ಬೆಂಗಳೂರು:
ತಂದೆಯೇ ಮಗನನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕರೆಕಲ್ ನ ಮನೆಯೊಂದರಲ್ಲಿ ನಡೆದಿದೆ.
ನರ್ತನ್ ಬೋಪಣ್ಣ(32) ಕೊಲೆಯಾದ ಯುವಕನಾಗಿದ್ದು ವಿನಾಕಾರಣ ಗುಂಡು ಹಾರಿಸಿ ಮಗನನ್ನು ಹತ್ಯೆಗೈದ ಪಾಪಿ ತಂದೆ ನಿನ್ನೆ ಸಂಜೆ ನರ್ತನ್ ತಂದೆ ಸುರೇಶ್ ಗುಂಡು ಹಾರಿಸಿ ಕೊಲೆಗೈದಿರುವುದಾಗಿ ತಿಳಿದು ಬಂದಿದೆ.
ಕೊಡಗು ಮೂಲದವರಾದ ನರ್ತನ್ ಬೋಪಣ್ಣ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ ಕರೇಕಲ್ನಲ್ಲಿ ಪೋಷಕರೊಂದಿಗೆ ವಾಸವಿದ್ದರು. ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ, ತಂದೆ ಸುರೇಶ್ ಮದ್ಯಪಾನದ ಗೀಳಿಗೆ ದಾಸರಾಗಿದ್ದರು. ಸದಾ ಕುಡಿಯಲು ಹಣ ಬೇಕು ಎಂದು ಮಗನನ್ನು ಪೀಡಿಸುತ್ತಿದ್ದ ಸುರೇಶ್, ಜ.25ರ ಗುರುವಾರ ಸಂಜೆಯೂ ಕುಡಿತಕ್ಕೆ ಹಣ ಬೇಕೆಂದು ಪೀಡಿಸುತ್ತಾ ಹೊಡೆಯಲು ಮುಂದಾಗಿದ್ದರು.
ಇದೆಲ್ಲದರಿಂದ ಬೇಸತ್ತ ನರ್ತನ್ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದಾರೆ. ಆದರೂ ಸಹ ಕೋಣೆಯೊಳಗಿನಿಂದಲೇ ಸುರೇಶ್ ಬೆದರಿಕೆಯೊಡ್ಡಿದ್ದಾರೆ. ಸ್ವಲ್ಪ ಹೊತ್ತು ಕಳೆದ ಬಳಿಕ ಸಿಟ್ಟಿಗೆದ್ದ ಸುರೇಶ್ ತಮ್ಮ ಬಳಿ ಇದ್ದ ಲೈಸೆನ್ಸ್ ಹೊಂದಿದ ಸಿಂಗಲ್ ಬ್ಯಾರಲ್ ಗನ್ನಿಂದ ಬಾಗಿಲಿನತ್ತ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಗನ್ನಿಂದ ಹಾರಿಸಿದ ಗುಂಡು ಬಾಗಿಲು ಸೀಳಿ ಹೊರಗೆ ಕುಳಿತಿದ್ದ ನರ್ತನ್ ಬೋಪಣ್ಣ ಅವರ ತೊಡೆಯ ಮೇಲ್ಭಾಗಕ್ಕೆ ತಗುಲಿದೆ. ತೀವ್ರವಾಗಿ ಗಾಯಗೊಂಡಿದ್ದ ನರ್ತನ್, ತಕ್ಷಣ ತನ್ನ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಹೋದರಿ ಸಂಬಂಧಿಕರೊಬ್ಬರನ್ನು ಮನೆ ಬಳಿ ಹೋಗುವಂತೆ ಹೇಳಿದ್ದರು. ಆದರೆ, ಸಂಬಂಧಿಕರು ಬಂದು ನಿತ್ರಾಣಗೊಂಡಿದ್ದ ನರ್ತನ್ನನ್ನು ಬಸವೇಶ್ವರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ನರ್ತನ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ತೆರಳುವಷ್ಟರಲ್ಲಿ ಆರೋಪಿ ಸುರೇಶ್ ಮನೆಯಲ್ಲಿ ಚೆಲ್ಲಿದ್ದ ರಕ್ತವನ್ನು ತೊಳೆದು ಸಾಕ್ಷ್ಯನಾಶ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.