ಮಹಾ ಶಿವರಾತ್ರಿಯ ದಿನವಾದ ಶನಿವಾರ ಕಲಬುರಗಿ ಜಿಲ್ಲೆ ಆಳಂದದ ಲಾಡ್ಲೆ ಮಶಾಕ ದರ್ಗಾ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಉರುಸ್ ಮತ್ತು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಶಾಂತಯುತವಾಗಿ ನಡೆಯಿತು. ಆಳಂದ: ಮಹಾ ಶಿವರಾತ್ರಿಯ ದಿನವಾದ ಶನಿವಾರ ಕಲಬುರಗಿ ಜಿಲ್ಲೆ ಆಳಂದದ ಲಾಡ್ಲೆ ಮಶಾಕ ದರ್ಗಾ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಉರುಸ್ ಮತ್ತು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಶಾಂತಯುತವಾಗಿ ನಡೆಯಿತು.
ಕರ್ನಾಟಕ ವಕ್ಫ್ ನ್ಯಾಯಮಂಡಳಿ ಮತ್ತು ಹೈಕೋರ್ಟ್ ಕಲಬುರಗಿ ಪೀಠದ ನಿರ್ದೇಶನದಂತೆ ಲಾಡ್ಲೆ ಮಶಾಕ ದರ್ಗಾ ಮತ್ತು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ 15 ಸದಸ್ಯರ ಪಟ್ಟಿಯನ್ನು ದರ್ಗಾದ ಆಡಳಿತ ಮಂಡಳಿ ಮತ್ತು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷರು ಆಗಿರುವ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಸಲ್ಲಿಸಿದ್ದರು.
ಜಿಲ್ಲಾಡಳಿತ ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಮಧ್ಯರಾತ್ರಿಯವರೆಗೂ ಸಿಆರ್ ಪಿಸಿ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿತ್ತು. 11 ಕೆಎಸ್ ಆರ್ ಪಿ, 4 ಡಿಎಆರ್ ತುಕಡಿ ಸೇರಿದಂತೆ ಸುಮಾರು 1,000 ಪೊಲೀಸರನ್ನು ಭದ್ರತೆಯಾಗಿ ನಿಯೋಜಿಸಲಾಗಿತ್ತು. ಅಲ್ಲದೇ, ಕಣ್ಗಾವಲುಗಾಗಿ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗಿತ್ತು.
ದರ್ಗಾದ ಆಡಳಿತ ಮಂಡಳಿ ಪ್ರಾರ್ಥನೆ ಸಲ್ಲಿಸುವ 15 ಸದಸ್ಯರ ಪಟ್ಟಿಯನ್ನು ಸಲ್ಲಿಸಿದ್ದರೂ, ದರ್ಗಾದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೊಯಿಜ್ ಅನ್ಸಾರಿ ಕಾರಭಾರಿ, ಆಸಿಫ್ ಅನ್ಸಾರಿ ಕಾರಭಾರಿ, ನೂರುದ್ದೀನ್ ಅನ್ಸಾರಿ ಸೇರಿದಂತೆ 14 ಸದಸ್ಯರು ಮಾತ್ರ ವಕ್ಫ್ ಟ್ರಿಬ್ಯೂನಲ್ ನಿರ್ದೇಶನದಂತೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಪ್ರಾರ್ಥನೆ ಸಲ್ಲಿಸಿ ‘ಗಂಧ’ ವಿಧಿ ನೆರವೇರಿಸಿದರು.
ನಂತರ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೆ ಸಿದ್ದಲಿಂಗ ಸ್ವಾಮೀಜಿ, ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಆಳಂದ ಶಾಸಕ ಸುಭಾಷ ಗುತ್ತೇದಾರ್, ಕಲಬುರಗಿ-ಗ್ರಾಮೀಣ ಶಾಸಕ ಬಸವರಾಜ ಮಟ್ಟಿಮೂಡು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ 15 ಸದಸ್ಯರು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ನ್ಯಾಯಮಂಡಳಿ ಮತ್ತು ಹೈಕೋರ್ಟ್ ನಿರ್ದೇಶನದಂತೆ ಶಾಂತಿಯುತವಾಗಿ ಪೂಜೆ ಸಲ್ಲಿಸಿದ್ದೇವೆ. ಮುಂದೆ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಕಾನೂನು ಹೋರಾಟದಲ್ಲಿ ಜಯಗಳಿಸಿ ಭವ್ಯವಾದ ಮಂದಿರ ನಿರ್ಮಾಣ ಮಾಡುವ ವಿಶ್ವಾಸವಿದೆ ಎಂದರು. ಈ ಸ್ಥಳದಲ್ಲಿ ಮೊದಲು ಕಾಳಿ ಮಂದಿರ ಇತ್ತು. ನಿಜಾಮರ ಕಾಲದಲ್ಲಿ ಇದನ್ನು ಕೆಡವಿ, ದರ್ಗಾ ನಿರ್ಮಿಸಲಾಯಿತು ಎಂದು ಅವರು ತಿಳಿಸಿದರು.
ಜಿಲ್ಲಾಡಳಿತವ ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಹಿಂದೂ ಮುಖಂಡರು ಆಳಂದ ಪಟ್ಟಣದ ಹೊರಗೆ ವಿವಿಧ ರೀತಿಯ ಪೂಜೆಗಳನ್ನು ನೆರವೇರಿಸಿದರು.