ಬೆಂಗಳೂರು:
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುವಾಗ ಕೆಂಗೇರಿ ಬಳಿ ರಸ್ತೆ ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯ ಆರೋಗ್ಯವನ್ನು ಸೋಮವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿಚಾರಿಸಿದರು.

ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಯಶಸ್ವಿನಿಗೆ ಕತ್ತಿನ ಬೆನ್ನುಮೂಳೆಯ ಎರಡು ವರ್ಟೆಬ್ರಿಯಾಗಳು ತೀವ್ರವಾಗಿ ಘಾಸಿಗೊಳಾಗಿದ್ದು ಎರಡು ಶಸ್ತ್ರ ಚಿಕಿತ್ಸೆಯ ಅಗತ್ಯವಿರುವುದರಿಂದ ಸದರಿ ವಿದ್ಯಾರ್ಥಿನಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಆಸ್ಪತ್ರೆಯ ನಿರ್ದೇಶಕರಿಗೆ ಸಚಿವರು ಮನವಿ ಮಾಡಿದರು.

ಆಸ್ಪತ್ರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿದ ಸಚಿವರು, ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಕ್ಷಣವೇ ಒಂದು ಲಕ್ಷ ರೂ. ನೀಡಬೇಕೆಂದು ಸ್ಥಳದಲ್ಲಿಯೇ ನಿರ್ದೇಶನ ನೀಡಿದರು. ಆಸ್ಪತ್ರೆಯಿಂದಲೇ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸುರೇಶ್ ಕುಮಾರ್, ಸದರಿ ವಿದ್ಯಾರ್ಥಿನಿಯ ತಂದೆ ಸೆಕ್ಯೂರಿಟಿ ನೌಕರಿ ಮಾಡುತ್ತಿದ್ದು, ತೀವ್ರ ಬಡತನದಲ್ಲಿರುವುದರಿಂದ ಇಲಾಖೆ ವತಿಯಿಂದಲೂ ಸಾಧ್ಯವಾದಷ್ಟು ನೆರವು ನೀಡಬೇಕೆಂದು ಕೋರಿದರು. ನಗರ ಸಂಚಾರಿ ಜಂಟಿ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದಾಗ ಅವರೂ ಸಹ ಯಶಸ್ವಿನಿ ಚಿಕಿತ್ಸೆಗೆ ವೈಯಕ್ತಿಕವಾಗಿ ಸಹಾಯ ಮಾಡಲು ಮುಂದೆ ಬಂದರು.
ಬಾಲಕಿಯನ್ನು ಮಾತನಾಡಿಸಿದ ಸುರೇಶ್ ಕುಮಾರ್, ಧೈರ್ಯವಾಗಿರು ಚಿಕಿತ್ಸೆ ಯಶಸ್ವಿಯಾಗಿ ನೀನು ಮೊದಲಿನಂತಾಗುತ್ತೀಯಾ, ನಿನ್ನ ಹೆಸರೇ ‘ಯಶಸ್ವಿನಿ’, ಚಿಕಿತ್ಸೆಯಲ್ಲಿ ಯಶಸ್ಸು ನಿನ್ನದಾಗುತ್ತದೆ. ಯಾವುದಕ್ಕೂ ಹೆದರ ಬೇಡ ಎಂದು ಧೈರ್ಯ ತುಂಬಿದರು. ಬಾಲಕಿಯ ತಂದೆ ತಾಯಿಯೊಂದಿಗೂ ಮಾತನಾಡಿದ ಸಚಿವರು, ತಮ್ಮ ಮಗಳು ಚೇತರಿಸಿಕೊಂಡು ಮೊದಲಿನಂತಾಗುತ್ತಾಳೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.