ಚಾಮರಾಜನಗರ:
ಮಾದಕ ವಸ್ತು ನಿಗ್ರಹ ದಳದ -ಎನ್ಸಿಬಿ ಅಧಿಕಾರಿಗಳ ಸೋಗಿನಲ್ಲಿ ಐವರು ದುಷ್ಕರ್ಮಿಗಳು ವಾಹನವೊಂದನ್ನು ಅಡ್ಡಗಟ್ಟಿ ಅದರಲ್ಲಿದ್ದ ಬೆಳ್ಳುಳ್ಳಿ ವ್ಯಾಪಾರಿಯೊಬ್ಬರಿಂದ 14.70 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ತಾಲ್ಲೂಕಿನ ಪುಣಜನೂರಿನ ಬಳಿ ನಡೆದಿದೆ.
ತಮಿಳುನಾಡಿನ ಬೆಳ್ಳುಳ್ಳಿ ವ್ಯಾಪಾರಿ ಶಬರಿ ಗಿರೀಶನ್ ಎಂಬುವವರು ತಮ್ಮ ಬೊಲೆರೊ ಪಿಕ್ ಅಪ್ನಲ್ಲಿ ಬೆಳ್ಳುಳ್ಳಿ ಖರೀದಿಗಾಗಿ ಕೊಯಮತ್ತೂರಿನಿಂದ ಮೈಸೂರಿಗೆ ಬರುತ್ತಿದ್ದರು. ಅ.20ರ ರಾತ್ರಿ 8.30 ಪುಣಜನೂರು ಚೆಕ್ ಪೋಸ್ಟ್ ನಿಂದ ಅರ್ಧ ಕಿ.ಮೀ ದೂರದಲ್ಲಿ ಐವರ ತಂಡ ವಾಹನವನ್ನು ಅಡ್ಡಕಟ್ಟಿ, ತಾವು ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಎಂದು ಹೇಳಿಕೊಂಡು ವಾಹನ ತಪಾಸಣೆ ಮಾಡುವ ನೆಪದಲ್ಲಿ ವಾಹನದಲ್ಲಿ ಇರಿಸಲಾಗಿದ್ದ 14 ಲಕ್ಷ ರೂ. ನಗದನ್ನು ದೋಚಿದ್ದಾರೆ ಎಂದು ಶಬರಿ ಗಿರೀಶನ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ಮರುದಿನ ಬೆಳಿಗ್ಗೆ ಅವರು ದೂರು ನೀಡಿದ್ದಾರೆ.
ವಾಹನದಲ್ಲಿ ವ್ಯಾಪಾರಿ ಒಬ್ಬರೇ ಇದ್ದರು ಎಂದು ಹೇಳಲಾಗಿದೆ. ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ತಿಳಿಸಿದ್ದಾರೆ.