ಬೆಳಗಾವಿ/ಬೆಂಗಳೂರು:
‘ಆರನೇ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ನೀಡಲು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬೆಳಗಾವಿದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ‘ಆ ನೌಕರರ 9 ಬೇಡಿಕೆಗಳಲ್ಲಿ ಎಂಟನ್ನು ಈಡೇರಿಸಿದ್ದೇವೆ. ಕೋವಿಡ್ ಆರ್ಥಿಕ ಸಂಕಷ್ಟದಲ್ಲೂ ಸಂಬಳ ನೀಡಿದ್ದೇವೆ. ವೇತನಕ್ಕಾಗಿಯೇ ₹ 1,200 ಕೋಟಿಯನ್ನು ಸಾರಿಗೆ ಇಲಾಖೆಗೆ ಕೊಟ್ಟಿದ್ದೇವೆ. ಇಷ್ಟಾದ ಮೇಲೂ ಹಟ ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಹಟ ಬಿಡಿ’ ಎಂದು ಕೋರಿದರು.
‘ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಖಾಸಗಿ ಬಸ್ಗಳ ಕಾರ್ಯಾಚರಣೆ ನಡೆಯಲಿದೆ. ಆ ನೌಕರರು ಮುಷ್ಕರ ವಾಪಸ್ ಪಡೆದು ಚರ್ಚೆಗೆ ಬರಲಿ’ ಎಂದರು.
![ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ವರದಿ ಜಾರಿ ಇಲ್ಲ: ಯಡಿಯೂರಪ್ಪ 1 CM meeting with Transport department officails](https://kannada.thebengalurulive.com/wp-content/uploads/2021/04/CM-meeting-with-Transport-department-officails.jpg)
‘ಶೇ 8ರಷ್ಟು ವೇತನ ಹೆಚ್ಚಳಕ್ಕೆ ಯೋಜಿಸಿದ್ದು, ಅದನ್ನು ಕೊಡುತ್ತೇವೆ. ನಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ವಾಪಸ್ ಪಡೆಯುತ್ತಾರೆಯೇ ಕಾದು ನೋಡುತ್ತೇವೆ. ದುರುದ್ದೇಶ ಮತ್ತು ಉದ್ದೇಶಪೂರ್ವಕವಾಗಿ ಮುಷ್ಕರ ನಡೆಸುತ್ತಿದ್ದಾರೆ. ಇದು ಸರಿಯಲ್ಲ’ ಎಂದರು.
ಮುಖ್ಯಮಂತ್ರಿ ಜೊತೆ ನಡೆದ ಸಭೆಯ ಬಳಿಕ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ‘ಸಾರಿಗೆ ನೌಕರರ ವೇತನವನ್ನು ಶೇ 8ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇದೆ. ಹೀಗಾಗಿ, ವೇತನ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸೋಮವಾರವೇ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕಿದರೆ ತಕ್ಷಣ ಹೆಚ್ಚಳಕ್ಕೆ ಆದೇಶ ಹೊರಡಿಸಲಾಗುವುದು’ ಎಂದರು.
‘ಆರನೇ ವೇತನ ಆಯೋಗದ ವರದಿಯಂತೆ ವೇತನ ಹೆಚ್ಚಿಸಲು ಆಗ್ರಹಿಸಿ ನಾಳೆಯಿಂದ (ಏ. 7) ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಕೋವಿಡ್ ಪರಿಸ್ಥಿತಿ ಕಾರಣಕ್ಕೆ ಮುಷ್ಕರ ನಡೆಸದಂತೆ ನೌಕರರಲ್ಲಿ ಮನವಿ ಮಾಡುತ್ತಿದ್ದೇವೆ’ ಎಂದರು.
![ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ವರದಿ ಜಾರಿ ಇಲ್ಲ: ಯಡಿಯೂರಪ್ಪ 2 CM meeting with Transport department officails1](https://kannada.thebengalurulive.com/wp-content/uploads/2021/04/CM-meeting-with-Transport-department-officails1.jpg)
‘ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಸಾರಿಗೆ ನೌಕರರ ಜೊತೆ ಯಾವುದೇ ಸಂಧಾನ ಸಭೆ ನಡೆಸುವ ಪ್ರಶ್ನೆಯೇ ಇಲ್ಲ. ನಾವೇನು ಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇವೆ. ಚುನಾವಣಾ ಆಯೋಗಕ್ಕೂ ಪತ್ರ ಬರೆದು ಆಗಿದೆ. ನೌಕರರು ಮುಷ್ಕರ ನಡೆಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಪೊಲೀಸ್ ಕಾಯ್ದೆ, ಎಸ್ಮಾ ಸೇರಿದಂತೆ ಯಾವುದಾದರೂ ಕಾಯ್ದೆಯಡಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.
‘ಕೋವಿಡ್ ಕಾರಣದಿಂದ ಸಾರಿಗೆ ನಿಗಮಗಳಿಗೆ ಪ್ರತಿ ದಿನ ₹ 4 ಕೋಟಿ ನಷ್ಟವಾಗುತ್ತಿದೆ. ಎಲ್ಲ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ.. ಆದರೂ ಸಾರಿಗೆ ನೌಕರರ ವೇತನಕ್ಕೆ ಸರ್ಕಾರ ಯಾವುದೇ ಸಮಸ್ಯೆ ಮಾಡಿಲ್ಲ. ಹೋದ ವರ್ಷ ಆದಾಯ ಇಲ್ಲದಿದ್ದರೂ ಸಾರಿಗೆ ನೌಕರರ ಸಂಬಳಕ್ಕೆ ₹ 2,100 ಕೋಟಿ ಬಿಡುಗಡೆ ಮಾಡಲಾಗಿದೆ. ಯಾರಿಗೂ ಸಂಬಳ ಕಡಿತ ಮಾಡಿಲ್ಲ. ಬಿಎಂಟಿಸಿ ನೌಕರರಿಗೆ ಜೂನ್ವರೆಗೆ ಸಂಬಳ ಕೊಡಲು ಆದೇಶ ಆಗಿದೆ. ಆದಾಯ ಇಲ್ಲವೆಂದು ಸಂಬಳ ಕಡಿತ ಮಾಡಿಲ್ಲ’ ಎಂದರು.
‘ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ಈಗಾಗಲೇ ಜಾರಿ ಮಾಡಿದ್ದೇವೆ. ಆದರೆ, ಸರ್ಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸಿನಂತೆ ಕೊಡುವ ವೇತನ ನೀಡಲು ಸಾಧ್ಯವೇ ಇಲ್ಲ. ಸಾರಿಗೆ ನೌಕರರ ಜೊತೆ ಚರ್ಚಿಸಿ, ಸಂಧಾನ ಸಭೆ ಏರ್ಪಡಿಸಿ ಪ್ರತಿ 4 ವರ್ಷಕ್ಕೊಮ್ಮೆ ಸಾರಿಗೆ ನೌಕರರ ವೇತನ ಹೆಚ್ಚಿಸುತ್ತಿದ್ದೇವೆ’ ಎಂದರು.
ಮುಖ್ಯಮಂತ್ರಿ @BSYBJP ರವರು ಇಂದು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
— CM of Karnataka (@CMofKarnataka) April 6, 2021
ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್, BMTC ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/VFSSdUbXLo
‘ಮುಷ್ಕರಕ್ಕೆ ಹೋದರೆ ಜನರಿಗೆ ತೊಂದರೆ ಆಗಲಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ತೆಗೆದುಕೊಳ್ಳಲಿದೆ. ಮ್ಯಾಕ್ಸಿ ಕ್ಯಾಬ್ಗಳು ಸೇರಿದಂತೆ ಖಾಸಗಿ ವಾಹನಗಳನ್ನು ಓಡಿಸಲು ಅನುಮತಿ ನೀಡುತ್ತೇವೆ. ಅದಕ್ಕೆ ಸಾರಿಗೆ ಆಯುಕ್ತರು ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದರು.
‘ಕೋವಿಡ್ ಕಾರಣದಿಂದ ಸಮಸ್ಯೆ ಇದ್ದರೂ ನೌಕರರ ಪರವಾಗಿ ಸರ್ಕಾರ ನಿಂತಿದೆ. ಪ್ರತಿದಿನ 45 ಲಕ್ಷ ಜನರು ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದರು. ಕೋವಿಡ್ ಕಾರಣದಿಂದ ಆ ಸಂಖ್ಯೆ 20 ಲಕ್ಷಕ್ಕೆ ಇಳಿದಿದೆ. ಈ ಸಂಖ್ಯೆ ಇನ್ನೂ ಕಡಿಮೆ ಆಗುವ ಸಾಧ್ಯತೆ ಇದೆ. ಮುಷ್ಕರ ನಿರತರು ಬಸ್ಸುಗಳಿಗೆ ಹಾನಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಅದು ಸಾರ್ವಜನಿಕ ಆಸ್ತಿ’ ಎಂದರು.
‘ಮುಂದಿನ ದಿನಗಳಲ್ಲಿ ರಜೆಗಳು ಬರುತ್ತಿವೆ. ಹೀಗಾಗಿ, ರೈಲು ಸೌಲಭ್ಯ ಹೆಚ್ಚಿಸುವಂತೆ ರೈಲ್ವೆ ಇಲಾಖೆಗೂ ಪತ್ರ ಬರೆಯುತ್ತೇವೆ. ಬೆಳಗಾವಿ, ಕಲಬುರ್ಗಿ, ಮೈಸೂರು ಕಡೆಗೆ ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಿಸಲು ಕೇಳುತ್ತಿದ್ದೇವೆ’ ಎಂದರು.
‘ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಸಾರ್ವಜನಿಕರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಕ್ಯಾಬ್ಗಳು ಮತ್ತು ಶಾಲಾ ಬಸ್ಗಳಿಗೆ ಪ್ರಯಾಣ ದರ ನಿಗಡಿಪಡಿಸಿ ಓಡಾಡಲು ಅನುಮತಿ ನೀಡುತ್ತೇವೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲು ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಸಾರಿಗೆ ಆಯುಕ್ತರು ಹೇಳಿದರು.