ಬೆಂಗಳೂರು:
ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಇಂದು ಬೆಳ್ಳಂಬೆಳಗ್ಗೆ 9 ಅಧಿಕಾರಿಗಳಿಗೆ ಸೇರಿದ ರಾಜ್ಯದ 11 ಜಿಲ್ಲೆಗಳ 28 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಅಕ್ರಮ ಸಂಪತ್ತು ಹೊಂದಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ 9 ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಚಿಕ್ಕಬಳ್ಳಾಪುರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರಿಗೆ ಸೇರಿದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಮನೆ, ಕಚೇರಿ, ಅವರ ಸಹೋದರನ ಕೋಲಾರದ ಮನೆಯ ಮೇಲೆ ಕೇಂದ್ರ ವಲಯದ ಪೊಲೀಸ್ ವರಿಷ್ಠಾಧಿಕಾರಿ ಕಲಾ ಕೃಷ್ಣಮೂರ್ತಿಯವರ ತಂಡ ದಾಳಿ ನಡೆಸಿದೆ.
ಯಾದಗಿರಿಯಲ್ಲಿ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ನಿರೀಕ್ಷೆಗೆ ಮೀರಿದ ಹಣ, ಚಿನ್ನವನ್ನು ಪತ್ತೆ ಮಾಡಿದೆ.
ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ಜೆಸ್ಕಾಮ್ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ.
ಇನ್ನೊಂದೆಡೆ ಮಂಡ್ಯದ ಆರ್.ಟಿ.ಒ. ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಎ.ವಿ. ಚೆನ್ನವೀರಪ್ಪ ಎಂಬುವವರ ಮನೆ ಮೇಲೆ ಸಹ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಡ್ಯದ ಕುವೆಂಪುನಗರದ ಮನೆ, ತಾಲೂಕಿನ ಅಲಕೆರೆಯಲ್ಲಿನ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ.ಈ ವೇಳೆ ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದ್ದು ಎರಡೂ ಕಡೆಗಳಲ್ಲಿ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಎಸಿಬಿ ದಾಳಿ ನಡೆಸಿರುವ ಒಂಬತ್ತು ಅಧಿಕಾರಿಗಳ ವಿವರ ಹೀಗಿದೆ-
ಬಿಎಂಟಿಎಫ್ ಪೊಲೀಸ್ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್
ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆಗಳ ಕಿರಿಯ ಎಂಜಿನಿಯರ್ ಕೆ.ಸುಬ್ರಮಣ್ಯಂ
ದಾವಣಗೆರೆ ವಿಭಾಗದ ಫ್ಯಾಕ್ಟರೀಸ್ ಮತ್ತು ಬಾಯ್ಲರ್ನ ಉಪನಿರ್ದೇಶಕ ಕೆ.ಎಂ. ಪ್ರಥಮ್
ಮೈಸೂರು ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ.ಯಾದವ್
ಮೈಸೂರಿನ ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮುನಿಗೋಪಾಲ ರಾಜ್
ಮೈಸೂರು ದಕ್ಷಿಣ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ
ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಹನುಮಂತ ಶಿವಪ್ಪ ಚಿಕ್ಕಣ್ಣ
ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ
ಯಾದಗಿರಿಯ ಜೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ್