ಇತ್ತೀಚೆಗೆ ಹಾಸನ ನಗರದಲ್ಲಿ ಕಳ್ಳನೆಂದು ಶಂಕಿಸಿ ದಲಿತ ಕಾರ್ಮಿಕನ ಮೇಲೆ ಹಾಸನ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಹರೀಶ್ ಅವರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಾಸನ: ಇತ್ತೀಚೆಗೆ ಹಾಸನ ನಗರದಲ್ಲಿ ಕಳ್ಳನೆಂದು ಶಂಕಿಸಿ ದಲಿತ ಕಾರ್ಮಿಕನ ಮೇಲೆ ಹಾಸನ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಹರೀಶ್ ಅವರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಈ ಬಗ್ಗೆ ಯಾರಿಗಾದರೂ ಹೇಳಿದರೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಎಎಸ್ಐ ಬೆದರಿಕೆ ಹಾಕಿದ್ದರಿಂದ ಹೆದರಿದ ದಲಿತ ಕಾರ್ಮಿಕ ಶೇಖರ್ ಘಟನೆಯ ನಂತರ ತಕ್ಷಣವೇ ದೂರು ದಾಖಲಿಸಲಿಲ್ಲ ಎಂದು ವರದಿಯಾಗಿದೆ.
ಘಟನೆ ನಡೆದ ಎರಡು ದಿನಗಳ ನಂತರ ಗಾಯಾಳು ಶೇಖರ್ ಪತ್ನಿ ಸುಧಾ ಅವರು ಎಎಸ್ಐ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಪಟ್ಟಣ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಹರೀಶ್ ತನ್ನ ಪತಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬೇಲೂರು ತಾಲೂಕಿನ ಅಪ್ಪಗೌಡನಹಳ್ಳಿ ಗ್ರಾಮದ ಶೇಖರ್ ರಾತ್ರಿ 10.30ರ ಸುಮಾರಿಗೆ ಬಸ್ಸಿನಿಂದ ಇಳಿದು ಹಾಸನದ ಹಳೇ ಮಾರ್ಕೆಟ್ ಬಳಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ಪೊಲೀಸರು ಹಲ್ಲೆ ನಡೆಸಿದ್ದಾರೆ.
ಹಾಸನ ನಗರ ಠಾಣೆಯ ಎಎಸ್ಐ ಹರೀಶ್ ಮತ್ತು ಸಿಬ್ಬಂದಿ ಏಕಾಏಕಿ ಶೇಖರ್ ಮೇಲೆ ಕಳ್ಳತನದ ಆರೋಪ ಹೊರಿಸಿ ಹೊಡೆದಿದ್ದಾರೆ. ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದೀಯ ಎಂದು ಗದರಿಸಿ ವಾಚಾಮ ಗೋಚರವಾಗಿ ನಿಂದಿಸಿ, ನೆಲದ ಮೇಲೆ ಬೀಳಿಸಿ ಬಟ್ಟೆಹರಿದು ಹಾಕಿದ್ದಾರೆ. ಬೂಟು ಕಾಲಿನಿಂದ ಒದ್ದಿದ್ದಾರೆ. ಕೈ ಮೂಳೆ ಮುರಿದು ಹೋಗುವ ಹಾಗೆ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆ ನಡೆಸಿದ ಎಎಸ್ಐ ಹರೀಶ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಭೀಮ್ ಆರ್ಮಿಯ ಸದಸ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪ್ರಾಥಮಿಕವಾಗಿ ಎಎಸ್ಐ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಕಾರ್ಮಿಕನ ಕುಟುಂಬಕ್ಕೆ ಇಲಾಖೆಯಿಂದ Rs 10 ಪರಿಹಾರ ನೀಡಬೇಕು ಮತ್ತು ಎಎಸ್ಐ ಹರೀಶ್ ರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.