಗ್ಗ, ಧಾರವಾಡ, ವಿಜಯಪುರ, ಹನುಮನಮಟ್ಟಿ ಹಾಗೂ ಗಂಗಾವತಿಯಲ್ಲಿ ಸ್ಮಾರ್ಟ್ ಕೃಷಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.

bengaluru bengaluru

ಏನಿದು ಒಡಂಬಡಿಕೆ: ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹೇಗೆ ಹೆಕ್ಸಗಾನ್ ನೆರವಾಗಲಿದೆ:

CIDSA ಕೇಂದ್ರಗಳು 3 ವರ್ಷಗಳ ಅವಧಿಯಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ, ಉದ್ದಿಮೆದಾರರಿಗೆ ಹಾಗೂ ವಿಜ್ಞಾನಿಗಳಿಗೆ ಮುಂದಿನ ಆಧುನಿಕ ಕೃಷಿಗೆ ಬೇಕಾಗುವ ಭವಿಷ್ಯದ ಕೌಶಲ್ಯಗಳು, ಹೊಸ ತಂತ್ರಜ್ಞಾನ ಮತ್ತು ಉತ್ಕೃಷ್ಟ ಇಂಜಿನಿಯರಿಂಗ್ ತಂತ್ರಜ್ಞಾನ, ಪ್ರಾತ್ಯಕ್ಷಿಕೆ ಹಾಗೂ ಕಲಿಕೆ ಮೂಲಕ ತರಬೇತಿ ನೀಡುವುದು.

ಕಂಪೆನಿ ಒದಗಿಸುವ ಆವಿಷ್ಕಾರಕ ತಂತ್ರಜ್ಞಾನಗಳಿಂದ ಯಂತ್ರೋಪಕರಣಗಳ ನಿಖರ ಉಪಯೋಗದಿಂದ ಕೃತಕ ಬುದ್ಧಿವಂತಿಕೆ ಬಳಸಿ, ರೋಬೋಟಿಕ್ ಬಳಕೆ, ಅಭಿವೃದ್ಧಿಪಡಿಸಿದ ಡಾಟಾವನ್ನು ಬುದ್ಧಿವಂತಿಕೆಯಿಂದ ಬಳಸುವ ಯೋಜನೆಯನ್ನು ಕ್ಷೇತ್ರ ಮಟ್ಟದ ಕೃಷಿ ಚಟುವಟಿಕೆಗಳನ್ನು ನಿಖರ ಬೇಸಾಯ ಪದ್ಧತಿಯಲ್ಲಿ ಮಾಡಲು ರೂಪಿಸಲಾಗಿದೆ.ನೂತನ ಯೋಜನೆಯಲ್ಲಿ ಕ್ಷೇತ್ರಮಟ್ಟದ ಪ್ರಾಯೋಗಿಕ ಕೌಶಲ್ಯಗಳನ್ನು ಕೃಷಿಯಲ್ಲಿ ಅಟೋಮೆಷನ್ ತರುವ ಹಾಗೂ ಸ್ಥಳೀಯ ಬೇಡಿಕೆಗೆ ಅನುಗುಣವಾಗುವಂತೆ ಪಠ್ಯಕ್ರಮಗಳನ್ನು ಕ್ಷೇತ್ರ ಮಟ್ಟದ ಪ್ರಾಯೋಗಿಕ ವಿಷಯಗಳಾದ ಮಣ್ಣು, ಹವಾಮಾನ, ಸ್ಥಳೀಯ ಕ್ಷೇತ್ರ ಪದ್ಧತಿಗಳನ್ನು ಸುಧಾರಣೆ ಮಾಡಿ ತರಬೇತುದಾರರಿಗೆ ತರಬೇತಿ ನೀಡುತ್ತಾ ಗ್ರಾಮೀಣ ಬದುಕನ್ನು ಮತ್ತು ಗ್ರಾಮಸ್ಥರನ್ನು ಹಾಗೂ ಕೃಷಿ ಉದ್ದಿಮೆದಾರರೊಂದಿಗೆ ಸೌಹಾರ್ದತೆಯಿಂದ ಕೃಷಿ ಅಭಿವೃದ್ಧಿಗಾಗಿ ಪೂರಕ ವಾತಾವರಣವನ್ನು ನಿರ್ಮಿಸುವ ಉದ್ದೇಶ ಹೊಂದಿದೆ.

CIDSA ಕೇಂದ್ರಗಳಲ್ಲಿ ತೆರೆಯುವ ಪ್ರಯೋಗಾಲಯಗಳು ಪ್ರಮುಖವಾಗಿ ಕೃಷಿಯನ್ನು ಆಧುನೀಕರಣಗೊಳಿಸುವ ತಂತ್ರಜ್ಞಾನಗಳಾದ ನಿಖರ ಬೇಸಾಯ, ಕೃಷಿಯಲ್ಲಿ ಆಟೋಮೇಷನ್, ಬೇಸಾಯ ಶಾಸ್ತ್ರ, ಕೃಷಿ ಯಂತ್ರೋಪಕರಣಗಳ ವಿನ್ಯಾಸ ಹಾಗೂ ತಯಾರಿಕೆ, ಆಧುನಿಕ ಡ್ರೋನ್ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಕೃಷಿಯನ್ನು ಹವಾಮಾನ ವೈಪರೀತ್ಯಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವಂತೆ ನಿರಂತರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಕಾರ್ಯಯೋಜನೆಯನ್ನು ರೂಪಿಸಲಾಗಿದೆ.

ಸ್ಮಾರ್ಟ್ ಕೃಷಿ ಕೇಂದ್ರಗಳು ರಾಜ್ಯದ ಕೃಷಿಯನ್ನು ಹೆಚ್ಚು ಸುಸ್ಥಿರವಾಗುವಂತೆ ಲಾಭದಾಯಕವಾಗುವಂತೆ ಎಂಜಿನಿಯರಿಂಗ್ ನೂತನ ತಂತ್ರಜ್ಞಾನ ಬಳಸಿ ಜಾಗತಿಕವಾಗಿ ಸ್ಪರ್ಧಾತ್ಮಕ ಮಾದರಿಯಲ್ಲಿ ಗುಣಮಟ್ಟದ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಈ ಕೇಂದ್ರಗಳು ಮುಂದುವರೆದು, ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ತರುವುದು, ಕೃಷಿ ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವುದು, ಸಣ್ಣ- ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಉದ್ದಿಮೆದಾರರನ್ನು ಸೃಷ್ಟಿಸುವುದು ಮತ್ತು ಇವರಿಗೆ ಪೂರಕವಾದ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು. ಅಲ್ಲದೇ ರಾಜ್ಯದಲ್ಲಿ ಕೃಷಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.

ಒಡಂಬಡಿಕೆ ಸಂದರ್ಭದಲ್ಲಿ ಹೆಕ್ಸಾಗಾನ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಧರ್ಮರಾಜನ್ ಕೃಷಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು ಪಾಲ್ಗೊಂಡಿದ್ದರು.


bengaluru

LEAVE A REPLY

Please enter your comment!
Please enter your name here