Karnataka’s role in Ram janma bhoomi struggle is huge: Basavaraj Bommai| ರಾಮಜನ್ಮಭೂಮಿ ಹೋರಾಟದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ: ಬಸವರಾಜ ಬೊಮ್ಮಾಯಿ
ನಮ್ಮ ಮುಂದಿನ ಗುರಿ ಆಂಜನೇಯ ಜನ್ಮಸ್ಥಳ ಅಭಿವೃದ್ದಿ ಪಡಿಸುವುದು
ಬೆಂಗಳೂರು:
ರಾಮಜನ್ಮ ಭೂಮಿ (ram janmabhoomi) ಹೋರಾಟದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ. ರಾಮನಿಗೂ ಕರ್ನಾಟಕಕ್ಕೂ ದೊಡ್ಡ ನಂಟಿದೆ. ಆಂಜನೇಯ ಜನ್ಮಭೂಮಿ ಅಭಿವೃದ್ಧಿ ಪಡಿಸುವುದು ನಮ್ಮ ಮುಂದಿನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಬಾಲಬ್ರೂಹಿ ಅತಿಥಿ ಗೃಹದ ಬಳಿ ಇರುವ ಮಾರುತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಭಾರತದ ಇತಿಹಾಸದಲ್ಲಿ ಮಹತ್ವದ ಭಕ್ತಿ ಭಾವದ ದಿನ, ಐತಿಹಾಸಿಕ ದಿನ. ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಟಾಪನೆ ದಿನ ಎಂದರು.
ಒಂದು ದೇಶದ ಪ್ರಜಾಪ್ರಭುತ್ವದಲ್ಲಿ ಅಂತಿಮ ನಿರ್ಣಯ ಜನರ ನಿರ್ಣಯ. ಎಲ್ಲಕ್ಕಿಂತ ದೊಡ್ಡ ಕೆಲಸ ಸರ್ಕಾರ ಮಾಡಬೇಕಾಗಿರುವುದು ಜನರ ಕೆಲಸ. ಈ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಗುತ್ತಿದೆ. ಅತ್ಯಂತ ಶ್ರದ್ದಾ ಭಕ್ತಿಯಿಂದ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನೆ ಆಗುತ್ತಿದೆ. ರಾಮ ಮಂದಿರಕ್ಕಾಗಿ ಹೋರಾಟ ಮಾಡಿದಂತ ಎಲ್ಲ ಮಹನೀಯರಿಗೆ ಕೋಟಿ ಕೋಟಿ ನಮನ ಸಲ್ಲಿಸುವುದಾಗಿ ತಿಳಿಸಿದರು.
ರಾಮಜನ್ಮಭೂಮಿ ಹೋರಾಟದಲ್ಲಿ ಕರ್ನಾಟಕದ ದೊಡ್ಡ ಪಾತ್ರವಿದೆ. ರಾಮನಿಗೂ ಕರ್ನಾಟಕಕ್ಕೂ ನಂಟಿದೆ. ಆಂಜನೇಯ ಜನ್ಮಸ್ಥಳ ಆಂಜನಾದ್ರಿ ಕರ್ನಾಟಕದಲ್ಲೇ ಇದೆ
ಆಂಜನೇಯ ಇದ್ದರೆ ರಾಮ ಪರಿಪೂರ್ಣ. ಮುಂದಿನ ನಮ್ಮ ಗುರಿ ಆಂಜನೇಯ ಜನ್ಮ ಭೂಮಿ ಅಭಿವೃದ್ಧಿ ಮಾಡುವುದು ಮುಂದಿನ ದಿನಗಳಲ್ಲಿ ಆಂಜನೇಯ ಕ್ಷೇತ್ರ ಅಭಿವೃದ್ಧಿ ಮಾಡಬೇಕು ಅಂತ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.
ರಾಮ ರಾಜ್ಯ ಸ್ಥಾಪನೆ ನಮ್ಮ ಮುಂದಿನ ಗುರಿ. ಇದು ಅಮೃತ ಘಳಿಗೆ.ಇಂಥ ಐತಿಹಾಸಿಕ ಸಂದರ್ಭದಲ್ಲಿ ನಾವಿದ್ದೇವೆ ಎನ್ನುವುದು ನಮ್ಮ ಖುಷಿ. ಇಂಥ ಪವಿತ್ರವಾದ ದಿನ ನಾವು ರಾಜಕೀಯ ಬೆರೆಸಿ ಮಾತನಾಡುವುದಿಲ್ಲ ಎಂದು ಹೇಳಿದರು.
