ಚಾಮರಾಜನಗರ:
ಆರೋಗ್ಯಕ್ಷೇತ್ರದಲ್ಲಿ ಅಗತ್ಯಸೇವೆಗಳನ್ನು ಒದಗಿಸುವವರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಗ್ರಾಮಾಂತರ ಪ್ರದೇಶಗಳ ಯುವಜನರಿಗೆ ಈ ನಿಟ್ಟಿನಲ್ಲಿ ಸೂಕ್ತ ಕೌಶಲ್ಯಾಭಿವೃದ್ಧಿಯನ್ನು ಉಚಿತವಾಗಿ ಕೊಡಲಾಗುತ್ತಿದೆ. ಜತೆಗೆ, ತಿಂಗಳಿಗೆ 5 ಸಾವಿರ ರೂ. ತರಬೇತಿ ವೇತನವನ್ನೂ ಒದಗಿಸಲಾಗುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ಅರೆವೈದ್ಯಕೀಯ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ವೀಕ್ಷಿಸಿದ ಅವರು, ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಜಿಲ್ಲೆಯ ಯುವಜನರಿಗೆ ಆರೋಗ್ಯ ಕ್ಷೇತ್ರದಲ್ಲಿ ಅಗತ್ಯವಾಗಿರುವ ಕೌಶಲ್ಯಗಳನ್ನು ಪೂರೈಸಬೇಕು. ಇದರಿಂದ ಉದ್ಯೋಗಸೃಷ್ಟಿಯಾಗುತ್ತದೆ. ಒಂದು ವೇಳೆ, ಇಲ್ಲೇನಾದರೂ ಕೊರತೆ ಇದ್ದರೆ ಬೆಂಗಳೂರಿನಲ್ಲಿ ತರಬೇತಿಗೆ ಸಕಲ ವ್ಯವಸ್ಥೆಯನ್ನೂ ಮಾಡಲಾಗುವುದು. ಇದರಿಂದಾಗಿ ಆಸಕ್ತ ಯುವಜನರು ಮುಂಬರುವ ದಿನಗಳಲ್ಲಿ ವಿದೇಶಗಳಿಗೂ ಹೋಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು’ ಎಂದರು.
ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಮನೆ ಬಾಗಿಲಿಗೇ ಹೋಗಿ ಆರೋಗ್ಯ ಸೇವೆ ಒದಗಿಸುವುದಕ್ಕೆ ಮತ್ತು ಅನಾರೋಗ್ಯಪೀಡಿತರನ್ನು ಮನೆಯಲ್ಲೇ ಇದ್ದು ಆರೈಕೆ ಮಾಡುವುದಕ್ಕೆ ಭಾರೀ ಬೇಡಿಕೆ ಇದೆ. ನಮ್ಮ ಯುವಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸಿಗಬೇಕು. ಅಕಸ್ಮಾತ್ ಇಲ್ಲಿ ಸಿಗದೆ ಹೋದರೆ, ಬೆಂಗಳೂರಿನಲ್ಲಿ ಉದ್ಯೋಗಕ್ಕೆ ವ್ಯವಸ್ಥೆ ಮಾಡಲಾಗುವುದು. ಇದರಿಂದಾಗಿ ನಮ್ಮ ಯುವಜನರಿಗೆ ತಿಂಗಳಿಗೆ ಕನಿಷ್ಠ 25 ಸಾವಿರ ರೂ.ಗಳಾದರೂ ಆದಾಯ ಬರುವಂತಾಗುತ್ತದೆ ಎಂದು ಸಚಿವರು ವಿವರಿಸಿದರು.
ಚಾಮರಾಜನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
— Dr. Ashwathnarayan C. N. (@drashwathcn) February 15, 2022
ಈ ಸಂದರ್ಭದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಜತೆ ಕೆಲ ಸಮಯ ಕಳೆದೆ. ನನ್ನ ಕಾಲೇಜು ಜೀವನದ ದಿನಗಳು ನೆನಪಾದವು.
ನಿಷ್ಕಲ್ಮಶ ಮನಸ್ಸುಗಳ ಜತೆ ಬೆರೆಯುವುದು ನನಗೆ ಸದಾ ಸಂತಸ ನೀಡುತ್ತದೆ. pic.twitter.com/IJr0BA5qhm
ಕೇಂದ್ರದಿಂದ ಚಾಮರಾಜನಗರ ಜಿಲ್ಲೆ ಆಯ್ಕೆ
ಪ್ರಧಾನಿ ನರೇಂದ್ರ ಮೋದಿ ಕಳೆದ ಆಗಸ್ಟ್ ನಲ್ಲಿ ಕೋವಿಡ್ ಮುಂಚೂಣಿ ಕಾರ್ಯಕರ್ತರ ಕೌಶಲ್ಯವನ್ನು ಹೆಚ್ಚಿಸಲು ಕಸ್ಟಮೈಸ್ಡ್ ಕ್ರ್ಯಾಶ್ ಕೋರ್ಸ್’ ಅನ್ನು ಘೋಷಿಸಿ, ಇದಕ್ಕೆ ರಾಜ್ಯದಿಂದ ಚಾಮರಾಜನಗರ ಜಿಲ್ಲೆಯನ್ನು ಆಯ್ಕೆ ಮಾಡಿದ್ದರು. ಇದರಡಿಯಲ್ಲಿ ಇಲ್ಲಿ ವೈದ್ಯಕೀಯೇತರ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ 21 ದಿನಗಳ ತರಬೇತಿ ನೀಡಿ, ನಂತರ 3 ತಿಂಗಳ ಅವಧಿಯ
ಆನ್-ಜಾಬ್’ ತರಬೇತಿ ಕೊಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಡಿ ಇಲ್ಲಿನ ಭರಣಿ ಫೌಂಡೇಶನ್ ಸಂಸ್ಥೆಯು ಎರಡು ಬ್ಯಾಚುಗಳಲ್ಲಿ 40 ಮಂದಿಗೆ ತರಬೇತಿ ನೀಡಿದೆ. ಇಲ್ಲಿಗೆ ಬಂದ ಅಭ್ಯರ್ಥಿಗಳಿಗೆ ತುರ್ತು ವೈದ್ಯಕೀಯ ಟೆಕ್ನೀಷಿಯನ್, ಜನರಲ್ ಡ್ಯೂಟಿ ಸಹಾಯಕರು, ಜಿಡಿಎ-ಅಡ್ವಾನ್ಸ್ಡ್ (ಕ್ರಿಟಿಕಲ್ ಕೇರ್), ಗೃಹ ಆರೋಗ್ಯ ಸಹಾಯಕ, ವೈದ್ಯಕೀಯ ಸಾಧನ ತಂತ್ರಜ್ಞಾನ ಸಹಾಯಕ ಮತ್ತು ಫ್ಲೆಬಾಟಮಿಸ್ಟ್ ಕೌಶಲ್ಯಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು, ಬೋಧಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸಂತಸಪಟ್ಟ ಗ್ರಾಮೀಣ ಅಭ್ಯರ್ಥಿಗಳು
ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಸದ್ಯಕ್ಕೆ ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಮೂರು ಬಗೆಯ ಉದ್ಯೋಗಗಳಿಗೆ ತರಬೇತಿ ನೀಡಲಾಗುತ್ತಿದ್ದು, ಒಟ್ಟು 34 ಅಭ್ಯರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರೆಲ್ಲ ಎಸ್ಸೆಸ್ಸೆಲ್ಸಿ, ಪಿಯುಸಿ, ಬಿ.ಎ., ಬಿ.ಕಾಂ.ನಂತಹ ಕೋರ್ಸುಗಳನ್ನು ಬಡತನ, ಅನನುಕೂಲ ಇತ್ಯಾದಿ ಕಾರಣಗಳಿಂದ ಅರ್ಧದಲ್ಲೇ ನಿಲ್ಲಿಸಿದವರಾಗಿದ್ದಾರೆ. ಇವರೆಲ್ಲ ಸುತ್ತಲಿನ ಯಳಂದೂರು, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲದಂತಹ ಹಿಂದುಳಿದ ಗ್ರಾಮಾಂತರ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ತಮ್ಮ ತರಬೇತಿಯನ್ನು ವೀಕ್ಷಿಸಲು ಕೌಶಲ್ಯಾಭಿವೃದ್ಧಿ ಸಚಿವರೇ ಬಂದುದನ್ನು ಕಂಡು ಸಂತಸಪಟ್ಟ ಇವರೆಲ್ಲ, “ತರಬೇತಿ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಹಳ್ಳಿಯ ಮಕ್ಕಳಿಗೆ ಇಂತಹ ಆಧುನಿಕ ತರಬೇತಿಗಳು ಸಿಕ್ಕಿದರೆ ನಿರುದ್ಯೋಗದ ಭೀತಿ ಖಂಡಿತವಾಗಿಯೂ ಇರುವುದಿಲ್ಲ’’ ಎಂದು ಅತೀವ ಸಂತಸಪಟ್ಟರು. ಆಗ ಸಚಿವರು, ಈ ಗ್ರಾಮೀಣ ಪ್ರತಿಭೆಗಳ ತರಬೇತಿ ಬಗ್ಗೆ ಹೆಚ್ಚಿನ ಒತ್ತು ಕೊಡುವಂತೆ ತಮ್ಮೊಂದಿಗಿದ್ದ ಕೌಶಲ್ಯಾಧಿಕಾರಿ ಅಕ್ಬರ್ ಅವರಿಗೆ ಸೂಚಿಸಿದರು.