Karnataka: central government cannot stop the grant if NEP is not implemented, it is not right to pressurize: Minister M.C. Sudhakar | ಎನ್ಇಪಿ ಜಾರಿ ಮಾಡದಿದ್ದರೆ ಕೇಂದ್ರ ಸರಕಾರ ಅನುದಾನ ನಿಲ್ಲಿಸಲು ಸಾಧ್ಯವಿಲ್ಲ, ಒತ್ತಡ ಹಾಕುವ ಸರಿಯಲ್ಲ : ಸಚಿವ ಎಂ.ಸಿ. ಸುಧಾಕರ್ ಸ್ಪಷ್ಟನೆ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್ಇಪಿ) ಜಾರಿ ಮಾಡದಿದ್ದರೆ ಕೇಂದ್ರ ಸರ್ಕಾರ ಅನುದಾನ ನಿಲ್ಲಿಸುವುದು ಸಾಧ್ಯವಿಲ್ಲ, ಒತ್ತಡ ಹಾಕುವ ಮೂಲಕ ವರ್ತಿಸುವುದು ಕೂಡ ಸರಿಯಲ್ಲ ಎಂದು ಡಾಕ್ಟರ್ ಎಂ ಸಿ ಸುಧಾಕರ್ (MC Sudhakar) ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದವರು ಪ್ರಶ್ನೆ ಒಂದಕ್ಕೆ ಉತ್ತರಿಸುತ್ತಾ ಕೇರಳ ಹಾಗೂ ತಮಿಳುನಾಡು ಈಗಾಗಲೇ ತಮಗೆ ಅನುಕೂಲವಾಗುವಂತಹ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ ಅವಶ್ಯಕತೆ ಇದ್ದಂಥ ಯುಜಿಸಿ ಗೈಡ್ ಲೈನ್ ಗಳನ್ನು ಹೊಂದಿದ್ದಾರೆ ಹಾಗಂತ ಅನುದಾನ ಕಡಿತ ಮಾಡಲು ಸಾಧ್ಯವಿಲ್ಲ ಎಂದರು. ಕೇಂದ್ರ ಸರ್ಕಾರ 5 ವರ್ಷಕ್ಕೊಮ್ಮೆ ಮಾತ್ರ ಅನುದಾನ ನೀಡುತ್ತದೆ ಅದರಲ್ಲಿ ಕೇಂದ್ರದ ಪಾಲು ಶೇಕಡ 60 ಆದರೆ ರಾಜ್ಯ ಸರ್ಕಾರದ ಪಾಲು ಶೇಕಡ 40 ಆಗಿರುತ್ತದೆ ಹಾಗಾಗಿ ಒತ್ತಡ ಪ್ರಕ್ರಿಯೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಕೇಂದ್ರ ಸರ್ಕಾರ ಪ್ರತಿವರ್ಷ ಅನುದಾನ ಕೊಡುವುದಿಲ್ಲ ಎಂದು ಹೇಳಿದರು.
ವಿಶ್ವವಿದ್ಯಾಲಯಗಳಲ್ಲಿ ಎಲ್ ಐ ಸಿ ಸಮಿತಿಗಳ ವಿರುದ್ಧ ಆರೋಪ ಕೇಳಿ ಬಂದಿರುವುದು ನಿಜ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸೂಕ್ತ ಬದಲಾವಣೆಗಳೊಂದಿಗೆ ತಿದ್ದುಪಡಿತರಲು ಚಿಂತಿಸಲಾಗುತ್ತಿದೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ರೆಸಾರ್ಟ್ ರಾಜಕಾರಣ ಅಲ್ಲ
ಪ್ರಶ್ನೆ ಒಂದಕ್ಕೆ ಉತ್ತರಿಸಿದ ಸಚಿವರು ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು ರೆಸಾರ್ಟ್ ಗೆ ತೆರಳುತ್ತಿದ್ದೇವೆ ಹೊರತು ಬೇರೆ ಯಾವುದೇ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ ರಾಜ್ಯಸಭೆಗೆ ಮತದಾನ ಮಾಡುವಾಗ ಕೆಲವು ನಿಯಮಾವಳಿಗಳನ್ನು ಹಾಗೂ ಮತದಾನದ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕಾಗುತ್ತದೆ ಪ್ರಾಶಸ್ತ್ಯದ ಮತಗಳು ಇರುವುದರಿಂದ ಇದರ ಬಗ್ಗೆ ಎಲ್ಲರಿಗೂ ತಿಳಿಸಲು ಪಕ್ಷ ಸಭೆ ಕರೆದಿದೆ ಎಂದರು.
ರಾಜ್ಯಸಭೆಗೆ ಮತದಾನ ಮಾಡುವಾಗ ನೇರಳೆ ಬಣ್ಣದ ಸ್ಕೆಚ್ ಪೆನ್ ನಲ್ಲೆ ಮಾರ್ಕ್ ಮಾಡಬೇಕಾಗಿರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಕುಲಗೆಟ್ಟ ಮತವಾಗಬಾರದು ಎಂಬ ಕಾರಣಕ್ಕೆ ನೂತನವಾಗಿ ಆಯ್ಕೆಯಾಗಿರುವ ಶಾಸಕರನ್ನು ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡಲು ಈ ಸಭೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು. ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳ ಗೆಲುವು ಖಚಿತ. ಬಿಜೆಪಿ ಜೆಡಿಎಸ್ ಏನೇ ಮಾಡಿದರು ನಮ್ಮ ಅಭ್ಯರ್ಥಿಗಳನ್ನು ಸೋಲಿಸಲು ಸಾಧ್ಯವಿಲ್ಲ, ಅಲ್ಲದೆ ಯಾರೂ ಕೂಡ ಅಡ್ಡ ಮತದಾನ ಮಾಡುವ ಮನಸ್ಥಿತಿಯಲ್ಲಿ ನಮ್ಮವರು ಇಲ್ಲ ಎದ್ದು ಸ್ಪಷ್ಟಪಡಿಸಿದರು.
