ಬೆಂಗಳೂರು:
ಯಾವುದೇ ಇಲಾಖೆಯಲ್ಲಿ ಆಡಳಿತಾತ್ಮಕ ಅವಶ್ಯವಿರುವ ಸ್ಥಾನಗಳನ್ನು ತುಂಬುವುದನ್ನು ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳನ್ನು ಮಾಡಲು ಮುಖ್ಯಮಂತ್ರಿಗಳ ಅನುಮತಿ ಪಡೆಯುವುದು ಕಡ್ಡಾಯವೆಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಸೂಚನೆ ನೀಡಿದ್ದಾರೆ.
ಈ ಕುರಿತು ಎಲ್ಲ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದಿರುವ ಅವರು, 2021 ಸಾಮಾನ್ಯ ವರ್ಗಾವಣೆವರೆಗೆ ಯಾವುದೇ ವರ್ಗಾವಣೆಗಳನ್ನು ಮಾಡದಿರಲು ಸರ್ಕಾರ ನಿರ್ಧರಿಸಿದೆ. ಅಂತಹ ವರ್ಗಾವಣೆಗಳನ್ನು ಇಲಾಖೆ ಮಟ್ಟದಲ್ಲಿ ಮಾಡದೇ ಪ್ರತಿಯೊಂದು ವರ್ಗಾವಣೆಗೂ ಮುಖ್ಯಮಂತ್ರಿಗೆ ಕಡತದಲ್ಲಿ ಸಲ್ಲಿಸಿ ಆದೇಶ ಪಡೆದ ನಂತರ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾಾರೆ.

ಈಗಾಗಲೇ ಇಲಾಖೆಗಳಲ್ಲಿ ಕಡತದ ಟಿಪ್ಪಣಿ, ನಡವಳಿ, ಸ್ವೀಕೃತಿ ಮೇಲಿನ ಷರಾ ರೂಪದಲ್ಲಿ ಮುಖ್ಯಮಂತ್ರಿಯವರಿಂದ ಸ್ವೀಕೃತವಾದ ವರ್ಗಾವಣೆ ಆದೇಶಗಳನ್ನೂ ಸಹ ಕಡತ ರೂಪದಲ್ಲಿ ಸಲ್ಲಿಸಿ, ಮುಖ್ಯಮಂತ್ರಿಗಳ ಆದೇಶವನ್ನೂ ಕಡತ ರೂಪದಲ್ಲಿ ಪಡೆದು ವರ್ಗಾವಣೆ ಮಾಡಲು ಸೂಚಿಸಿದ್ದಾರೆ.