ಯಲಹಂಕ ಫ್ಲೈಓವರ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ; ಮಾದರಿ ಯೋಜನೆಯಾಗಿ ಅಭಿವೃದ್ಧಿಪಡಿಸಲು ಶಾಸಕ ಎಸ್.ಆರ್. ವಿಶ್ವನಾಥ್ ಸೂಚನೆ
ಬೆಂಗಳೂರು, ಮೇ 19: ಉತ್ತರ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಮಹತ್ವದ ಯೋಜನೆಯಾಗಿರುವ ಯಲಹಂಕ ಫ್ಲೈಓವರ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಅದನ್ನು ಮಾದರಿ ಮೂಲಸೌಕರ್ಯ ಯೋಜನೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಯಲಹಂಕ ಮಿನಿ ವಿಧಾನಸೌಧದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಸಂಯುಕ್ತ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರಸ್ತೆ, ಫ್ಲೈಓವರ್, ಅಂಡರ್ಪಾಸ್, ಕೆರೆ ಅಭಿವೃದ್ಧಿ, ಬೀದಿ ದೀಪ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದ ಕಾಮಗಾರಿಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು.
ಯಲಹಂಕ ಫ್ಲೈಓವರ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ
ಯಲಹಂಕ ಫ್ಲೈಓವರ್ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗೊಳಿಸಿ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಫ್ಲೈಓವರ್ಗೆ ಉನ್ನತ ಗುಣಮಟ್ಟದ ಬೆಳಕು ವ್ಯವಸ್ಥೆ ಅಳವಡಿಸಿ ಅದನ್ನು ಬೆಂಗಳೂರಿನ ಮಾದರಿ ಮೂಲಸೌಕರ್ಯ ಯೋಜನೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಅವರು ತಿಳಿಸಿದರು.
ಉತ್ತರ ಬೆಂಗಳೂರಿನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಯಲಹಂಕ, ಜಕ್ಕೂರು ಹಾಗೂ ವಿಮಾನ ನಿಲ್ದಾಣ ಮಾರ್ಗದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಫ್ಲೈಓವರ್ ಯೋಜನೆ ಮಹತ್ವದ್ದಾಗಿದೆ.
ಯಲಹಂಕ ರೈಲು ನಿಲ್ದಾಣದಿಂದ ಜಕ್ಕೂರುವರೆಗೆ ಹೊಸ ರಸ್ತೆ
ಯಲಹಂಕ ಭಾಗದಲ್ಲಿ ಭವಿಷ್ಯದಲ್ಲಿ ಬೆಂಗಳೂರಿನ ಅತಿದೊಡ್ಡ ರೈಲು ಟರ್ಮಿನಲ್ ಅಭಿವೃದ್ಧಿಯಾಗುವ ಹಿನ್ನೆಲೆಯಲ್ಲಿ ಸಂಚಾರ ನಿರ್ವಹಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಯಲಹಂಕ ರೈಲು ನಿಲ್ದಾಣದಿಂದ ಜಕ್ಕೂರುವರೆಗೆ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಶಾಸಕ ವಿಶ್ವನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಭವಿಷ್ಯದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಅಗಲ ರಸ್ತೆಗಳು, ಹೊಸ ಅಂಡರ್ಪಾಸ್ಗಳು ಹಾಗೂ ಹೆಚ್ಚುವರಿ ಫ್ಲೈಓವರ್ಗಳು ಅಗತ್ಯವಾಗಲಿವೆ ಎಂದು ಅವರು ಹೇಳಿದರು.
ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಅವಕಾಶ ಬೇಡ
ಸರಿಯಾದ ಪ್ಲಾನ್ ಅನುಮೋದನೆ ಇಲ್ಲದೆ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಖಾಸಗಿ ಸಂಸ್ಥೆಗಳು ಕೈಗೊಳ್ಳುವ ಕಾಮಗಾರಿಗಳು ಕಾನೂನುಬದ್ಧವಾಗಿ ಹಾಗೂ ಅನುಮೋದಿತ ನಿಯಮಾವಳಿಗಳ ಪ್ರಕಾರವೇ ನಡೆಯಬೇಕು ಎಂದು ತಿಳಿಸಲಾಯಿತು.
ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಗೆ ಒತ್ತು
ಸಭೆಯಲ್ಲಿ ಕೆಳಕಂಡ ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆ ಮತ್ತು ಸುಧಾರಣೆ ಕುರಿತೂ ಚರ್ಚೆ ನಡೆಯಿತು:
- ಸರ್ಕಾರಿ ಕಟ್ಟಡಗಳು
- ಸಮುದಾಯ ಭವನಗಳು
- ಈಜುಕೊಳಗಳು
- ಸಾರ್ವಜನಿಕ ಶೌಚಾಲಯಗಳು
- ಇತರೆ ನಾಗರಿಕ ಸೌಲಭ್ಯಗಳು
ಇವುಗಳ ನಿರ್ವಹಣೆಯನ್ನು ಸುಧಾರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸೂಚನೆ ನೀಡಲಾಯಿತು.
ಮಾದರಿ ಫುಡ್ ಸ್ಟ್ರೀಟ್ ಅಭಿವೃದ್ಧಿ ಯೋಜನೆ
ಯಲಹಂಕದಲ್ಲಿ 51 ಅಂಗಡಿಗಳನ್ನೊಳಗೊಂಡ ಫುಡ್ ಕೋರ್ಟ್ ಹಾಗೂ ಫುಡ್ ಸ್ಟ್ರೀಟ್ ಅಭಿವೃದ್ಧಿ ಯೋಜನೆ ಕುರಿತೂ ಶಾಸಕ ವಿಶ್ವನಾಥ್ ಚರ್ಚಿಸಿದರು.
ಬಹು ಆಹಾರ ಮಳಿಗೆಗಳು, ಸ್ವಚ್ಛತಾ ವ್ಯವಸ್ಥೆ, ಸಾರ್ವಜನಿಕ ಸೌಲಭ್ಯಗಳು ಹಾಗೂ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಮಾದರಿ ಫುಡ್ ಸ್ಟ್ರೀಟ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಕೆರೆ ಮತ್ತು ಉದ್ಯಾನ ಅಭಿವೃದ್ಧಿ ಪರಿಶೀಲನೆ
ಅಲ್ಲಾಳಸಂದ್ರ ಕೆರೆಯ ನಿರ್ವಹಣೆಯನ್ನು ಶಾಸಕ ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇತರೆ ಕೆರೆಗಳು, ಉದ್ಯಾನಗಳು ಹಾಗೂ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದರು.
ಇಂಧನ ಉಳಿತಾಯದ ಬೀದಿ ದೀಪ ವ್ಯವಸ್ಥೆಗೆ ಒತ್ತು
ಬೀದಿ ದೀಪಗಳ ನಿರ್ವಹಣೆಯನ್ನು ಪರಿಶೀಲಿಸಿದ ಶಾಸಕ ವಿಶ್ವನಾಥ್, ಎಲ್ಲಾ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಹಾಗೂ ಇಂಧನ ಉಳಿತಾಯದ ಆಧುನಿಕ ಬೆಳಕು ವ್ಯವಸ್ಥೆ ಅಳವಡಿಸಲು ಸೂಚಿಸಿದರು.
BWSSB ರಸ್ತೆ ಕಟ್ ಕಾಮಗಾರಿಗಳಲ್ಲಿ ಸಮನ್ವಯಕ್ಕೆ ಸೂಚನೆ
BWSSB ರಸ್ತೆ ಕಟ್ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿದ ವೇಳೆ ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಯಿತು.
ತ್ಯಾಜ್ಯ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿದ ಅಂಗಡಿಗಳಿಗೆ ಎಚ್ಚರಿಕೆ
ಕೆಲವು ಮಾಂಸ ಹಾಗೂ ಮೀನು ಅಂಗಡಿಗಳು ಖಾಲಿ ಜಾಗಗಳಲ್ಲಿ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ವಿಶ್ವನಾಥ್, ಇಂತಹ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಗತ್ಯವಿದ್ದರೆ ವ್ಯಾಪಾರ ಪರವಾನಗಿ ರದ್ದುಪಡಿಸುವ ಎಚ್ಚರಿಕೆಯನ್ನು ನೀಡಿದರು.
ಪಾದಚಾರಿ ಮಾರ್ಗ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಲಿ
ಕೆಲವು ಅಂಗಡಿಗಳ ಮುಂದೆ ಪಾದಚಾರಿ ಮಾರ್ಗಗಳನ್ನು ಪಾರ್ಕಿಂಗ್ ಹಾಗೂ ಇತರೆ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಗಮನಿಸಿದ ಶಾಸಕ ವಿಶ್ವನಾಥ್, ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅನಧಿಕೃತ ಪೋಸ್ಟರ್ ಮತ್ತು ಬ್ಯಾನರ್ ತೆರವಿಗೆ ಸೂಚನೆ
GBA ನಿಯಮಾವಳಿಗಳ ಉಲ್ಲಂಘನೆ ಮಾಡಿ ಅಳವಡಿಸಿರುವ ಅನಧಿಕೃತ ಪೋಸ್ಟರ್ ಹಾಗೂ ಬ್ಯಾನರ್ಗಳನ್ನು ತಕ್ಷಣ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಪಿಜಿಗಳು, ಅಂಗಡಿಗಳು ಹಾಗೂ ಖಾಸಗಿ ಸಂಸ್ಥೆಗಳು ಅಳವಡಿಸಿರುವ ಅಕ್ರಮ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.
“ದೂರು ಬರುವ ಮೊದಲು ಸಮಸ್ಯೆ ಪರಿಹರಿಸಿ”
ಸಾರ್ವಜನಿಕರಿಂದ ದೂರು ಬರುವ ಮುನ್ನವೇ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಶಾಸಕ ವಿಶ್ವನಾಥ್ ಸೂಚಿಸಿದರು.
ಯಲಹಂಕವನ್ನು ಬೆಂಗಳೂರಿನ ಅತ್ಯಂತ ಸ್ವಚ್ಛ ಹಾಗೂ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಅಭಿವೃದ್ಧಿಗೆ ಸಂಪೂರ್ಣ ಸಹಕಾರ: BNCC ಆಯುಕ್ತ
ಸಭೆಯಲ್ಲಿ ಮಾತನಾಡಿದ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಯಲಹಂಕ ಕ್ಷೇತ್ರದ ಅಭಿವೃದ್ಧಿಗೆ ಪಾಲಿಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಆಯುಕ್ತೆ (ಅಭಿವೃದ್ಧಿ) ಆರ್. ಲತಾ, ಹೆಚ್ಚುವರಿ ಆಯುಕ್ತೆ (ಕಂದಾಯ ಪ್ರಭಾರ) ಪಲ್ಲವಿ, ಮುಖ್ಯ ಅಭಿಯಂತೆ ಯಮುನಾ, ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಅರಣ್ಯ, ಆರೋಗ್ಯ, ತೋಟಗಾರಿಕೆ, ಪಶುಸಂಗೋಪನೆ, BWSSB, BESCOM ಮತ್ತು ಟ್ರಾಫಿಕ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
