Home Uncategorized ಫೆ.24ರಂದು ವಿಟಿಯು ಘಟಿಕೋತ್ಸವ: 18 ಚಿನ್ನದ ಪದಕ ಪಡೆದ ಬೆಂಗಳೂರಿನ ಮುರಳಿ ಎಸ್

ಫೆ.24ರಂದು ವಿಟಿಯು ಘಟಿಕೋತ್ಸವ: 18 ಚಿನ್ನದ ಪದಕ ಪಡೆದ ಬೆಂಗಳೂರಿನ ಮುರಳಿ ಎಸ್

26
0

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಫೆ.24ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು, ವಿವಿಧ ವಿಷಯಗಳಲ್ಲಿ ಸಾಧನೆ ತೋರಿದ 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ. ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಫೆ.24ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು, ವಿವಿಧ ವಿಷಯಗಳಲ್ಲಿ ಸಾಧನೆ ತೋರಿದ 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ.

ನಿನ್ನೆಯಷ್ಟೇ ಟಾಪ್ 10 ರ್ಯಾಂಕ್ ಪಡೆದವರ ಪಟ್ಟಿಯನ್ನು ವಿಟಿಯು ಉಪಕುಲಪತಿ ಪ್ರೊ.ವಿದ್ಯಾಶಂಕರ್ ಅವರು ಬಿಡುಗಡೆ ಮಾಡಿದರು.

ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ ಎಸ್‌.ಮುರಳಿ ಅವರು ಒಟ್ಟು 18 ಚಿನ್ನದ ಪದಕ ಪಡೆದಿದ್ದು, ವಿಶ್ವವಿದ್ಯಾಲಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಒಬ್ಬ ವಿದ್ಯಾರ್ಥಿ ಇಷ್ಟು ಚಿನ್ನದ ಪದಕ ಪಡೆದುಕೊಂಡಿರುವುದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲು ಎಂದು ವಿದ್ಯಾಶಂಕರ್ ಅವರು ಹೇಳಿದ್ದಾರೆ.

ಕುರಂಜಿ ವೆಂಕಟರಮನ್ ಗೌಡ ಕಾಲೇಜು ಆಫ್ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಎಸ್.ಕೃತಿ 8 ಚಿನ್ನದ ಪದಕ, ಬೆಂಗಳೂರು ಎ.ಸಿ.ಎಸ್. ಕಾಲೇಜ್‌ ಆಫ್ ಎಂಜಿನಿಯರಿಂಗ್‌’ನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಎಸ್.ಸ್ವಾತಿ 7 ಚಿನ್ನದ ಪದಕ ಪಡೆದು ನಂತರದ ಸ್ಥಾನದಲ್ಲಿದ್ದಾರೆ.‌

ಅದೇ ರೀತಿ, ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಎಸ್.ವಿ.ಸುಶ್ಮಿತಾ 6 ಚಿನ್ನದ ಪದಕ, ಬಿ.ಎನ್.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಪೂಜಾ ಬಾಸ್ಕರ್ 6, ಬೆಂಗಳೂರಿನ ಆರ್.ಎನ್.ಎಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರುಮೆಂಟೇಷನ್‌ ವಿಭಾಗದ ಎಂ.ಅಭಿಲಾಷ 4, ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಇನ್ಫರ್ಮೇಷನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಯುವಿಕಾ ರಮೇಶ್‌ಬಾಬು 4, ಆರ್.ಎನ್.ಎಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಎಂಬಿಎ ವಿಭಾಗದ ಜೆ.ಹರ್ಷವರ್ಧಿನಿ 4, ಬಿಎಂಎಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಯು.ಕೆ.ಅರ್ಜುನ್‌ 3 ಹಾಗೂ ದಾವಣಗೆರೆ ಯುಬಿಟಿಡಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಂ.ಟೆಕ್ ವಿಭಾಗದ ಜಿ.ಆರ್.ಸಂಗೀತ 2 ಚಿನ್ನದ ಪದಕ ಪಡೆದಿದ್ದಾರೆಂದು ಹೇಳಿದರು.

ಬಿಐಟಿ, ಬೆಂಗಳೂರು ಯುಜಿ ಮತ್ತು ಪಿಜಿ ವಿಭಾಗದಲ್ಲಿ 28 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಶ್ರೇಣಿಗಳನ್ನು ಹೊಂದಿರುವ ಕಾಲೇಜುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬೆಂಗಳೂರಿನ ಆರ್‌ಎನ್‌ಎಸ್ 21 ಪದಕಗಳನ್ನು ಪಡೆದರೆ, ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ 16 ಪದಕಗಳನ್ನು ಪಡೆದುಕೊಂಡಿದೆ. ಇನ್ನು ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು 14 ಪದಕಗಳನ್ನು ಪಡೆದುಕೊಂಡಿದ್ದು, ಬೆಂಗಳೂರಿನ ಸರ್ ಎಂವಿಐಟಿ ಕಾಲೇಜು 13 ಪದಕಗಳನ್ನು ಬಾಚಿಕೊಂಡಿದೆ.

‘ಪದವಿ ಪೂರ್ಣಗೊಳಿಸಲು ಸುವರ್ಣಾವಕಾಶ’
ಏಪ್ರಿಲ್ 1, 1998 ರಂದು ಸ್ಥಾಪಿತವಾದ ವಿಟಿಯು, ಬೆಳಗಾವಿ 2022-23 ರ ಅವಧಿಯಲ್ಲಿ ಬೆಳ್ಳಿ ಮಹೋತ್ಸವ ವರ್ಷವನ್ನು ಆಚರಿಸುತ್ತಿದೆ. ಈ ಆಚರಣೆಯ ಸಂದರ್ಭದಲ್ಲಿ, ವಿವಿಧ ಕಾರಣಗಳಿಂದಾಗಿ ತಮ್ಮ ಪದವಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಹಳೆಯ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವನ್ನು ನೀಡಿದೆ.

ಎಷ್ಟೇ ವರ್ಷಗಳ ಹಿಂದೆ, ಎಷ್ಟೇ ವಿಷಯಗಳು ಅಪೂರ್ಣ ಆಗಿದ್ದರೂ ಈಗ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ’ ಎಂದು ಪ್ರೊ.ವಿದ್ಯಾಶಂಕರ ಅವರು ತಿಳಿಸಿದರು.

‘ಫೆಬ್ರುವರಿ ಅಂತ್ಯದಲ್ಲೇ ಇದರ ಎಲ್ಲ ವಿವರಗಳನ್ನು ಜಾಲತಾಣದಲ್ಲಿ ನೀಡಲಾಗುವುದು. 9,159 ಬಿಇ ವಿದ್ಯಾರ್ಥಿಗಳು, 1,247 ಎಂ.ಟೆಕ್‌ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಪದವಿಗಳ ಒಟ್ಟು 13,329 ಮಂದಿ ತಮ್ಮ ಪದವಿ ಅಪೂರ್ಣ ಮಾಡಿದ್ದಾರೆ. ಇವರನ್ನೂ ಪದವೀಧರ ಎಂದು ಹೇಳಿಕೊಳ್ಳುವಂತೆ ಮಾಡಲು ವಿಶೇಷ ಪರೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here