ಡಿಲಿಮಿಟೇಶನ್ ದಕ್ಷಿಣದ ಹಿತ ಕಾಪಾಡುತ್ತದೆ, ಮಹಿಳಾ ಮೀಸಲಾತಿಗೆ ಬಲ: ಸಂಸದ ತೇಜಸ್ವಿ ಸೂರ್ಯ
ನವದೆಹಲಿ: ಲೋಕಸಭಾ ಕ್ಷೇತ್ರ ಮರುಹಂಚಿಕೆ (ಡಿಲಿಮಿಟೇಶನ್) ಮತ್ತು ಲೋಕಸಭಾ ಸೀಟುಗಳ ಹೆಚ್ಚಳ ಕುರಿತು ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಲವಾಗಿ ಸಮರ್ಥಿಸಿಕೊಂಡಿದ್ದು, ಈ ಕ್ರಮವು ದಕ್ಷಿಣ ಭಾರತದ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಮಹಿಳಾ ಮೀಸಲಾತಿಗೆ ಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಈ ಕ್ರಮವನ್ನು ಐತಿಹಾಸಿಕ ಸಾಂವಿಧಾನಿಕ ಹೆಜ್ಜೆ ಎಂದು ಬಣ್ಣಿಸಿ, 2029ರಿಂದ ಮಹಿಳಾ ಮೀಸಲಾತಿ ಜಾರಿಗೆ ತರಲು ಇದು ಅತ್ಯಂತ ಅಗತ್ಯವಾಗಿದೆ ಎಂದು ವಿವರಿಸಿದರು. ದಕ್ಷಿಣ ಹಾಗೂ ಸಣ್ಣ ರಾಜ್ಯಗಳ ಧ್ವನಿಯನ್ನು ರಕ್ಷಿಸುವಂತೆ ಈ ಪ್ರಕ್ರಿಯೆ ರೂಪಿಸಲಾಗಿದೆ ಎಂದು ಹೇಳಿದರು.
ಲೋಕಸಭಾ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದರೂ ರಾಜ್ಯಗಳ ನಡುವಿನ ಅನುಪಾತದ ಸಮತೋಲನ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದ ಅವರು, “ಇದು ಅಧಿಕಾರ ಮರುಹಂಚಿಕೆ ಅಲ್ಲ, ಪ್ರಜಾಪ್ರಭುತ್ವದ ಪ್ರಾತಿನಿಧ್ಯದ ವಿಸ್ತರಣೆ” ಎಂದು ಹೇಳಿದರು.
ಒಂದು ರಾಜ್ಯದ ಸೀಟುಗಳನ್ನು ಕಡಿಮೆ ಮಾಡಿ ಮತ್ತೊಂದು ರಾಜ್ಯಕ್ಕೆ ನೀಡುವ ಬದಲು, ಎಲ್ಲಾ ರಾಜ್ಯಗಳಿಗೂ ಸುಮಾರು 50% ರಷ್ಟು ಹೆಚ್ಚಳ ಮಾಡುವ ಮಾದರಿಯನ್ನು ಸರ್ಕಾರ ಅನುಸರಿಸಿದೆ ಎಂದು ಅವರು ತಿಳಿಸಿದರು. ಇದರಿಂದ ಲೋಕಸಭೆಯ ಒಟ್ಟು ಬಲ ಹೆಚ್ಚಾದರೂ, ರಾಜ್ಯಗಳ ಸಾಪೇಕ್ಷ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ವಿವರಿಸಿದರು.
ಈ ಪ್ರಸ್ತಾವನೆಯಡಿ ದಕ್ಷಿಣ ರಾಜ್ಯಗಳ ಸೀಟುಗಳ ಏರಿಕೆ ಹೀಗಿರಲಿದೆ: ತಮಿಳುನಾಡು 39ರಿಂದ 59ಕ್ಕೆ, ಕರ್ನಾಟಕ 28ರಿಂದ 42ಕ್ಕೆ, ಆಂಧ್ರಪ್ರದೇಶ 25ರಿಂದ 38ಕ್ಕೆ, ತೆಲಂಗಾಣ 17ರಿಂದ 26ಕ್ಕೆ ಮತ್ತು ಕೇರಳ 20ರಿಂದ 30ಕ್ಕೆ ಏರಿಕೆ ಆಗಲಿದೆ.
ದಕ್ಷಿಣದ ಧ್ವನಿ ಕುಗ್ಗುತ್ತದೆ ಎಂಬ ವಿರೋಧ ಪಕ್ಷಗಳ ವಾದವನ್ನು ತಳ್ಳಿಹಾಕಿದ ಅವರು, ಅದನ್ನು ದಾರಿ ತಪ್ಪಿಸುವ ಹಾಗೂ ಗಣಿತದ ದೃಷ್ಟಿಯಿಂದ ತಪ್ಪಾಗಿದೆ ಎಂದು ಹೇಳಿದರು. ಲೋಕಸಭೆಯ ಗಾತ್ರ ಹೆಚ್ಚಿದಂತೆ ಬಹುಮತದ ಸಂಖ್ಯೆಯೂ ಹೆಚ್ಚಾಗುತ್ತದೆ, ಯಾವುದೇ ಪ್ರದೇಶ ತನ್ನ ರಾಜಕೀಯ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಡಿಲಿಮಿಟೇಶನ್ ಪ್ರಕ್ರಿಯೆ ರಾಜಕೀಯ ಸಾಧನ ಅಲ್ಲ, ಅದು ಸಂವಿಧಾನದ 81, 82 ಮತ್ತು 330A ವಿಧಿಗಳ ಅಡಿಯಲ್ಲಿ ಇರುವ ಕಡ್ಡಾಯ ಪ್ರಕ್ರಿಯೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಭಾರತದಂತಹ ದೊಡ್ಡ ಜನಸಂಖ್ಯೆಯ ದೇಶದಲ್ಲಿ ಸಂಸತ್ತಿನ ಗಾತ್ರವನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಸೀಟುಗಳ ಸಂಖ್ಯೆಯನ್ನು ಹೆಚ್ಚಿಸದೆ ಕೇವಲ ಮರುಹಂಚಿಕೆ ಮಾಡಿದ್ದರೆ ದಕ್ಷಿಣ ರಾಜ್ಯಗಳಿಗೆ ನಷ್ಟವಾಗುತ್ತಿತ್ತು ಎಂದು ಎಚ್ಚರಿಸಿದ ಅವರು, ಹಳೆಯ ಮಾದರಿಯಲ್ಲಿ ಕೇರಳ 5ರಿಂದ 6 ಸೀಟುಗಳನ್ನು ಕಳೆದುಕೊಳ್ಳುತ್ತಿತ್ತು, ಆದರೆ ಪ್ರಸ್ತುತ ಮಾದರಿಯಲ್ಲಿ 10 ಹೆಚ್ಚುವರಿ ಸೀಟುಗಳನ್ನು ಪಡೆಯಲಿದೆ ಎಂದು ಹೇಳಿದರು.
ಡಿಲಿಮಿಟೇಶನ್ ಅನ್ನು “ದಕ್ಷಿಣ ವಿರೋಧಿ” ಎಂದು ಬಿಂಬಿಸುವ ಪ್ರಯತ್ನಗಳನ್ನು ತೀವ್ರವಾಗಿ ಟೀಕಿಸಿದ ಅವರು, ದಕ್ಷಿಣದ ಹಿತಾಸಕ್ತಿಗೆ ಧಕ್ಕೆ ಆಗಿದ್ದರೆ ತಾನೇ ಮೊದಲಿಗನಾಗಿ ವಿರೋಧಿಸುತ್ತಿದ್ದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣದ ಹಿತಾಸಕ್ತಿಯನ್ನು ಕಾಪಾಡಿ ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುತ್ತಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
