Home Uncategorized Ranji Trophy: ಸಮರ್ಥ್ ಅಜೇಯ ಶತಕ: ಡ್ರಾನಲ್ಲಿ ಅಂತ್ಯಕಂಡ ಕರ್ನಾಟಕ-ಸರ್ವಿಸಸ್ ರಣಜಿ ಪಂದ್ಯ

Ranji Trophy: ಸಮರ್ಥ್ ಅಜೇಯ ಶತಕ: ಡ್ರಾನಲ್ಲಿ ಅಂತ್ಯಕಂಡ ಕರ್ನಾಟಕ-ಸರ್ವಿಸಸ್ ರಣಜಿ ಪಂದ್ಯ

5
0

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಸರ್ವಿಸಸ್ (Karnataka vs Services) ನಡುವಣ ರಣಜಿ ಟ್ರೋಫಿಯ (Ranji Trophy) ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಸಮರ್ಥ್ ಆರ್ ಅವರ ಅಜೇಯ 119 ರನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರ ಆಕರ್ಷಕ 73 ರನ್​ಗಳ ನೆರವಿನಿಂದ ಕರ್ನಾಟಕ ತಂಡ ಎದುರಾಳಿಗೆ ಗೆಲ್ಲಲು 293 ರನ್​ಗಳ ಟಾರ್ಗೆಟ್ ನೀಡಿತು. ಆದರೆ, ಅಂತಿಮ ದಿನದಾಟದ ಅಂತ್ಯಕ್ಕೆ ಸರ್ವಿಸಸ್ ತಂಡ 3 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದ ಪರಿಣಾಮ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಈ ಮೂಲಕ ಸಿ ಗುಂಪಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಕರ್ನಾಟಕ 3 ಅಂಕ ಗಳಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ಓಪನರ್​ಗಳಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸಮರ್ಥ್ ಆರ್ ತಲಾ 8 ರನ್​ಗೆ ನಿರ್ಗಮಿಸಿದರು. ನಂತರ ಜೊತೆಯಾದ ವಿಶಾಲ್ ಓನತ್ (33) ಮತ್ತು ನಿಕಿನ್ ಜೋಸ್ (62) ತಂಡಕ್ಕೆ ಆಸರೆಯಾಗಿ ನಿಂತರು. 133 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ತಂಡಕ್ಕೆ ಆಧಾರವಾಗಿದ್ದು ಶರತ್ ಬಿಆರ್ (77) ಹಾಗೂ ಕೃಷ್ಣಪ್ಪ ಗೌತಮ್ (48). ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ರೋನಿತ್ ಮೋರೆ 41 ಬಾಲ್​ಗಳಲ್ಲಿ 26 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕರ್ನಾಟಕ 74.4 ಓವರ್​ಗಳಲ್ಲಿ 304 ರನ್​ಗೆ ಆಲೌಟ್ ಆಯಿತು. ಸರ್ನಿಸಸ್ ಪರ ದಿವೇಶ್ ಪಥಾನಿಯ 5 ವಿಕೆಟ್ ಪಡೆದು ಮಿಂಚಿದರು.

ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿದ ಸರ್ವಿಸಸ್ ತಂಡ ಮೊದಲ ಓವರ್​ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಶುಭಂ ರೋಹಿಲ 8 ರನ್​ಗೆ ಹಾಗೂ ಗೌಲತ್ ರಾಹುಲ್ ಸಿಂಗ್ ಸೊನ್ನೆ ಸುತ್ತಿದರು. ಅನ್ಶುಲ್ ಗುಪ್ತಾ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ದೇವೆಂದರ್ 6 ರನ್​ಗೆ ನಿರ್ಗಮಿಸಿದರು. ಈ ಮೂಲಕ 100 ರನ್​ಗೂ ಮೊದಲೇ ಸರ್ವಿಸಸ್ ತಂಡ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

IND vs BAN: ಟೆಸ್ಟ್ ವೃತ್ತಿಜೀವನದ ವೇಗದ ಶತಕ ಸಿಡಿಸಿದ ಪೂಜಾರ..! ಬಾಂಗ್ಲಾಕ್ಕೆ 512 ರನ್​ಗಳ ಟಾರ್ಗೆಟ್

ಈ ಸಂದರ್ಭ ತಂಡಕ್ಕೆ ಆಸರೆಯಾದ ರವಿ ಚೌಹಾಣ್ ಹಾಗೂ ನಾಯಕ ರಜತ್ ಪಲಿವಾಲ್ ಉತ್ತಮ ಜೊತೆಯಾಟ ಆಡಿದರು. ರವಿ 99 ಎಸೆತಗಳಲ್ಲಿ 56 ರನ್ ಗಳಿಸಿದರು. ಬಳಿಕ ಬಂದ ಬ್ಯಾಟರ್​ಗಳ ಪೈಕಿ ರಾಹುಲ್ ಸಿಂಗ್ 36 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ನಾಯಕನಿಗೆ ಸಾಥ್ ನೀಡಲಿಲ್ಲ. ಹೀಗಿದ್ದರೂ ಏಕಾಂಗಿ ಹೋರಾಟ ನಡೆಸಿದ ಪಲಿವಾಲ್ ತಂಡದ ಮೊತ್ತವನ್ನು ಹೆಚ್ಚಿಸಿ ಶತಕ ಸಿಡಿಸಿ ಔಟಾದರು. 217 ಎಸೆತಗಳಲ್ಲಿ ಇವರು 124 ರನ್ ಗಳಿಸಿದರು. ಅಂತಿಮವಾಗಿ ಸರ್ವಿಸಸ್ ತಂಡ 83.2 ಓವರ್​ಗಳಲ್ಲಿ 261 ರನ್​ಗೆ ಆಲೌಟ್ ಆಯಿತು. ಕರ್ನಾಟಕ ಪರ ವಿದ್ವತ್ ಕಾವೇರಪ್ಪ 4 ಹಾಗೂ ರೋನಿತ್ ಮೋರೆ 3 ವಿಕೆಟ್ ಪಡೆದುಕೊಂಡರು.

43 ರನ್​ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ಉತ್ತಮ ಆಟ ಪ್ರದರ್ಶಿಸಿತು. ಓಪನರ್​ಗಳಾದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ರವಿಕುಮಾರ್ ಸಮರ್ಥ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ 143 ರನ್ ಕಲೆಹಾಕಿದರು. ಮಯಾಂಕ್ 100 ಎಸೆತಗಳಲ್ಲಿ 73 ರನ್ ಗಳಿಸಿದರೆ, ಸಮರ್ಥ್ 178 ಎಸೆತಗಳಲ್ಲಿ ಅಜೇಯ 119 ರನ್ ಸಿಡಿಸಿದರು. ಶುಕ್ರವಾರ ಊಟದ ವಿರಾಮದಲ್ಲಿ ಕರ್ನಾಟಕ ಡಿಕ್ಲೇರ್ ಮಾಡಿಕೊಂಡಿತು. ರಾಜ್ಯ ತಂಡ 56 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು.

ಹೀಗಾಗಿ 296 ರನ್‌ಗಳ ಗುರಿ ಬೆನ್ನಟ್ಟಿದ ಸರ್ವಿಸಸ್‌ 21 ರನ್‌ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಆದರೆ ಈ ಸಂದರ್ಭದಲ್ಲಿ ಜೊತೆಗೂಡಿದ ರವಿ ಚೌಹಾಣ್ (ಅಜೇಯ 66 ರನ್) ಮತ್ತು ಅನ್ಷುಲ್ ಗುಪ್ತಾ (ಅಜೇಯ 71 ರನ್) ತಂಡಕ್ಕೆ ಆಸರೆಯಾದರು. ತಂಡವು 39 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 150 ರನ್‌ ಗಳಿಸಿತು. ಚಹಾ ವಿರಾಮದ ನಂತರ ಪಂದ್ಯವನ್ನು ಡ್ರಾ ಎಂದು ಘೋಷಿಸಲು ಉಭಯ ತಂಡಗಳ ನಾಯಕರು ಸಮ್ಮತಿಸಿದರು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಪಾಂಡಿಚೇರಿ ವಿರುದ್ಧ ಡಿಸೆಂಬರ್ 20 ರಂದು ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here