ನಾಗಪುರ/ಬೆಂಗಳೂರು:
139 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಪಾಟ್ನಾಕ್ಕೆ ಹೊರಟಿದ್ದ ‘ಗೋ ಏರ್’ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಎಂಜಿನ್ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ತುರ್ತಾಗಿ ಇಳಿಯಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಗೋ ಏರ್’ ವಿಮಾನದ ಪೈಲಟ್ ನಾಗಪುರ ಎಟಿಸಿಯನ್ನು ಸಂಪರ್ಕಿಸಿ, ವಿಮಾನದ ಎಂಜಿನ್ನಲ್ಲಿ ಸಮಸ್ಯೆ ಇದೆ ಎಂದು ತಿಳಿಸಿದರು. ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಿಕೊಂಡರು. ಬೆಳಗ್ಗೆ 11.15ಕ್ಕೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಅಬಿದ್ ರೂಹಿ ಪಿಟಿಐಗೆ ತಿಳಿಸಿದ್ದಾರೆ.
Also Read: Bengaluru-Patna flight makes emergency landing at Nagpur airport due to engine glitch
ಸಿಬ್ಬಂದಿಯನ್ನು ಹೊರತುಪಡಿಸಿ 139 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ಅಬಿದ್ ರೂಹಿ ಅವರು ಹೇಳಿದರು.
‘ಪೂರ್ಣ ಪ್ರಮಾಣದ ತುರ್ತುಸ್ಥಿತಿ ಎಂದು ಪರಿಗಣಿಸಿ, ವಿಮಾನದ ಲ್ಯಾಂಡಿಗ್ಗೆ ನಾವು ಎಲ್ಲ ವ್ಯವಸ್ಥೆಗಳನ್ನು ನಿಲ್ದಾಣದಲ್ಲಿ ಮಾಡಿಕೊಂಡಿದ್ದೆವು. ರನ್ವೇ ಸಜ್ಜುಗೊಳಿಸಲಾಗಿತ್ತು. ಅಗ್ನಿಶಾಮಕ ವಾಹನಗಳು, ವೈದ್ಯರು, ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿತ್ತು. ಪೊಲೀಸರೊಂದಿಗೆ ಸಮನ್ವಯ ಸಾಧಿಸಲಾಗಿತ್ತು,’ ಎಂದೂ ಅವರು ಹೇಳಿದರು.
ಅದೃಷ್ಟವಶಾತ್, ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಯಾಣಿಕರು ‘ಗೋ ಏರ್’ ಟರ್ಮಿನಲ್ನಲ್ಲಿ ಇದ್ದಾರೆ. ಅವರಿಗೆ ಮುಂದಿನ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು.