Anekal Farmers Protest: ಅನೇಕಲ್ನಲ್ಲಿ KIADB ಭೂಸ್ವಾಧೀನಕ್ಕೆ ರೈತರ ತೀವ್ರ ವಿರೋಧ, 2,000 ಎಕರೆ ಭೂಮಿ ಕಿತ್ತಕೊಳ್ಳುವ ಯೋಜನೆಗೆ ಭಾರೀ ಪ್ರತಿಭಟನೆ
ಬೆಂಗಳೂರು/ಅನೇಕಲ್: ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾಸ್ ಡೆವಲಪ್ಮೆಂಟ್ ಬೋರ್ಡ್ (KIADB) ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಅನೇಕಲ್ ತಾಲ್ಲೂಕಿನಲ್ಲಿ ರೈತರು ಇಂದು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಫಲವತ್ತಾದ 2,000 ಎಕರೆಗೂ ಅಧಿಕ ಕೃಷಿ ಭೂಮಿಯನ್ನು ಕಿತ್ತಕೊಳ್ಳುವ ಯೋಜನೆ ಹಿನ್ನೆಲೆಯಲ್ಲಿ ರೈತರ ಆಕ್ರೋಶ ತೀವ್ರಗೊಂಡಿದೆ.
ರೈತರು ಗುಂಪು ಗುಂಪಾಗಿ ಅನೇಕಲ್ ತಾಲ್ಲೂಕು ಕಚೇರಿ ಆವರಣಕ್ಕೆ ಮೆರವಣಿಗೆ ನಡೆಸಿ ನುಗ್ಗಲು ಯತ್ನಿಸಿದರು. ಪೊಲೀಸರು ಕಚೇರಿ ಗೇಟ್ ಬಳಿ ಬ್ಯಾರಿಕೇಡ್ ಹಾಕಿ ತಡೆಯಲು ಪ್ರಯತ್ನಿಸಿದರೂ, ಪ್ರತಿಭಟನಾಕಾರರು ಗೇಟ್ ತಳ್ಳಿಕೊಂಡು ಒಳನುಗ್ಗಿದರು.
ಅದರಿಂದ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ, ತೀವ್ರ ಗಲಾಟೆ, ಘರ್ಷಣೆಗಳು ಉಂಟಾದವು.

“ಫಲವತ್ತಾದ ಭೂಮಿಯನ್ನು ಕಿತ್ತುಕೊಂಡರೆ ನಾವು ಏನು ಬೆಳೆಯಬೇಕು? ನಮ್ಮ ಬದುಕು ಹೇಗೆ ಸಾಗಿಸಬೇಕು?” ಎಂದು ಪ್ರತಿಭಟನೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ನಿರಂತರ ವಿರೋಧದ ನಡುವೆಯೂ KIADB ಭೂಸ್ವಾಧೀನಕ್ಕೆ ಮುಂದಾಗಿರುವುದು ಪ್ರತಿಭಟನಾಕಾರರ ಕೋಪ ಹೆಚ್ಚಲು ಕಾರಣವಾಯಿತು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ರೈತರು ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದು, ಸರ್ಕಾರ ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
