ದೋಹಾದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ ಮೆಗಾ ರಕ್ತದಾನ ಶಿಬಿರ; ‘ಸಂಭ್ರಮ 2026’ ಪೋಸ್ಟರ್ ಅನಾವರಣ
ಬೆಂಗಳೂರು/ದೋಹಾ, ಮೇ 29: ಭಾರತೀಯ ಸಾಂಸ್ಕೃತಿಕ ಕೇಂದ್ರ ಹಾಗೂ ದೋಹಾದ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಘ ಕತಾರ್ (KSQ) ವತಿಯಿಂದ ಇತ್ತೀಚೆಗೆ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ ಹಮದ್ ಮೆಡಿಕಲ್ ಕಾರ್ಪೊರೇಷನ್ (HMC) ಸಹಯೋಗದಲ್ಲಿ “Everyone Could Be a Hero” ಎಂಬ ಘೋಷವಾಕ್ಯದಡಿ ಮೆಗಾ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ದೋಹಾದ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಈಶ್ ಸಿಂಘಲ್ ಹಾಗೂ ಹಮದ್ ಮೆಡಿಕಲ್ ಕಾರ್ಪೊರೇಷನ್ನ ವೈದ್ಯಕೀಯ ವ್ಯವಸ್ಥಾಪಕಿ ಹಾಗೂ ಡೋನರ್ ರಿಕ್ರೂಟ್ಮೆಂಟ್ ವಿಭಾಗದ ಮುಖ್ಯಸ್ಥೆ ಸದಿಕಾ ಅಲ್ ಮಹ್ಮೂದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ಸಮುದಾಯ ಮುಖಂಡರು, ಗಣ್ಯರು ಹಾಗೂ ಭಾರತೀಯ ವಲಸಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕರ್ನಾಟಕ ಸಂಘ ಕತಾರ್ನ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಸ್ವಾಗತ ಭಾಷಣದ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಈಶ್ ಸಿಂಘಲ್ ಅವರು ನಿಯಮಿತ ರಕ್ತದಾನದ ಮಹತ್ವವನ್ನು ಒತ್ತಿ ಹೇಳಿ, ಜೀವ ಉಳಿಸುವ ಕಾರ್ಯದಲ್ಲಿ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅಗತ್ಯವೆಂದು ತಿಳಿಸಿದರು. ಕರ್ನಾಟಕ ಸಂಘ ಕತಾರ್ ನಡೆಸುತ್ತಿರುವ ಮಾನವೀಯ ಸೇವಾ ಕಾರ್ಯಗಳನ್ನು ಅವರು ಶ್ಲಾಘಿಸಿದರು.
ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಮಾತನಾಡಿ, ಸಂಘವು ಸಮಾಜಸೇವೆ ಹಾಗೂ ಸಮುದಾಯ ಕಲ್ಯಾಣ ಕಾರ್ಯಕ್ರಮಗಳಿಗೆ ಸದಾ ಬದ್ಧವಾಗಿದೆ ಎಂದು ತಿಳಿಸಿದರು. ರಕ್ತದಾನ ಶಿಬಿರಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವ ಕಾರ್ಯವಾಗಿವೆ ಎಂದು ಹೇಳಿದರು.
ಸದಿಕಾ ಅಲ್ ಮಹ್ಮೂದಿ ಅವರು ಕತಾರ್ನ ಆಸ್ಪತ್ರೆಗಳಲ್ಲಿ ಸಮರ್ಪಕ ರಕ್ತ ಸಂಗ್ರಹವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿ, ಹಮದ್ ಮೆಡಿಕಲ್ ಕಾರ್ಪೊರೇಷನ್ನ ರಕ್ತದಾನ ಅಭಿಯಾನಗಳಿಗೆ ನಿರಂತರ ಬೆಂಬಲ ನೀಡುತ್ತಿರುವ ಭಾರತೀಯ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಅಮಿತ್ ವರ್ಮಾ ಅವರು ರಕ್ತದಾನದ ವೈದ್ಯಕೀಯ ಮಹತ್ವ ಮತ್ತು ಆರೋಗ್ಯ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ರಕ್ತದಾನವು ಜೀವ ಉಳಿಸುವ ಅತ್ಯಂತ ಶ್ರೇಷ್ಠ ಸೇವೆಗಳಲ್ಲಿ ಒಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಂತಹ ಅಭಿಯಾನಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಹಿರಿಯ ದಾನಿಗಳಾದ ಡಾ. ಸಂಜಯ್ ಕುಡಾರಿ, ಶ್ರೀಧರ್ ನಾಯಕ್ ಹಾಗೂ ಮೊಹಮ್ಮದ್ ಸೋಹೈಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ರಕ್ತದಾನ ಶಿಬಿರಕ್ಕೆ ಭಾರತೀಯ ವಲಸಿಗ ಸಮುದಾಯದಿಂದ ಭರ್ಜರಿ ಸ್ಪಂದನೆ ದೊರೆತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಭಾಗವಹಿಸಿ ಹಮದ್ ಮೆಡಿಕಲ್ ಕಾರ್ಪೊರೇಷನ್ನ ಜೀವ ರಕ್ಷಕ ರಕ್ತ ಸಂಗ್ರಹವನ್ನು ಬಲಪಡಿಸುವಲ್ಲಿ ತಮ್ಮ ಕೊಡುಗೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸಂಘ ಕತಾರ್ ವತಿಯಿಂದ ‘ಸಂಭ್ರಮ 2026’ ಸಂಗೀತ ಸಂಜೆಯ ಪೋಸ್ಟರ್ನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದ ಸಂಗೀತ ಕಾರ್ಯಕ್ರಮವು ಜೂನ್ 12, 2026ರಂದು ದೋಹಾದ ಡಿಪಿಎಸ್ ಎಂಐಎಸ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶುಭಾ ನಿರೂಪಣೆ ಮಾಡಿದರು. ಉಪಾಧ್ಯಕ್ಷ ಅನಿಲ್ ಭಸಗಿ ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಬಿತ್ತು.
ಈ ಯಶಸ್ವಿ ಕಾರ್ಯಕ್ರಮಕ್ಕೆ ಸಹಕರಿಸಿದ ಸ್ವಯಂಸೇವಕರು, ರಕ್ತದಾನಿಗಳು, ಬೆಂಬಲಿಗರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಮುದಾಯದ ಸದಸ್ಯರಿಗೆ ಕರ್ನಾಟಕ ಸಂಘ ಕತಾರ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
