Home Uncategorized ಆಘಾತ ಆಗಬೇಕಾದ್ದು ಮಕ್ಕಳ ಬ್ಯಾಗ್​ನಲ್ಲಿ ಕಾಂಡೋಮ್ ಸಿಕ್ಕಿದ್ದಕ್ಕಲ್ಲ; ಕರ್ನಾಟಕದಲ್ಲಿ ಗರಿಗೆದರಿದೆ ಮಕ್ಕಳ ಮುಗ್ಧತೆಯ ಚರ್ಚೆ

ಆಘಾತ ಆಗಬೇಕಾದ್ದು ಮಕ್ಕಳ ಬ್ಯಾಗ್​ನಲ್ಲಿ ಕಾಂಡೋಮ್ ಸಿಕ್ಕಿದ್ದಕ್ಕಲ್ಲ; ಕರ್ನಾಟಕದಲ್ಲಿ ಗರಿಗೆದರಿದೆ ಮಕ್ಕಳ ಮುಗ್ಧತೆಯ ಚರ್ಚೆ

16
0
Advertisement
bengaluru

ಬೆಂಗಳೂರು: ನಗರದ ಕೆಲ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲಾ ವಿದ್ಯಾರ್ಥಿಗಳ ಬ್ಯಾಗ್​ಗಳಲ್ಲಿ ಕಾಂಡೋಮ್ , ಗರ್ಭನಿರೋಧಕ ಮಾತ್ರೆ (ಐ-ಪಿಲ್), ಸಿಗರೇಟ್​, ಮದ್ಯ ಪತ್ತೆಯಾದ ವಿದ್ಯಮಾನವು ಇದೀಗ ರಾಷ್ಟ್ರೀಯ ಸುದ್ದಿಯಾಗಿದೆ. ಪೋಷಕರು, ಪ್ರಜ್ಞಾವಂತರು, ಸಾಹಿತಿಗಳು, ಸಮಾಜಪರ ಚಿಂತಕರು ಈ ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ‘ಸ್ಮಾರ್ಟ್​ಫೋನ್​, ಗ್ಯಾಜೆಟ್​ಗಳು ಮಕ್ಕಳ ಬಾಲ್ಯ ಮತ್ತು ಮುಗ್ಧತೆಯನ್ನು ಕಸಿಯುವಂತೆ ಆಗಬಾರದು. ಮಕ್ಕಳ ಬಗ್ಗೆ ಪೋಷಕರು ಹಾಗೂ ಶಾಲಾ ಸಿಬ್ಬಂದಿ ಮತ್ತಷ್ಟು ಎಚ್ಚರವಹಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಫೇಸ್​ಬುಕ್ ಪೋಸ್ಟ್​ನಲ್ಲಿ ಪ್ರತಿಕ್ರಿಯಿಸಿದ್ದ ಸಾಹಿತಿ ಮತ್ತು ಪ್ರಕಾಶಕ ವಸುಧೇಂದ್ರ, ‘ಮಕ್ಕಳಿಗೆ ಈ ಮಟ್ಟಿನ ಲೈಂಗಿಕ ಸುರಕ್ಷೆಯ ಅರಿವು ಇದ್ದರೆ ಅದು ಒಳ್ಳೆಯದು. ಕೈಬೆರಳ ತುದಿಯಲ್ಲಿ ಮಾಹಿತಿ ಸಿಗುವ ಈ ದಿನಗಳಲ್ಲಿ ಲೈಂಗಿಕ ವಿಷಯಗಳನ್ನು ಗುಪ್ತವಾಗಿ ಇಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಶ್ವಿನಿ ಅಶೋಕ್, ‘ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡ ಮಾತ್ರಕ್ಕೆ ಲೈಂಗಿಕತೆಯನ್ನು ಚಿಕ್ಕ ವಯಸ್ಸಿನಲ್ಲೇ ಅನುಭವಿಸಬಹುದು ಎನ್ನುವುದನ್ನು ಒಪ್ಪಲಾಗದು’ ಎಂದು ಹೇಳಿದ್ದರು.

ಕೆಲ ಹೊತ್ತಿನ ತಮ್ಮದೇ ಪೋಸ್ಟ್​ಗೆ ಮತ್ತೊಂದು ವಿವರಣೆ ನೀಡಿದ ಅವರು, ‘ಪುಸ್ತಕದ ಮಧ್ಯೆ ಮರಿಹಾಕುವ ನವಿಲುಗರಿ ಇಡುವ ಮಕ್ಕಳು ಬೇಕು ಎನ್ನುವುದು ಬಾಲಿಶವಾಗುತ್ತದೆ. ಇಂದಿನ ಮಾಹಿತಿ ಸ್ಫೋಟದ ಯುಗದಲ್ಲಿ ಅಂತಹ ಮುಗ್ಧತೆ ಸಾಧ್ಯವಿಲ್ಲ. ವಯಸ್ಸು ದಾಟಿದ ಮೇಲೆ ಹೊಸ ಹುಡುಗರ ಬಾಲ್ಯವನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ. ಏನೇ ಆಗಲಿ, ಸರಿಯಾದ ಪರಿಹಾರದ ಅಗತ್ಯವಿದೆ’ ಎಂದು ತಿಳಿಸಿದ್ದರು.

ಭಾರತೀಯತೆ, ಹಿಂದುತ್ವವನ್ನು ಪ್ರತಿಪಾದಿಸುವ ಚಿಂತಕ ರೋಹಿತ್ ಚಕ್ರತೀರ್ಥ ಈ ವಿದ್ಯಮಾನದ ಬಗ್ಗೆ ಕವನವೊಂದನ್ನು ಪೋಸ್ಟ್​ ಮಾಡಿದ್ದಾರೆ. ತಮ್ಮ ಕಾಲದ ಬಾಲ್ಯದಲ್ಲಿ ಹುಡುಗರ ಬ್ಯಾಗ್, ಪುಸ್ತಕಗಳ ಹಾಳೆಯ ನಡುವೆ ಏನೆಲ್ಲಾ ಇರುತ್ತಿತ್ತು ಎಂಬುದನ್ನು ಪ್ರಸ್ತಾಪಿಸಿರುವ ಅವರು, ‘ಸಿಕ್ಕಿದೆಯಂತೆ ಯಾರೋ ಟೀಚರಿಗೆ, ಈಗಿನ ಹುಡುಗರ ಬ್ಯಾಗುಗಳಲ್ಲಿ ಕಾಂಡೋಮು, ಅದ ಕೇಳಿ ನೀವು, ಹೆತ್ತವರೊ ದೊಡ್ಡವರೊ ಶಿಕ್ಷಕರೊ, ಮತ್ತು ಒಂದಾನೊಂದು ಕಾಲದ ಶಾಲಾಹುಡುಗರೊ, ಆಗಿದ್ದರೆ ಆಘಾತ ಆಗಲೇಬೇಕು, ಆಘಾತ ಆಗಬೇಕಾದ್ದು ಕಾಂಡೋಮ್ ಸಿಕ್ಕಿದ್ದಕ್ಕಲ್ಲ; ಮೇಲಿನವೊಂದೂ ಸಿಕ್ಕದ್ದಕ್ಕೆ’ ಎಂದು ಕವನ ಮುಗಿಸಿದ್ದಾರೆ.

bengaluru bengaluru

ಇದನ್ನೂ ಓದಿ: ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಸ್ಕೂಲ್​ಬ್ಯಾಗ್​ನಲ್ಲಿ ಕಾಂಡೋಮ್, ನೀರಿನ ಬಾಟಲಿಯಲ್ಲಿ ಮದ್ಯ ಪತ್ತೆ; ಶಿಕ್ಷಕರಿಗೆ ಆಘಾತ

ಬೆಚ್ಚಿ ಬೀಳದೇ ಇರಲಾರೆ

‘ಜೀವನದ ಹಲವು ವಿಚಾರಗಳಲ್ಲಿ ಸೆಕ್ಸು ಸೆಕ್ಸುವಾಲಿಟಿ ಎಲ್ಲವೂ ಇರಲಿ. ಆದರೆ ಏಳನೇ ತರಗತಿಯ ಮಕ್ಕಳ ಚೀಲದಲ್ಲಿ ಅದಕ್ಕೆ ಸ್ಥಳ ಕೊಡುವಷ್ಟು ಮುಂದುವರಿದ ಸಮುದಾಯವನು ನಾನಲ್ಲ. ಕಾಂಡೋಂ ಯಾವತ್ತಿಗೂ ಸೇಫ್ ಅಲ್ಲ ಗೊತ್ತಿದ್ದೂ, ಐಪಿಲ್ಲುಗಳು 22ರ ನಂತರವೂ ಅಪಾಯಕಾರಿ ಅಂತಾ ಗೊತ್ತಿದ್ದೂ…..13-14ನೇ ವಯಸ್ಸಿನ ಮಕ್ಕಳು ಅದನ್ನು ಬಳಸುವುದನ್ನು ಕಂಡು ಬೆಚ್ಚಿಬೀಳದೇ ಇರಲಾರೆ’ ಎಂದು ರಾಘವೇಂದ್ರ ಮೆಣಸೆ ಬರೆದುಕೊಂಡಿದ್ದಾರೆ. ಇವು ತಮ್ಮ ಪೋಸ್ಟ್​ನಲ್ಲಿ ‘ಸಲಿಂಗಕಾಮ’ ಪದವನ್ನೂ ವಿಶ್ಲೇಷಿಸಿದ್ದಾರೆ. ಇದೂ ಸಹ ಚರ್ಚೆ ಹುಟ್ಟುಹಾಕುವ ಸಾಧ್ಯತೆಯಿದೆ. ‘ಸ್ನೇಹಿತ ರೋಹಿತ್ ಕೂಡಾ ಒಂದು ಸಲ ಸಲಿಂಗಕಾಮ ಅನ್ನುವ ಪದದ ಬಗ್ಗೆ ಬರೆಯುವಾಗ ಅದ್ಯಾಕೆ ಈ ಸಂಬಂಧದಲ್ಲಿ ಕಾಮ ಅನ್ನೋದೇ ಮುಂಚೂಣಿಯಲ್ಲಿದೆ? ಸಲಿಂಗಸ್ನೇಹ, ಸಲಿಂಗಾಕರ್ಷಣೆ ಅಥವಾ ಸಲಿಂಗಪ್ರೇಮ ಯಾಕಿಲ್ಲ? ಯಾಕೆ ಈ ಪದಗಳನ್ನು ಸ್ವತಃ ಆ ಸಮುದಾಯವರೇ ಮುಖ್ಯವಾಹಿನಿಗೆ ತರಲು ಹಿಂಜರಿಯುತ್ತಾರೆ’ ಎಂದು ರಾಘವೇಂದ್ರ ನೆನಪಿಸಿಕೊಂಡಿದ್ದಾರೆ.

ಮತ್ತೋರ್ವ ಬರಹಗಾರ ರಾಧಾಕೃಷ್ಣ ಕೌಂಡಿನ್ಯ ಅವರು ಈ ಬೆಳವಣಿಗೆಯ ಬಗ್ಗೆ 9 ಅಂಶಗಳಲ್ಲಿ ತಮ್ಮ ವಿಶ್ಲೇಷಣೆ ಮುಂದಿಟ್ಟಿದ್ದಾರೆ. ‘ಬರೆಯುತ್ತಾ ಹೋದರೆ ಸಾವಿರ ಕಾರಣಗಳಿವೆ. ಶಿಕ್ಷಣ ಹಾಳಾದರೆ ಒಂದು ತಲೆಮಾರು ಅನುಭವಿಸುತ್ತದೆ. ಸಮಾಜವೇ ಹಾಳಾದರೆ ಭವಿಷ್ಯದಲ್ಲಿ ಉಳಿಸಲೇನೂ ಇರುವುದೇ ಇಲ್ಲ’ ಎಂದು ತಮ್ಮ ಪೋಸ್ಟ್​ನ ಕೊನೆಗೆ ತೀವ್ರ ಆತಂಕವನ್ನೂ ತೋಡಿಕೊಂಡಿದ್ದಾರೆ. ಈ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಅಂಜಲಿ ರಾಮಣ್ಣ, ‘ಆರೋಗ್ಯ ಮತ್ತು ಜೀವಿತಾವಧಿ ಹೆಚ್ಚಿರುವುದರಿಂದ ಅಜ್ಜಿ ತಾತಂದಿರು ಇನ್ನೂ ಶಕ್ತಿಯುತವಾಗಿ ಇರುತ್ತಾರೆ. ಅವರುಗಳು ಈಗ ಆರ್ಥಿಕವಾಗಿಯೂ ಸಬಲರು. ಬಾಕಿ ಉಳಿದ ಆಸೆಗಳನ್ನು ಪೂರೈಸಿಕೊಳ್ಳಲು ಬಯಸುತ್ತಿದ್ದಾರೆ. ಬಹುಪಾಲು ತಾಯ್ತಂದೆಯರು ತಮ್ಮ ಮಕ್ಕಳು ಸ್ಪೆಷಲ್ ಅಂತಲೇ ಭಾವಿಸುವುದು. ಅವರಿಗೆ ಸಾಮಾನ್ಯತೆಯನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಮಕ್ಕಳ ಮನಸ್ಥಿತಿ ಕುರಿತು ತಜ್ಞರು ಏನಂತಾರೆ?

ಶಾಲಾ ಬ್ಯಾಗ್​ಗಳಲ್ಲಿ ಕಾಂಡೋಮ್ ಪತ್ತೆಯ ನಂತರ ಫೇಸ್​ಬುಕ್​ನಲ್ಲಿ ಚರ್ಚೆ ನಡೆಯುತ್ತಿದೆ.

ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ

ಮಕ್ಕಳ ಬ್ಯಾಗ್​ಗಳಲ್ಲಿ ಕಾಂಡೋಮ್ ಮತ್ತು ಐ-ಪಿಎಲ್​ನಂಥ ಗರ್ಭನಿರೋಧಕ ಸಾಧನಗಳು ದೊರಕಿರುವುದು ಕರ್ನಾಟಕದಲ್ಲಿ ಮತ್ತೊಮ್ಮೆ ಮಕ್ಕಳಿಗೆ ಲೈಂಗಿಕ ಶಿಕ್ಷಣ ಹೇಗೆ ಕೊಡಬೇಕು ಎಂಬ ಚರ್ಚೆಗೂ ಕಾರಣವಾಗಿದೆ. ಹದಿಹರೆಯದಲ್ಲಿ ಆಗುವ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗಳನ್ನು ಹೇಗೆ ಅರ್ಥಿಸಿಕೊಳ್ಳಬೇಕು ಎನ್ನುವ ಬಗ್ಗೆ ಔಪಚಾರಿಕವಾಗಿಯೇ ಅರಿವು ಮೂಡಿಸಿದರೆ ಅನಗತ್ಯ ಗೊಂದಲಗಳು ಉಳಿಯುವುದಿಲ್ಲ. ಸರ್ಕಾರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗೂ ಮಡಿವಂತಿಕೆಯ ದೃಷ್ಟಿಯಿಂದ ನೋಡಬಾರದು’ ಎಂಬ ಅಭಿಪ್ರಾಯವನ್ನು ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳಾದ ವಿ.ಪಿ.ನಿರಂಜನಾರಾಧ್ಯ, ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಜಿ.ರಾಮಕೃಷ್ಣ, ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ಧರಾಮಯ್ಯ, ಕಾಳೇಗೌಡ ನಾಗವಾರ, ವಸುಂಧರಾ ಭೂಪತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಓದು ಮಗು ಓದು: ಆನ್​ಲೈನ್​ ಶಿಕ್ಷಣ ಮತ್ತು ಸಿರಿಧಾನ್ಯ ತಿಂದ ಕೋಳಿ!

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಬರಹ, ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here