ಬೆಂಗಳೂರು:
ಸಿಡಿ ರಾಸಲೀಲೆ ಪ್ರಕರಣದಲ್ಲಿ ತಮಗೆ ಬ್ಯ್ಯಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೋಳಿ ತಮ್ಮ ಆಪ್ತ ಎಂ ವಿ ನಾಗರಾಜ್ ಮೂಲಕ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣ ಇದೀಗ ಬ್ಲಾಕ್ ಮೇಲ್ ಮಾಡಿದವರಿಗೆ ಮುಳುವಾಗುವ ಸಾಧ್ಯತೆಯಿದೆ. ಕಾನೂನು ತಜ್ಞರು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ ನಂತರ ರಮೇಶ್ ಜಾರಕಿಹೊಳಿ ಅಧಿಕೃತವಾಗಿ ದೂರು ನೀಡಿದ್ದಾರೆ.
ಆದರೆ, ದೂರಿನಲ್ಲಿ ಯಾರೊಬ್ಬರ ಹೆಸರನ್ನು ಉಲ್ಲೇಖಿಸಿಲ್ಲ. ಬ್ಲ್ಯಾಕ್ ಮೇಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಿಸಲಾಗಿದ್ದು, ನಾಲ್ಕು ತಿಂಗಳ ಹಿಂದಿನ ಷಡ್ಯಂತ್ರವನ್ನು ಸಹ ದೂರಿಯಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಗರಾಜ್ ಅವರು ದೂರು ದಾಖಲಾಗುತ್ತಿದ್ದಂತೆ ಸದಾಶಿವ ನಗರ ಪೊಲೀಸರು ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಅವರಿಗೆ ಮಾಹಿತಿ ರವಾನಿಸಿದ್ದಾರೆ. ಈಗಾಗಲೇ ಪ್ರಕರಣದ ತನಿಖೆಯನ್ನು ಸರ್ಕಾರ ಎಸ್ ಐಟಿ ಹೆಗಲಿಗೆ ವಹಿಸಿದ ಕಾರಣ ಕೂಡಲೇ ಅನುಚೇತ್ ಅವರು ದೂರು ಕುರಿತಾದ ಮಾಹಿತಿಯನ್ನುಎಸ್ ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗದಿದ್ದರೇ ತನಿಖೆ ಮುಂದುವರೆಯುವುದು ಕಷ್ಟವಾಗಿತ್ತು. ಇದೀಗ ರಮೇಶ್ ಜಾರಕಿಹೊಳಿ ಅವರು ತಮ್ಮ ಕೈಬರಹದ ದೂರು ನೀಡಿರುವುದರಿಂದ ಎಫ್ ಐ ಆರ್ ದಾಖಲಾಗುವ ಸಾಧ್ಯತೆ ಇದೆ. ತನಿಖೆಗೆ ಹೊಸ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ.