ಲಸಿಕೆ ನೀಡುವ ಪ್ರಕ್ರಿಯೆ ಮುಂದಿನ ತಿಂಗಳಲ್ಲಿ ಪ್ರಾರಂಭ: ಬಿಬಿಎಂಪಿ ಆಯುಕ್ತ
ಬೆಂಗಳೂರು:
ನಗರದಲ್ಲಿ 3ನೇ ಹಂತದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಲಸಿಕೆ ಪ್ರಾರಂಭವಾಗುವ ದಿನಾಂಕವನ್ನು ರಾಜ್ಯ ಸರ್ಕಾರ ತಿಳಿಸಲಿದೆ. 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗವುದು. ಈ ಪೈಕಿ ಸರ್ವೇ ಮಾಡಲು ಒಂದು ತಂತ್ರಾಂಶವನ್ನು ಸಿದ್ದಪಡಿಸಿದ್ದು, ಆಶಾ ಕಾರ್ಯಕರ್ತರು, ಎ.ಎನ್.ಎಂ ಹಾಗೂ ಲಿಂಕ್ ವರ್ಕರ್ಸ್ ಗಳ ಮೂಲಕ ಸರ್ವೇ ನಡೆಸಿ ಗುಣಮಟ್ಟದ ದತ್ತಾಂಶವನ್ನು ಸಂಗ್ರಹಿಸಬೇಕು ಎಂದು ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ರವರು ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ಪಕ್ಕದ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರ ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಮಸ್ಯೆ ಪರಿಹರಿಸುವ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಕುರಿತು ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ರವರು ಇಂದು ಪಾಲಿಕೆಯ ಎಲ್ಲಾ ವಿಶೇಷ ಆಯುಕ್ತರುಗಳು, ವಲಯ ಜಂಟಿ ಆಯುಕ್ತರುಗಳು, ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಎಲ್ಲಾ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ವೇಳೆ ವಿಶೇಷ ಆಯುಕ್ತರುಗಳಾದ ರಾಜೇಂದ್ರ ಚೋಳನ್ (ಆರೋಗ್ಯ), ತುಳಸಿ ಮದ್ದಿನೇನಿ, ಮನೋಜ್ ಜೈನ್, ಬಸವರಾಜು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದವೆರೆದು ಮಾತನಾಡುತಾ ಆಯುಕ್ತರು: 3ನೇ ಹಂತದಲ್ಲಿ ಲಸಿಕೆ ಪಡೆಯುವವರು ಸ್ವಯಂ ನೋಂದಣಿ ಆಗಬಹುದಾಗಿದ್ದು, ಮಧ್ಯಮವರ್ಗ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಈ ಬಗ್ಗೆ ಅರಿವಿರುತ್ತದೆ. ಆದರೆ, ಬಡವರ್ಗದ ಜನರು ಹಾಗೂ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಈ ಬಗ್ಗೆ ಯಾವುದೇ ಅರಿವಿರುವುದಿಲ್ಲ. ಕೊಳಗೇರಿ ಪ್ರದೇಶದಲ್ಲಿ ಸುಮಾರು 15 ರಿಂದ 20 ಲಕ್ಷ ಜನ ವಾಸವಿದ್ದು, ಅವರನ್ನೆಲ್ಲಾ ಗುರುತಿಸಿ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವವರನ್ನು ಸರ್ವೇ ಮೂಲಕ ಗುರುತಿಸುವುದು ಪಾಲಿಕೆಯ ಪ್ರಮುಖ ಕೆಲಸವಾಗಿದೆ. ಸರ್ವೇ ಮಾಡಲು 2,500 ಟ್ಯಾಬ್ಗಳನ್ನು ಸ್ಮಾರ್ಟ್ ಸಿಟಿಯಿಂದ ಒದಗಿಸಲಾಗಿದ್ದು, ತಂತ್ರಾಂಶದ ಮೂಲಕ ಸರ್ವೇ ಮಾಡಲಾಗುತ್ತದೆ. ಈ ಸರ್ವೇ ಮೂಲಕ ದತ್ತಾಂಶ ಸಂಗ್ರಹಿಸುವುದರಿಂದ ಕೋವಿಡ್ ಮಾತ್ರವಲ್ಲದೆ ಇನ್ನಿತರೆ ಖಾಯಿಲೆಗಳ ಬಗ್ಗೆ ಸರ್ವೇ ಮಾಡಲು ಕೂಡಾ ಇದು ಅನುಕೂಲಕರವಾಗಲಿದೆ. ಆದ್ದರಿಂದ ಕೇವಲ ಕೊಳಗೇರಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ಇಡೀ ನಗರದಾದ್ಯಂತ ಸರ್ವೇ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ಟ್ಯಾಬ್ ನಿಂದ ತಂತ್ರಾಂಶದ ಮೂಲಕ ಸರ್ವೇಕಾರ್ಯ ಮಾಡಬೇಕಿದ್ದು, ಸರ್ವೆ ಮಾಡಲು ಸುಲಭ ಮಾದರಿಯಲ್ಲಿ ಪಾರ್ಮೆಟ್ ಸಿದ್ದಪಡಿಸಲಾಗಿದೆ. ಪಾರ್ಮೆಟ್ನಲ್ಲಿ ಯಾವುದೇ ದಾಖಲೆಗಳನ್ನು ಕೇಳದೆ ಅಗತ್ಯ ಮಾಹಿತಿ ಮಾತ್ರ ಪಡೆಯಲಾಗುತ್ತದೆ. ಈ ಪೈಕಿ ಯಾವ ರೀತಿ ಸರ್ವೇ ಮಾಡಬೇಕು ಎಂಬುದರ ಬಗ್ಗೆ ಆಶಾ ಕಾರ್ಯಕರ್ತರು, ಎ.ಎನ್.ಎಂ ಹಾಗೂ ಲಿಂಕ್ ವರ್ಕರ್ಸ್ ಗಳಿಗೆ ತರಬೇತಿ ನೀಡಿ ಪ್ರತಿನಿತ್ಯ ಇಂತಿಷ್ಟು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ನಗರದಲ್ಲಿ ಸಮರ್ಪಕವಾಗಿ ಸರ್ವೆ ಮಾಡಿ ನಿಖರ ಮಾಹಿತಿ ಸಂಗ್ರಹಿಸಿದರೆ ಬೆಂಗಳೂರು ನಗರವು ದೇಶಕ್ಕೆ ಮಾದಿಯಾಗಲಿದೆ ಎಂದರು.
ಬ್ಲೂಟೂತ್ ಎನೆಬಲ್ ಡಿವೈಸ್ ಮುಖಾಂತರ ಸರ್ವೇ: ನಗರದಲ್ಲಿ ಕೊಳಗೇರಿ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಬ್ಲೂಟೂತ್ ಎನೆಬಲ್ ಡಿವೈಸ್ ಮುಖಾಂತರ ಬಿ.ಪಿ ಮತ್ತು ಬ್ಲಡ್ ಶುಗರ್ ಅನ್ನು ಟೆಸ್ಟ್ ಮಾಡಲಾಗುತ್ತದೆ. ಇದರಿಂದ ಕ್ಷಣಾರ್ಧದಲ್ಲಿ ಮೊಬೈಲ್ಗೆ ಮಾಹಿತಿ ಲಭ್ಯವಾಗಲಿದ್ದು, ಸುಲಭವಾಗಿ ಮಾಹಿತಿ ಸಂಗ್ರಹಿಸಬಹುದಾಗಿದೆ ಎಂದು ಆಯುಕ್ತರು ರವರು ತಿಳಿಸಿದರು.

ನಗರದಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಬಹುತೇಕರಲ್ಲಿ ಉದಾಸೀನ ಹಾಗೂ ನಿರ್ಲಕ್ಷ್ಯತೆ ಕಾಣುತ್ತಿದೆ. ಈಗಾಗಲೇ ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿವೆ. ಮಹಾರಾಷ್ಟ್ರದ 21 ರಾಜ್ಯಗಳಲ್ಲಿ ಸೋಂಕು ಕಂಡುಬಂದಿದ್ದು, ಬ್ರೆಜಿಲ್ ವೇರಿಯಂಟ್ ಹಾಗೂ ಸೌತ್ಆಫ್ರಿಕಾ ವೇರಿಯಂಟ್ ಕಾಣಿಸಿಕೊಂಡಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಲು ಯಾವುದೇ ನಿರ್ಬಂಧವಿಲ್ಲದ ಕಾರಣ ಹೆಚ್ಚು ಸಂಖ್ಯೆಯಲ್ಲಿ ರಾಜ್ಯಕ್ಕೆ ಬರುತ್ತಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಕೆಲವು ನಿಬಂಧನೆಗಳನ್ನು ಹೇರಿದ್ದು, ಕೇರಳಿಂದ ಬರುವವರು ಕಡ್ಡಾಯವಾಗಿ 72 ಗಂಟೆಗಳ ಒಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ತರಲು ತಿಳಿಸಲಾಗಿದೆ. ಪರಿಕ್ಷೆ ಮಾಡಿಸಿಕೊಳ್ಳದವರು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದು, ಬಳಿಕ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುವುದು. ನೆಗೆಟಿವ್ ಬಂದರೆ ಯಾವುದೇ ತೊಂದರೆಯಿಲ್ಲ. ಪಾಸಿಟಿವ್ ಬಂದರೆ ಅಖಿ CT Value (ಸಿಟಿ ವ್ಯಾಲ್ಯು) 20ಕ್ಕಿಂತ ಕಡಿಮೆಯಿದ್ದರೆ ಅದನ್ನು ನಿಮಾನ್ಸ್ಗೆ ಕಳುಹಿಸಿ Genome sequencingಗೆ ಕಳುಹಿಸಲಾಗವುದು. ಮಹಾರಾಷ್ಟ್ರದಿಂದ ಬರುವವರಿಗೂ ಕೇರಳಕ್ಕೆ ನಿರ್ಬಂಧವೇರಿರುವ ಹಾಗೆ ನಿರ್ಬಂಧ ವಿಧಿಸಲು ಟೆಕ್ನಿಕಲ್ ಅಡ್ವೈಸರಿ ಕಮಿಟಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದೇಶ ಜಾರಿಯಾದ ಕೂಡಲೆ ಪಾಲಿಕೆಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಪೋಸ್ಟರ್ ಗಳ ಮೂಲಕ ಕೋವಿಡ್ ಬಗ್ಗೆ ಜಾಗೃತಿ:
ನಗರದಲ್ಲಿ ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಈ ಸಂಬಂಧ ರೆಸಿಡೆನ್ಸಿ, ಅಪಾರ್ಟ್ಮೆಂಟ್ಸ್, ರೆಸ್ಟೋರೆಂಟ್, ಚಿತ್ರಮಂದಿರಗಳ ಬಳಿ ಕೋವಿಡ್ ನಿಯಮಗಳು, ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಬಿತ್ತಿಪತ್ರ/ಪೋಸ್ಟರ್ ಗಳನ್ನು ನೀಡಲು ಆರ್.ಡಬ್ಲ್ಯು.ಎಗಳು ಮನವಿ ಮಾಡಿವೆ. ಅಲ್ಲದೆ ಕೋವಿಡ್ ನಿಯಮ ಉಲ್ಲಂಘಿಸಿದರೆ ಏನು ಮಾಡಬೇಕು/ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲು ತಿಳಿಸಿದ್ದಾರೆ. ಈ ಸಂಬಂಧ ಆರೋಗ್ಯಾಧಿಕಾರಿಗಳು ಇದನ್ನು ಜಾರಿಗೊಳಿಸಬೇಕಿದ್ದು, ಕೂಡಲೆ ಸೂಕ್ತಕ್ರಮ ಕೈಗೊಳ್ಳಲು ಆಯುಕ್ತರು ಸೂಚನೆ ನೀಡಿದರು.
ಕಡ್ಡಾಯವಾಗಿ ನಿಯಮ ಪಾಲಿಸಲು ಸೂಚನೆ:
ಮದುವೆಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸೇಷನ್ ಹಾಗೂ ಇಷ್ಟೇ ಜನ ಸೇರಬೇಂಕ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಆದರೆ, ಯಾರೂ ಸರಿಯಾಗಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಈ ರೀತಿ ಹೆಚ್ಚು ಜನ ಸೇರಿ ಒಬ್ಬರಿಗೆ ಸೋಂಕಿದ್ದರೆ ಸೂಪರ್ ಸ್ಪೆçಡರ್ಗಳಾಗಲಿವೆ. ಆದ್ದರಿಂದ ಮದುವೆ, ಸಮಾರಂಭಗಳಲ್ಲಿ ಕೋವಿಡ್ ನಿಯಗಳು ಉಲ್ಲಂಘನೆಯಾದರೆ ದಂಡ ವಿಧಿಸಬೇಕು. ಇಲ್ಲವಾದರೆ ಮತ್ತೆ ಹೆಚ್ಚು ಪ್ರಕರಣಗಳು ಕಂಡುಬರುವ ಸಾಧ್ಯತೆ ಇದೆ. ಈ ಪೈಕಿ ಎಲ್ಲಾ ಆರೋಗ್ಯಾಧಿಕಾರಿಗಳು ಕೂಡಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಮಾರ್ಚ್ ಅಂತ್ಯದವರೆಗೂ ಸಿಬ್ಬಂದಿಯನ್ನು ಮುಂದುವರಿಸಲು ಸೂಚನೆ:
ಕೋವಿಡ್ ವೇಳೆ ಟೆಸ್ಟಿಂಗ್ ಮಾಡಲು ನಿಯೋಜನೆ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ಮಾರ್ಚ್ ಅಂತ್ಯದವರೆಗೂ ಮುಂದುವರಿವಂತೆ ಆಯುಕ್ತರು ಸೂಚನೆ ನೀಡಿದರು. ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ನರ್ಸಿಂಗ್ ಕಾಲೇಜುಗಳಲ್ಲಿ ಟೆಸ್ಟಿಂಗ್ ಮಾಡಲು ಸೂಚನೆ ನೀಡಲಾಗಿದೆ. ಸದ್ಯ ಪ್ರತಿನಿತ್ಯ 20,000 ರಿಂದ 25,000 ಟೆಸ್ಟ್ ಗಳನ್ನು ಮಾಡಲಾಗುತ್ತಿದ್ದು, ಅದನ್ನು ಇನ್ನೂ ಹೆಚ್ಚಳ ಮಾಡಲು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಾವಿನ ವರದಿ ತಡವಾಗಿ ನೀಡಿದರೆ ಶಿಸ್ತುಕ್ರಮ ಕೈಗೊಳ್ಳಿ:
ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರ ವಿವರವನ್ನು ಅದೇ ದಿನ ಕೊಡಬೇಕು. ಆದರೆ ಕೆಲ ಆಸ್ಪತ್ರೆಗಳಲ್ಲಿ ತಡವಾಗಿ ಪಾಲಿಕೆಗೆ ವರದಿ ನೀಡುತ್ತಿದ್ದಾರೆ. ಈ ಪೈಕಿ ಯಾವ ಆಸ್ಪತ್ರೆಗಳಲ್ಲಿ ಸಾವಿನ ವರದಿ ತಡವಾಗಿ ನೀಡುತ್ತಾರೆ ಅಂತಹ ಆಸ್ಪತ್ರೆಗಳ ಡಿಸಾಸ್ಟರ್ ಮ್ಯಾನೆಜ್ಮೆಂಟ್ ಆಕ್ಟ್ ಅಡಿ ಕೂಡಲೆ ಶಿಸ್ತು ಕ್ರಮಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.