ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ: ಬ್ಯಾರಿಕೇಡ್, ಪೊಲೀಸ್ ಸಮನ್ವಯ ಮತ್ತು ತ್ಯಾಜ್ಯ ನಿಯಂತ್ರಣಕ್ಕೆ ಬೆಂಗಳೂರು ಕೇಂದ್ರ ಆಯುಕ್ತರ ಸೂಚನೆ
ಬೆಂಗಳೂರು, ಸೆಪ್ಟೆಂಬರ್ 4: ಗಣೇಶ ಮೂರ್ತಿ ವಿಸರ್ಜನೆಗಾಗಿ ಹಲಸೂರು ಕೆರೆಯಲ್ಲಿ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ. ಅಧಿಕಾರಿಗಳಿಗೆ ಸೂಚಿಸಿದ್ದು, ವಿಸರ್ಜನಾ ಕಲ್ಯಾಣಿಯಲ್ಲಿ ಬ್ಯಾರಿಕೇಡ್ ಅಳವಡಿಕೆ, ಪೊಲೀಸರೊಂದಿಗೆ ಸಮನ್ವಯ ಹಾಗೂ ಕೆರೆಗೆ ತ್ಯಾಜ್ಯ ಸೇರದಂತೆ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹಲಸೂರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಜಗದೀಶ್, ಗಣೇಶ ಮೂರ್ತಿ ವಿಸರ್ಜನೆಗೆ ಈ ಕೆರೆ ಪ್ರಮುಖ ಸ್ಥಳವಾಗಿದ್ದು, ಸಿದ್ಧಗೊಳ್ಳುತ್ತಿರುವ ವಿಸರ್ಜನಾ ಕಲ್ಯಾಣಿಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಮೂರ್ತಿ ವಿಸರ್ಜನೆ ಸುರಕ್ಷಿತವಾಗಿ, ಸುಗಮವಾಗಿ ಮತ್ತು ಯಾವುದೇ ಅನಾನುಕೂಲವಿಲ್ಲದೆ ನಡೆಯುವಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಸರ್ಜನೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಜನಸಂದಣಿ ನಿಯಂತ್ರಿಸುವುದು, ವಾಹನ ಸಂಚಾರವನ್ನು ನಿಯಮಿತಗೊಳಿಸುವುದು ಹಾಗೂ ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆಯೂ ನಿರ್ದೇಶಿಸಿದರು.
ಹಬ್ಬದ ಸಿದ್ಧತೆಗಳ ಜೊತೆಗೆ ಕೆರೆಯ ಸ್ಥಿತಿ ಮತ್ತು ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನೂ ಆಯುಕ್ತರು ಪರಿಶೀಲಿಸಿದರು. ಹಲಸೂರು ಕೆರೆಯ ನೀರಿನ ಗುಣಮಟ್ಟ ಸುಧಾರಿಸಲು ಹಾಗೂ ಜಲಚರಗಳಿಗೆ ಪೂರಕ ವಾತಾವರಣ ನಿರ್ಮಿಸಲು ವೆಟ್ಲ್ಯಾಂಡ್ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಲಸೂರು ಕೆರೆಗೆ ಹೊಂದಿಕೊಂಡಿರುವ ಮಳೆನೀರು ಕಾಲುವೆಯಲ್ಲಿನ ಅವಶೇಷಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವಂತೆಯೂ ಜಗದೀಶ್ ನಿರ್ದೇಶಿಸಿದರು.
ಮಳೆನೀರು ಕೆರೆಗೆ ಸೇರುವ ಸ್ಥಳಗಳಲ್ಲಿ ಕಸ, ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳು ಕೆರೆಯೊಳಗೆ ಪ್ರವೇಶಿಸದಂತೆ ಜಾಲರಿ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಯಲ್ಲಿ ನಡೆಯುತ್ತಿರುವ ವಾಕರ್ಸ್ ಪಾಥ್, ಗ್ರಿಲ್ ಅಳವಡಿಕೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತೆ ಮಾಡುವಂತೆಯೂ ಆಯುಕ್ತರು ನಿರ್ದೇಶಿಸಿದರು.
ಪರಿಶೀಲನೆ ವೇಳೆ ಅಭಿವೃದ್ಧಿ ಹೆಚ್ಚುವರಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಕಾರ್ಯನಿರ್ವಾಹಕ ಎಂಜಿನಿಯರ್, ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
