ಬಾಗಲಕೋಟೆ:
ಧಾರಾಕಾರವಾಗಿ ಸುರಿದ ಮಳೆ ಹಾಗೂ ಅತಿವೃಷ್ಠಿ ಪೀಡಿತ ಮುಧೋಳ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೆಚ್ಚಿನ ಹಾನಿಯಾಗಿದೆ.
ಮಿರ್ಜಿ, ಆಲಗುಂಡಿ, ಬುದ್ನಿ ಬಿ.ಕೆ, ಮಾಚಕನೂರು, ಅಂತಾಪುರ ಒಂಟಿಗೋಡಿ, ಉತ್ತೂರು, ಸೇರಿದಂತೆ ವಿವಿಧ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಇಂದು ಭೇಟಿ ನೀಡಿ, ಮನೆ ಹಾನಿ, ಬೆಳೆ ಹಾನಿ, ರಸ್ತೆ, ಸೇತುವೆಗಳ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯನ್ನು ಪರಿಶೀಲಿಸಿ ಬಳಿಕ ಸಂತ್ರಸ್ತರ ಅಹವಾಲು ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಸಂತ್ರಸ್ತರಿಗೆ ಕೂಡಲೇ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ, ಆರೈಕೆ ಮಾಡಬೇಕು. ಅತಿವೃಷ್ಠಿಯಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಸುರಕ್ಷಿತ ಸ್ಥಳದಲ್ಲಿರುವಂತೆ ಮನವರಿಕೆ ಮಾನವರಿಕೆ ಮಾಡಬೇಕು. ರಸ್ತೆ, ಸೇತುವೆಗಳ ದುರಸ್ಥಿಯಾದ ಕಡೆ ಸಾರ್ವಜನಿಕರ ಸಂಚಾರ ನಿಷೇಧಿಸಿ ಸಂಭವಿಸಬಹುದಾದ ಅವಘಡ ತಪ್ಪಿಸಬೇಕು.
ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕೇಂದ್ರಸ್ಥಾನ ದಲ್ಲಿದ್ದು, ಸಂತ್ರಸ್ತರಿಗೆ ನೆರವಾಗಬೇಕು. ಪರಿಹಾರ ಕಾರ್ಯ ಗಳಲ್ಲಿ ಸ್ವಯಂ ಪ್ರೇರಿತವಾಗಿ ತೊಡಗಿಕೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ. ರಾಜೇಂದ್ರ, ಎಸ್ ಪಿ ಲೋಕೇಶ್ ಜಗಲಸರ ವಿವಿಧ ಅಧಿಕಾರಿಗಳು ಹಾಜರಿದ್ದರು .