ಬೆಂಗಳೂರು:
ಮಳೆ ನೀರಿನಿಂದ ನೆರೆ ಉಂಟಾಗಿ ಸಂಕಷ್ಟಕ್ಕೆ ಒಳಗಾಗಿದ್ದ ರಾಜರಾಜೇಶ್ವರಿ ನಗರದ ಗುರುದತ್ತ ಬಡಾವಣೆಗೆ ಬುಧವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕೂಡಲೇ ಅಗತ್ಯ ಜಾಗಗಳಲ್ಲಿ ಇಂಗು ಗುಂಡಿಗಳನ್ನು ತೋಡುವುದು ಹಾಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಡಾವಣೆಯ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದ ಕೂಡಲೇ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರೆ ಅಧಿಕಾರಿಗಳೊಂದಿಗೆ ಧಾವಿಸಿಬಂದ ಡಿಸಿಎಂ, ಹಾನಿಗೊಳಗಾದ ಸ್ಥಳಗಳನ್ನು ಪರಿಶೀಲಿಸಿದರಲ್ಲದೆ, ಮತ್ತೆ ಮಳೆ ಬಂದರೆ ನೀರು ನುಗ್ಗದಂತೆ ತುರ್ತಾಗಿ ಈ ಕ್ಷಣದಿಂದಲೇ ಕೆಲಸ ಮಾಡುವಂತೆ ಸೂಚಿಸಿದರು.
![ಅಕ್ರಮ ಕಟ್ಟಡ ತೆರವು,ಇಂಗು ಗುಂಡಿ ನಿರ್ಮಾಣ ತುರ್ತು ಆದ್ಯತೆ : ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ 1 DCM visit Hosakerehalli](https://kannada.thebengalurulive.com/wp-content/uploads/2020/10/DCM-visit-Hosakerehalli.jpg)
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ; ಕಾಲುವೆಗಳ ಒತ್ತುವರಿ ಮತ್ತು ಕಾಂಕ್ರಿಟ್ ಹೆಚ್ಚುತ್ತಿರುವ ಕಾರಣದಿಂದ ಮಳೆ ನೀರು ಇಂಗುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಸುರಿದ ಮಳೆಯಲ್ಲ ರಸ್ತೆಗಳಲ್ಲಿ ಪ್ರವಾಹವಾಗಿ ಹರಿದು ಮನೆಗಳಿಗೆ ನೀರು ನುಗ್ಗುತ್ತಿದೆ. ತುರ್ತು ಆದ್ಯತೆಯ ಮೇರೆಗೆ ಇಂಗು ಗುಂಡಿಗಳನ್ನು ಮಾಡಲು ಸೂಚಿಸಲಾಗಿದೆ ಎಂದರು.
ಒತ್ತುವರಿ ತೆರವು
ಈಗಾಗಲೇ ರಾಜಕಾಲುವೆ ಹಾಗೂ ಮಳೆ ನೀರು ಹರಿದುಹೋಗುವ ಜಾಗಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ 1,100 ಕಟ್ಟಡಗಳನ್ನು ತೆರವು ಮಾಡಲಾಗಿದೆ. ಇನ್ನೂ 700 ಕಟ್ಟಡಗಳನ್ನು ತೆರವು ಮಾಡಬೇಕಿದೆ. ಕೋವಿಡ್ ಕಾರಣದಿಂದ ಈ ತೆರವು ವಿಳಂಬವಾಗಿದೆ. ನ್ಯಾಯಾಲಯವೂ ಈ ವೈರಸ್ ಪೀಡಿಯಿರುವ ಕಾಲದಲ್ಲಿ ತೆರವುಗೊಳಿಸಬೇಡಿ ಎಂದು ಆದೇಶ ನೀಡಿದ್ದು, ನವೆಂಬರ್ ನಂತರ ಮಾಡಿ ಎಂದು ಸೂಚಿಸಿದೆ. ಹೀಗಾಗಿ ಮಳೆಗಾಲದ ನಂತರ ಉಳಿದ ಅಕ್ರಮ ನಿರ್ಮಾಣಗಳನ್ನು ತಪ್ಪದೇ ತೆರವು ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
![ಅಕ್ರಮ ಕಟ್ಟಡ ತೆರವು,ಇಂಗು ಗುಂಡಿ ನಿರ್ಮಾಣ ತುರ್ತು ಆದ್ಯತೆ : ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ 2 DCM visit Hosakerehalli1](https://kannada.thebengalurulive.com/wp-content/uploads/2020/10/DCM-visit-Hosakerehalli1.jpg)
ಮಳೆಯ ನೀರು ಹರಿಯುವ ನಗರದ ಒಟ್ಟು 800 ಕಿ.ಮೀ ಉದ್ದದ ಕಾಲುವೆಗಳಲ್ಲಿ 400 ಕಿ.ಮೀ ಉದ್ದದ ಕಾಲುವೆಗಳನ್ನು ಆಧುನಿಕವಾಗಿ ನವೀಕರಣ ಮಾಡಲಾಗಿದೆ. ಉಳಿದ 400 ಕಿ.ಮೀ ಉದ್ದದ ಕಾಲುವೆಗಳನ್ನು ಆದಷ್ಟು ಬೇಗ ನವೀಕರಣ ಮಾಡಲಾಗವುದು. ಒಂದೆಡೆ ನವೀಕರಣ; ಮತ್ತೊಂದೆಡೆ ಅಕ್ರಮ ಕಟ್ಟಡಗಳ ತೆರವು ಎರಡನ್ನೂ ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುವುದು ಎಂದು ಡಿಸಿಎಂ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ರಾಜರಾಜೇಶ್ವರಿ ನಗರದ ಗುರುದತ್ತ ಬಡಾವಣೆ ಬಳಿ ಭಾರೀ ಮಳೆಗೆ ತಡೆಗೋಡೆ ಕುಸಿದು ಬಿದ್ದ ಸ್ಥಳಕ್ಕೆ ಭೇಟಿ ನೀಡಿ @BBMPCOMM ಅವರೊಂದಿಗೆ ಪರಿಶೀಲನೆ ನಡೆಸಿದೆ.
— Dr. Ashwathnarayan C. N. (@drashwathcn) October 21, 2020
ಇಂತಹ ಅನಾಹುತ ತಪ್ಪಿಸಲು ಮನೆಗಳಲ್ಲಿ Recharge Pits ನಿರ್ಮಾಣ, ಅಕ್ರಮ ಕಟ್ಟಡಗಳ ತೆರವು ಸೇರಿದಂತೆ ಶಾಶ್ವತ ಪರಿಹಾರದ ಕಾರ್ಯಗಳಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಕಾರ್ಯನಿರತವಾಗಿದೆ.
1/2 pic.twitter.com/yhsmOUHMBm
ಅಕ್ರಮ ಬಡಾವಣೆ, ರೆವಿನ್ಯೂ ಲೇಔಟ್
ನಗರದಲ್ಲಿ ಅಕ್ರಮ ಬಡಾವಣೆಗಳ ಜತೆಗೆ ರೆವಿನ್ಯೂ ಲೇಔಟ್ಗಳು ಹೆಚ್ಚಾಗಿದ್ದು, ಅಂಥ ಕಡೆ ಮಳೆ ನೀರು ಹರಿದು ಹೋಗುತ್ತಿಲ್ಲ. ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣದಿಂದ ಈ ಸಮಸ್ಯೆಗಳು ಉಂಟಾಗಿವೆ. ಇದೆಲ್ಲಕ್ಕೂ ಶಾಶ್ವತ ಪರಿಹಾರವನ್ನು ರೂಪಿಸುವ ನಿಟ್ಟಿನಲ್ಲಿ ಬಿಬಿಎಂಪಿ, ಜಲ ಮಂಡಳಿ, ಒಳ ಚರಂಡಿ ಮಂಡಳಿಗಳನ್ನು ಒಟ್ಟಾಗಿಸಿ ಕೆಲಸ ಮಾಡಲಾಗುತ್ತಿದೆ. ಅದರ ಫಲಿತಾಂಶ ಕೆಲ ದಿನಗಳಲ್ಲೇ ನಿಮಗೆ ಗೋಚರವಾಗಲಿವೆ ಎಂದು ಡಾ.ಅಶ್ವತ್ಥನಾರಾಯಣ ಹೇಳದರು.