Home ಬೆಂಗಳೂರು ನಗರ ‘Karnataka Town and Rural Planning (Amendment) Bill-2024’ to allow purchase and sale...

‘Karnataka Town and Rural Planning (Amendment) Bill-2024’ to allow purchase and sale of ‘Premium FAR’ | ವಿಧಾನ ಪರಿಷತ್ತಿನಲ್ಲಿ ‘ಪ್ರೀಮಿಯಂ ಎಫ್‍ಎಆರ್’ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ-2024’ ಅಂಗೀಕಾರ

22
0
'Karnataka Town and Rural Planning (Amendment) Bill-2024' to allow purchase and sale of 'Premium FAR' DK Shivakumar

ಬೆಂಗಳೂರು : ವಿಧಾನಸಭೆಯಲ್ಲಿ ಅಂಗೀಕಾರ ಸ್ವರೂಪದಲ್ಲಿದ್ದ ‘ಪ್ರೀಮಿಯಂ ಎಫ್‍ಎಆರ್’ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ-2024’ಕ್ಕೆ ವಿಧಾನ ಪರಿಷತ್ತಿನಲ್ಲಿ ಸುದೀರ್ಘ ಚರ್ಚೆ ಹಾಗೂ ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಗುರುವಾರ ಅಂಗೀಕಾರ ದೊರೆಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ-2024’ ಅನ್ನು ವಿಧಾನ ಪರಿಷತ್‍ನಲ್ಲಿ ಮಂಡಿಸಿದರು.

ಮಾರ್ಗಸೂಚಿ ದರದ ಶೇ.40ರಷ್ಟು ಶುಲ್ಕವನ್ನು ಸ್ಥಳೀಯ ಯೋಜನಾ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸುವ ಮೂಲಕ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಬಹುದು. ಎಫ್‍ಎಆರ್ ಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಅವಕಾಶವನ್ನು ಈ ಮಸೂದೆಯಲ್ಲಿ ಕಲ್ಪಿಸಲಾಗಿದೆ.

ಪ್ರೀಮಿಯಂ ಎಫ್‍ಎಆರ್ ಮಿತಿಯನ್ನು ಶೇ.0.4ಕ್ಕೆ ನಿಗದಿಪಡಿಸಲಾಗಿದೆ. ಟ್ರಾನ್ಸ್ ಫಾರಮ್ ಡೆವೆಲಪ್‍ಮೆಂಟ್ ರೈಟ್ಸ್(ಟಿಡಿಆರ್) ಬಳಸಿ ನಿರ್ಮಿಸಿರುವ ಕಟ್ಟಡದ ಎಫ್‍ಎಆರ್ ಮಿತಿಯು ಶೇ.0.6 ರಷ್ಟನ್ನು ಮೀರುವಂತಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಾಗುತ್ತಿದ್ದು, ಅಭಿವೃದ್ದಿ ಕಾರ್ಯಗಳಿಗೆ ವಿನಿಯೋಗವಾಗುತ್ತದೆ. ಎಫ್‍ಎಆರ್ ಗಳ ಮಾರಾಟದಿಂದ ಸಂಗ್ರಹವಾಗುವ ಶುಲ್ಕವನ್ನು ಭೂಸ್ವಾಧೀನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ನಿವೇಶನದ ಅಳತೆ ಮತ್ತು ಮುಂದಿರುವ ರಸ್ತೆಯ ಅಳತೆ ಮೇಲೆ ಇಂತಿಷ್ಟು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಬಹುದು ಎಂದು ಅಳತೆ ಮಾಡಿ ಅನುಮತಿ ನೀಡಲಾಗುತ್ತಿತ್ತು. ಈ ಮಸೂದೆಯಿಂದಾಗಿ ಕಟ್ಟಡ ನಿರ್ಮಿಸುವವರು ಪ್ರೀಮಿಯಂ ಎಫ್‍ಎಆ‌ರ್ ಗಳನ್ನು ಖರೀದಿಸಿ, ಕಟ್ಟಡದ ನಿವೇಶನದ ಅಳತೆಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಬಹುದು ಎಂದು ಮಸೂದೆ ವಿವರಿಸುತ್ತದೆ.

ಆಡಳಿತ ಪಕ್ಷದ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ಹಳೆಯ ಕಾನೂನಿಗೆ ಹೊಸ ರೂಪ ನೀಡಿರುವುದು ಸ್ವಾಗತಾರ್ಹ. ಸ್ಥಳೀಯ ಸಂಸ್ಥೆಗಳಿಗೆ ಅನುಮತಿ ನೀಡುವ ಅಧಿಕಾರ ನೀಡಿರುವ ಕಾರಣ ಕೆಲಸದ ವಿಳಂಬ ತಪ್ಪುತ್ತದೆ ಎಂದು ವಿಧೇಯಕಕ್ಕೆ ಬೆಂಬಲ ಸೂಚಿಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಬಿಲ್ ಅನ್ನು ತಡೆ ಹಿಡಿದು, ಹೆಚ್ಚಿನ ಚರ್ಚೆ ನಡೆಸುವುದು ಉತ್ತಮ. ಎಲ್ಲರೊಟ್ಟಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಪುನಃ ಮಂಡನೆ ಮಾಡಿ. ಇದರಿಂದ ಅಧಿಕಾರಿಗಳ ಕೈಗೆ ಎಲ್ಲಾ ಅಧಿಕಾರಗಳನ್ನು ನೀಡಿದಂತಾಗುತ್ತದೆ ಎಂದು ವಿಧೇಯಕವನ್ನು ವಿರೋಧಿಸಿ, ಸಭಾತ್ಯಾಗ ಮಾಡಿದರು.

ಬಿಜೆಪಿ ಸದಸ್ಯ ಕೆ.ಎಸ್.ನವೀನ್ ತಿದ್ದುಪಡಿಯನ್ನು ಸ್ವಾಗತಿಸಿ, ಸಣ್ಣ ರಸ್ತೆಗಳು ಇರುವ ಕಡೆ ಜನದಟ್ಟಣೆ ಉಂಟಾಗುತ್ತದೆ ಮತ್ತು ಅಗ್ನಿ ಅವಘಡಗಳು ಉಂಟಾದಾಗ ತೊಂದರೆಯಾಗುತ್ತದೆ. ಈ ಕುರಿತು ಸರಕಾರ ಆಲೋಚಿಸಬೇಕು ಎಂದು ಸಲಹೆ ನೀಡಿದರು

ಬಿಜೆಪಿ ಸದಸ್ಯ ಕೇಶವಪ್ರಸಾದ್.ಎಸ್ ಮಾತನಾಡಿ, ಬೆಂಗಳೂರಿನ ಮೂಲಸೌಕರ್ಯಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಆದ ಕಾರಣ ಸಮಿತಿ ರಚಿಸಿ ಮತ್ತೊಂದು ಸುತ್ತಿನ ಪರಾಮರ್ಶೆಯ ನಂತರ ಮತ್ತೊಮ್ಮೆ ಪ್ರೀಮಿಯಂ ಎಫ್‍ಎಆರ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಿ ಎಂದು ಆಗ್ರಹಿಸಿದರು.

ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ನೀವು ಮಾಡಿದ ಕಾನೂನನ್ನೇ ಸರಳೀಕರಣ ಮಾಡಿ ಕರ್ನಾಟಕದ ಎಲ್ಲ ಭಾಗದ ಜನರು ಇದರ ಉಪಯೋಗ ಪಡೆಯಲಿ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಾಗಲಿ ಎನ್ನುವುದಷ್ಟೇ ನಮ್ಮ ಉದ್ದೇಶ. ಬೊಮ್ಮಾಯಿ ಅವರ ಸರಕಾರವೂ ಇದನ್ನು ತಿದ್ದುಪಡಿ ಮಾಡಲು ಹೊರಟಿತ್ತು ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಈ ಕಾನೂನು ಇದೆ. ನಾವು ಹೊಸದಾಗಿ ತರಲು ಮುಂದಾಗಿಲ್ಲ. ಸ್ಥಳೀಯ ಸಂಸ್ಥೆಗಳೂ ಇದರ ಉಪಯೋಗ ಪಡೆದುಕೊಳ್ಳಲಿ ಎಂದು ತಿದ್ದುಪಡಿ ಮಾಡಿದ್ದೇವೆ. ಮಂಗಳೂರಿನಲ್ಲಿ ಪ್ರೀಮಿಯಂ ಎಫ್‍ಎಆರ್ ಜಾರಿಯಾಗಿತ್ತು. ಇದರಿಂದಾಗಿ ಹಿಂದಿನ 5-6 ವರ್ಷಗಳಲ್ಲಿ 2-3 ಸಾವಿರ ಕೋಟಿ ರೂ.ಗಳಷ್ಟು ಆದಾಯ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆ ಈ ಅವಕಾಶ ಕಲ್ಪಿಸಲು ವಿಧೇಯಕಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here