ಸಂಪುಟ ಸ್ಥಾನಮಾನ ತಿರಸ್ಕರಿಸಿದ ಯಡಿಯೂರಪ್ಪ
ಬೆಂಗಳೂರು:
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಗೆ ನೀಡಿದ್ದ ಸಂಪುಟ ದರ್ಜೆ ಸ್ಥಾನಮಾನವನ್ನು ಹಿಂದಕ್ಕೆ ಪಡೆಯಬೇಕೆಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸರ್ಕಾರವನ್ನು ಆಗ್ರಹ ಪಡಿಸಿದ್ದಾರೆ.
ತಮಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ರೀತಿ ಗುರುಕಾಣಿಕೆಯಾಗಿ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವಂತೆ ಆದೇಶ ಮಾಡಿದ್ದರು. ಏಕೋ ಏನೋ 24 ಗಂಟೆಯೊಳಗೆ ಸರಕಾರಿ ಆದೇಶವನ್ನು ಯಡಿಯೂರಪ್ಪ ನಯವಾಗಿಯೇ ತಿರಸ್ಕರಿಸಿದ್ದಾರೆ.

ಇಲ್ಲಿ ಓದಿ: ಯಡಿಯೂರಪ್ಪಗೂ ಸಂಪುಟ ದರ್ಜೆಯ ಸೌಲಭ್ಯಕೊಟ್ಟ ಸಿಎಂ ಬೊಮ್ಮಾಯಿ
ಈ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಯಡಿಯೂರಪ್ಪ, ನಿಕಟ ಪೂರ್ವ ಮುಖ್ಯಮಂತ್ರಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳು ಮಾತ್ರ ನನಗೆ ಸಾಕು. ಸಂಪುಟ ದರ್ಜೆಯ ಸ್ಥಾನ ನೀಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕೋರಿದ್ದಾರೆ.
