Tejaswi Surya appointed as chairman of Jan Vishwas Bill 2025: ಜನವಿಶ್ವಾಸ ಬಿಲ್ 2025 ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ತೇಜಸ್ವೀ ಸೂರ್ಯ ನೇಮಕ – ಉದ್ಯಮ ಸುಲಭೀಕರಣ, ನಿಯಮ ಉಲ್ಲಂಘನೆ ದಂಡ ಕಡಿತದತ್ತ ಮಹತ್ವದ ಹೆಜ್ಜೆ
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವೀ ಸೂರ್ಯ ಅವರನ್ನು ಜನವಿಶ್ವಾಸ (ತಿದ್ದುಪಡಿ) ಬಿಲ್ 2025 ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇಮಕ ಮಾಡಿದ್ದಾರೆ. ಈ ಸಮಿತಿಯಲ್ಲಿ ಒಟ್ಟು 24 ಮಂದಿ ಸಂಸತ್ ಸದಸ್ಯರು ಇರಲಿದ್ದಾರೆ.
ಜನವಿಶ್ವಾಸ ಬಿಲ್ 2025, ಆಗಸ್ಟ್ 18ರಂದು ಲೋಕಸಭೆಯಲ್ಲಿ ಮಂಡನೆಯಾಗಿದ್ದು, 17 ಕೇಂದ್ರ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡುವುದರ ಮೂಲಕ ಅನುಸರಣೆ ಭಾರ ಕಡಿತ, ದಂಡ ಪ್ರಕ್ರಿಯೆ ಸರಳೀಕರಣ ಮತ್ತು ನಾಗರಿಕ–ಉದ್ಯಮ–ಸರ್ಕಾರ ನಡುವೆ ವಿಶ್ವಾಸ ಬಲಪಡಿಸುವುದು ಉದ್ದೇಶವಾಗಿದೆ.
ಸಮಾಜಮಾಧ್ಯಮದಲ್ಲಿ ಧನ್ಯವಾದ ವ್ಯಕ್ತಪಡಿಸಿದ ತೇಜಸ್ವೀ ಸೂರ್ಯ, ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು ಕಿರಣ್ ರಿಜಿಜು ಮತ್ತು ಪಿಯೂಷ್ ಗೋಯಲ್ ಅವರಿಗೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.
“ಜನರ ಜೀವನ ಸುಲಭವಾಗುವಂತೆ, ವಿಶ್ವಾಸ ಬಲವಾಗುವಂತೆ ಮತ್ತು ಹೊಸ ಉದ್ಯಮಶೀಲ ಪ್ರಯಾಣಗಳಿಗೆ ಸ್ಪೂರ್ತಿ ನೀಡುವಂತೆ ಈ ಬಿಲ್ ರೂಪಿಸಲು ಬದ್ಧತೆಯಿಂದ ಕೆಲಸ ಮಾಡುತ್ತೇನೆ,” ಎಂದು ಸೂರ್ಯ ತಿಳಿಸಿದರು.
ಅವರು ಮುಂದುವರೆದು, ಈ ಬಿಲ್ ಪ್ರಧಾನಮಂತ್ರಿ ಮೋದಿ ಅವರ ‘ಕಡಿಮೆ ಸರ್ಕಾರ, ಹೆಚ್ಚು ಆಡಳಿತ’ ದೃಷ್ಟಿಕೋನಕ್ಕೆ ಅನುಗುಣವಾಗಿದ್ದು, ಭಾರತದ Ease of Doing Business ಸುಧಾರಣೆಗೆ ಮಹತ್ವದ ಹೆಜ್ಜೆ ಎಂದರು.
