ಬೆಂಗಳೂರು:
ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದ ಸ್ಥಳದಲ್ಲಿನ ಹೊಂಡಕ್ಕೆ ಬಿದ್ದು 6 ವರ್ಷದ ಬಾಲಕಿ ಶನಿವಾರ ಮೃತಪಟ್ಟಿದ್ದಾಳೆ. ಮೃತ ಮಗುವನ್ನು ಮಹೇಶ್ವರಿ ಎಂದು ಗುರುತಿಸಲಾಗಿದೆ.
ಶುಕ್ರವಾರ ತಡರಾತ್ರಿ ಲಿಫ್ಟ್ ಅಳವಡಿಕೆಗಾಗಿ ಮಾಡಿದ್ದ ಹೊಂಡಕ್ಕೆ ಮಗು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಂಡದಲ್ಲಿ ನೀರು ತುಂಬಿತ್ತು. ಇದನ್ನು ತಿಳಿಯದ ಮಗುವಿನ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಬೆಳಗ್ಗೆ ಶವ ಹೊರ ಬಂದಾಗ ಮಾತ್ರ ಮಗು ಬಿದ್ದಿರುವ ವಿಚಾರ ತಿಳಿದುಬಂದಿದೆ.
ಆಕೆಯ ಪೋಷಕರು ಸುಲ್ತಾನ್ಪೇಟೆಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಆವರಣದಲ್ಲಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ.
ಕಟ್ಟಡವು ವಿಕ್ರಮ್ ಎಂಬುವವರಿಗೆ ಸೇರಿದ್ದಾಗಿದ್ದು, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕೆ.ಆರ್. ಮಾರ್ಕೆಟ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.