ಬೆಂಗಳೂರು ಆರ್ಥಿಕ ಮಾಸ್ಟರ್ ಪ್ಲಾನ್ಗೆ ಸರ್ಕಾರ-ಐಎಸ್ಇಜಿ ಒಡಂಬಡಿಕೆ, 2032ರೊಳಗೆ ಜಾಗತಿಕ ನಗರ ಗುರಿ
ಬೆಂಗಳೂರು, ಮೇ 5, 2026: ಬೆಂಗಳೂರನ್ನು ವಿಶ್ವದರ್ಜೆಯ ಆರ್ಥಿಕ ಕೇಂದ್ರವಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಕರ್ನಾಟಕ ಸರ್ಕಾರವು ಐಎಸ್ಇಜಿ ಫೌಂಡೇಶನ್ (ISEG Foundation) ಜೊತೆಗೂಡಿ ಬೆಂಗಳೂರು ಮಹಾನಗರ ಪ್ರದೇಶ (BMR)ಕ್ಕಾಗಿ ಸಮಗ್ರ ಆರ್ಥಿಕ ಮಾಸ್ಟರ್ ಪ್ಲಾನ್ ರೂಪಿಸಲು ಉದ್ದೇಶ ಪತ್ರಕ್ಕೆ (Statement of Intent – SOI) ಸಹಿ ಹಾಕಿದೆ. ಈ ಒಪ್ಪಂದವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ನೆರವೇರಿತು.
ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಹಾಗೂ ಐಎಸ್ಇಜಿ ನಿರ್ದೇಶಕ ಡಾ. ಶಿರೀಶ್ ಸಂಖೆ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಈ ಮಾಸ್ಟರ್ ಪ್ಲಾನ್ 2032 ಮತ್ತು 2037ರ ಅವಧಿಯನ್ನು ಗುರಿಯಾಗಿಟ್ಟುಕೊಂಡು ದತ್ತಾಂಶ ಆಧಾರಿತ, ಕಾರ್ಯೋನ್ಮುಖ ಹಾಗೂ ದೂರದೃಷ್ಟಿಯ ಅಭಿವೃದ್ಧಿ ನಕ್ಷೆಯನ್ನು ರೂಪಿಸಲಿದೆ.
ಈ ಯೋಜನೆಯಡಿ ಆರ್ಥಿಕತೆ, ಮೂಲಸೌಕರ್ಯ, ವಾಸಯೋಗ್ಯತೆ (Liveability) ಮತ್ತು ಸುಸ್ಥಿರತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಮಗ್ರ ಯೋಜನೆ ರೂಪಿಸಲಾಗುತ್ತದೆ. ಸುಮಾರು 8,000 ಚದರ ಕಿಮೀ ವ್ಯಾಪ್ತಿಯ ಬಿಎಂಆರ್ನಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ದಕ್ಷಿಣ ಜಿಲ್ಲೆಗಳು ಸೇರಿದ್ದು, ಇಲ್ಲಿ ಸುಮಾರು 1.6 ಕೋಟಿ ಜನಸಂಖ್ಯೆ ವಾಸಿಸುತ್ತಿದೆ. ರಾಜ್ಯದ ಒಟ್ಟು ಜಿಎಸ್ಡಿಪಿಗೆ ಬಿಎಂಆರ್ 43% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದ್ದು, ಇದರ ಆರ್ಥಿಕ ಮೌಲ್ಯವು ಸುಮಾರು 149 ಬಿಲಿಯನ್ ಡಾಲರ್ (FY25) ಆಗಿದೆ.
ಬೆಂಗಳೂರು ದೇಶದ ಐಟಿ, ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ಗಳು, ಏರೋಸ್ಪೇಸ್ ಹಾಗೂ ಬಯೋಟೆಕ್ ಕ್ಷೇತ್ರಗಳಲ್ಲಿ ಪ್ರಮುಖ ಕೇಂದ್ರವಾಗಿದ್ದು, ಭಾರತದ ಸಾಫ್ಟ್ವೇರ್ ರಫ್ತಿನ 42% ಕೊಡುಗೆ ನೀಡುತ್ತಿದೆ. ನಗರವು 875 ಕ್ಕೂ ಹೆಚ್ಚು ಜಿಸಿಸಿ ಕೇಂದ್ರಗಳನ್ನು ಹೊಂದಿದ್ದು, ವಿಶ್ವದಲ್ಲೇ ಕೃತಕ ಬುದ್ಧಿಮತ್ತೆ (AI) ತಜ್ಞರ ಎರಡನೇ ದೊಡ್ಡ ಹಬ್ ಆಗಿ ಗುರುತಿಸಲಾಗಿದೆ. ತಲಾ ಆದಾಯವು ಸುಮಾರು 8,850 ಡಾಲರ್ ಆಗಿದ್ದು, ಇದು ರಾಜ್ಯದ ಸರಾಸರಿಗಿಂತ ದ್ವಿಗುಣವಾಗಿದೆ. ವಾರ್ಷಿಕವಾಗಿ 9% ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆ ಕಂಡುಬರುತ್ತಿದ್ದು, ದೇಶದ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾಗಿದೆ.
ಆದರೆ ಈ ಬೆಳವಣಿಗೆಯ ನಡುವೆಯೇ ಟ್ರಾಫಿಕ್ ದಟ್ಟಣೆ, ಹೆಚ್ಚುತ್ತಿರುವ ಭೂಮಿ ಮತ್ತು ವಸತಿ ವೆಚ್ಚ, ಮೂಲಸೌಕರ್ಯಗಳ ಮೇಲಿನ ಒತ್ತಡ ಮೊದಲಾದ ಸವಾಲುಗಳು ನಗರ ಸ್ಪರ್ಧಾತ್ಮಕತೆಗೆ ಧಕ್ಕೆಯುಂಟುಮಾಡುವ ಸಾಧ್ಯತೆಯಿದೆ ಎಂದು ಸರ್ಕಾರ ಗಮನಿಸಿದೆ.
ಈ ಆರ್ಥಿಕ ಮಾಸ್ಟರ್ ಪ್ಲಾನ್ನ ಪ್ರಾಥಮಿಕ ನೀಲನಕ್ಷೆ (Blueprint) ರೂಪಿಸುವ ಹಂತವು 4-5 ತಿಂಗಳೊಳಗೆ (ಸೆಪ್ಟೆಂಬರ್ ಮಧ್ಯಭಾಗದೊಳಗೆ) ಪೂರ್ಣಗೊಳ್ಳಲಿದೆ. ಇದರಲ್ಲಿ ಬಿಎಂಆರ್ ಆರ್ಥಿಕ ಸ್ಥಿತಿಯ ವಿಶ್ಲೇಷಣೆ, ಜಾಗತಿಕ ನಗರಗಳೊಂದಿಗೆ ಹೋಲಿಕೆ, ಪ್ರಮುಖ ಬೆಳವಣಿಗೆ ಚಾಲಕಗಳನ್ನು ಗುರುತಿಸುವುದು, ಮತ್ತು ತಂತ್ರಜ್ಞಾನ, ಉತ್ಪಾದನೆ, ಬಯೋಟೆಕ್, ಪ್ರವಾಸೋದ್ಯಮ, ವಸತಿ, ಮೂಲಸೌಕರ್ಯ ಮತ್ತು ಸುಸ್ಥಿರತೆ ಕ್ಷೇತ್ರಗಳಲ್ಲಿ 6-8 ಪ್ರಮುಖ ಹೂಡಿಕೆ ಯೋಜನೆಗಳನ್ನು ಗುರುತಿಸಲಾಗುತ್ತದೆ. ಜೊತೆಗೆ ಹಂತ ಹಂತವಾಗಿ ಜಾರಿಗೆ ತರುವ ರಸ್ತೆನಕ್ಷೆ, ಹಣಕಾಸು ತಂತ್ರಗಳು ಮತ್ತು ಆಡಳಿತ ವ್ಯವಸ್ಥೆಗಳನ್ನು ರೂಪಿಸಲಾಗುತ್ತದೆ.
ಈ ಯೋಜನೆ ನೀತಿ ಆಯೋಗದ G-Hub ಕಾರ್ಯಕ್ರಮದ ಮಾದರಿಯಲ್ಲಿ ರೂಪಿಸಲಾಗುತ್ತಿದ್ದು, ದೇಶದ ಪ್ರಮುಖ ನಗರ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ದಿಕ್ಕುನೀಡುತ್ತಿದೆ. ಮುಂಬೈ, ಪುಣೆ, ವಿಶಾಖಪಟ್ಟಣಂ, ವಾರಾಣಸಿ ಸೇರಿದಂತೆ ಹಲವು ನಗರಗಳಲ್ಲಿ ಇದೇ ರೀತಿಯ ಮಾಸ್ಟರ್ ಪ್ಲಾನ್ ಕಾರ್ಯಗತಗೊಳಿಸಲಾಗಿದೆ.
ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಬೆಂಗಳೂರು ಕಳೆದ ಮೂರು ವರ್ಷಗಳಲ್ಲಿ ಆರ್ಥಿಕವಾಗಿ ಬಲಿಷ್ಠವಾಗಿದೆ. ಈಗ ಅದನ್ನು ಇನ್ನಷ್ಟು ಶಕ್ತಿಶಾಲಿ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ನಗರವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ,” ಎಂದು ಹೇಳಿದರು.
“ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಅಭಿವೃದ್ಧಿ, ವಸತಿ ಯೋಜನೆಗಳು, ಸಂಚಾರ ದಟ್ಟಣೆ ನಿವಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಗ್ರ ಯೋಜನೆ ರೂಪಿಸಲಾಗುತ್ತದೆ. 2032ರೊಳಗೆ ಬೆಂಗಳೂರಿನ ಆರ್ಥಿಕತೆಯನ್ನು ದ್ವಿಗುಣಗೊಳಿಸಿ, ಟೋಕಿಯೋ, ಲಂಡನ್ ಮತ್ತು ಸಿಂಗಾಪುರದಂತಹ ಜಾಗತಿಕ ನಗರಗಳಿಗೆ ಸಮಾನವಾಗಿ ಅಭಿವೃದ್ಧಿಪಡಿಸುವ ಗುರಿಯಿದೆ,” ಎಂದು ಅವರು ಹೇಳಿದರು.
ಯೋಜನೆಯ ಪರಿಣಾಮಕಾರಿ ಜಾರಿಗೆ ರಾಜ್ಯ ಸರ್ಕಾರವು ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಸ್ಟೀರಿಂಗ್ ಸಮಿತಿ ರಚಿಸಿದೆ. ನಗರಾಭಿವೃದ್ಧಿ, ಹಣಕಾಸು, ಐಟಿ-ಬಿಟಿ, ಕೈಗಾರಿಕೆ, ಸಾರಿಗೆ, ಪ್ರವಾಸೋದ್ಯಮ ಸೇರಿದಂತೆ ಪ್ರಮುಖ ಇಲಾಖೆಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನು ಹಿರಿಯ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಉದ್ಯಮ ತಜ್ಞರು, ಖಾಸಗಿ ವಲಯದ ಪ್ರತಿನಿಧಿಗಳು ಹಾಗೂ ನಾಗರಿಕರ ಅಭಿಪ್ರಾಯಗಳನ್ನು ಒಳಗೊಂಡ ಸಲಹಾ ಸಮಿತಿಗಳನ್ನೂ ರಚಿಸಲಾಗುತ್ತದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ಯೋಜನೆಯ ಪ್ರಗತಿಯನ್ನು ತ್ರೈಮಾಸಿಕವಾಗಿ ಪರಿಶೀಲನೆ ನಡೆಸಲಿದ್ದಾರೆ.
ಈ ಯೋಜನೆಗೆ ಜ್ಞಾನ ಪಾಲುದಾರರಾಗಿರುವ ಐಎಸ್ಇಜಿ ಫೌಂಡೇಶನ್ ಸಂಸ್ಥೆ, ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ಪ್ರಮುಖ ನಗರಗಳಿಗೆ ಆರ್ಥಿಕ ಮಾಸ್ಟರ್ ಪ್ಲಾನ್ ರೂಪಿಸಿದ ಅನುಭವ ಹೊಂದಿದೆ.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
