ಬೆಂಗಳೂರು:
ಬಿಎಂಟಿಸಿ ಡೀಸೆಲ್ ಬಸ್ಸುಗಳನ್ನು ವಿದ್ಯುತ್ ಚಾಲಿತ ವಾಹನಗಳನ್ನಾಗಿ ಪರಿವರ್ತಿಸಿ, ಮರುಬಳಕೆಗೆ ಅಣಿಗೊಳಿಸಲು ತೈವಾನ್ನ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ. ಇದರಿಂದ ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದ್ದು, ಈ ಸಂಬಂಧ ಸಾರಿಗೆ ಇಲಾಖೆಯ ಜತೆ ಮಾತನಾಡಿ ಸಂಪರ್ಕಸೇತುವಾಗಿ ಕೆಲಸ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ರಾಜ್ಯದಲ್ಲಿ ಹೂಡಿಕೆ ಮಾಡುವ ಸಂಬಂಧ ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡಿರುವ ತೈವಾನ್ ಇಂಡಿಯಾ ಬಿಝಿನೆಸ್ ಅಸೋಸಿಯೇಷನ್ನ (ಟಿಐಬಿಎ) 50ಕ್ಕೂ ಹೆಚ್ಚು ಹೂಡಿಕೆದಾರರ ಜತೆ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯದ ಉದ್ಯಮ ವಲಯ, ಕಾರ್ಯ ಪರಿಸರ, ಪ್ರೋತ್ಸಾಹಕ ಕ್ರಮಗಳು ಮತ್ತು ಸೌಲಭ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
ಬೆಂಗಳೂರಿನಲ್ಲಿ ಇಂದು ನಡೆದ ‘ತೈವಾನ್ ಇಂಡಿಯಾ ಬ್ಯುಸಿನೆಸ್ ಅಸೋಸಿಯೇಷನ್ –#TIBA’ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದೆ.
— M B Patil (@MBPatil) June 30, 2023
ಕರ್ನಾಟಕದ ಕೈಗಾರಿಕಾ ಸ್ನೇಹಿ ವಾತಾವರಣ ತೈವಾನ್ ದೇಶದ ಕಂಪೆನಿಗಳಿಗೆ ಪ್ರೋತ್ಸಾಹದಾಯಕವಾಗಿದ್ದು, ಹೂಡಿಕೆಗೆ ರಾಜ್ಯ ಸೂಕ್ತವಾಗಿದೆ. ವಿವಿಧ ಉತ್ಪನ್ನಗಳಿಗೆ ತೈವಾನ್ ದೇಶ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ತೈವಾನ್… pic.twitter.com/jiy0G3pcJL
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಸದ್ಯಕ್ಕೆ ನಮ್ಮಲ್ಲಿ ಕೇಂದ್ರ ಸರಕಾರದ ಸಹಯೋಗದೊಂದಿಗೆ ಇ.ವಿ. ಬಸ್ ಗಳನ್ನು ಓಡಿಸುತ್ತಿದ್ದೇವೆ. ಆದರೆ ಡೀಸೆಲ್ ಬಸ್ ಗಳನ್ನು ವಿದ್ಯುತ್ ಚಾಲಿತ ವಾಹನಗಳನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕಾಗಿದೆ. ಇದು ಇವತ್ತಿನ ಅಗತ್ಯ ಕೂಡ. ನೀವು ಮುಂದೆ ಬರುವುದಾದರೆ ಸಾರಿಗೆ ಸಂಸ್ಥೆಗಳ ಜತೆ ಸಂಪರ್ಕ ಕಲ್ಪಿಸಲಾಗುವುದು” ಎಂದರು.
ಇದೇ ರೀತಿಯಲ್ಲಿ ತುಮಕೂರು ಮಶೀನ್ ಟೂಲ್ಸ್ ಪಾರ್ಕ್ (ಟಿಎಂಟಿಪಿ) ಅನ್ನು ಪುನಶ್ಚೇತನಗೊಳಿಸುವ ಮೂಲಕ ಲಾಭದಾಯಕವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಹಾಗೆಯೇ, ಎಲೆಕ್ಟ್ರಾನಿಕ್ಸ್ ಸಿಸ್ಟಂ ವಿನ್ಯಾಸ ಮತ್ತು ತಯಾರಿಕೆ (ಇಎಸ್ಡಿಎಂ) ಕಾರ್ಯ ಪರಿಸರವನ್ನು ವ್ಯಾಪಕಗೊಳಿಸುವ ಉದ್ದೇಶದಿಂದ ಮೈಸೂರಿನ ಕೋಚನಹಳ್ಳಿ ಮತ್ತು ಧಾರವಾಡದ ಕೋಟೂರು-ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಇಎಂಸಿ 2.0 ಕ್ಲಸ್ಟರ್ಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ತೈವಾನ್ ಕಂಪನಿಗಳ ಸಹಭಾಗಿತ್ವ ಹೊಂದುವ ಆಸಕ್ತಿ ಇದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಪೀಣ್ಯ, ಬೊಮ್ಮಸಂದ್ರ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿರುವ ಉದ್ದಿಮೆಗಳು ಮಶೀನ್ ಟೂಲ್ ತಯಾರಿಕೆಗೆ ಹೆಸರಾಗಿವೆ. ಜತೆಗೆ ಆಟೋಮೋಟಿವ್ ಮತ್ತು ವಾಹನ ಬಿಡಿಭಾಗಗಳ ತಯಾರಿಕೆಯು ಮುಂಚೂಣಿಗೆ ಬರುತ್ತಿದೆ. ಇವೆಲ್ಲವೂ ತೈವಾನ್ ಮತ್ತು ಕರ್ನಾಟಕದ ಸಹಭಾಗಿತ್ವಕ್ಕೆ ಪ್ರಶಸ್ತವಾಗಿವೆ ಎಂದು ಅವರು ವಿವರಿಸಿದರು.
ಪರಿಸರಸ್ನೇಹಿ ತಂತ್ರಜ್ಞಾನ ಮತ್ತು ಮರುಬಳಕೆ ಮಾಡಬಹುದಾದ ಇಂಧನಗಳ ಉತ್ಪಾದನೆಯಲ್ಲೂ ರಾಜ್ಯವು ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಕರ್ನಾಟಕಲ್ಲಿ ಗ್ರೀನ್ ಹೈಡ್ರೋಜನ್, ಎಲೆಕ್ಟ್ರಾನಿಕ್ಸ್ ಸಿಸ್ಟಂ ವಿನ್ಯಾಸ ಮತ್ತು ತಯಾರಿಕೆ (ಇಎಸ್ಡಿಎಂ), ಏರೋಸ್ಪೇಸ್ ವಲಯಗಳು ಗಮನಾರ್ಹವಾಗಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದ್ದೇವೆ. ಇದನ್ನು ತೈವಾನ್ ಹೂಡಿಕೆದಾರರ ಗಮನಕ್ಕೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು. ತೈವಾನ್ ನಿಯೋಗದಲ್ಲಿ ಜಾರ್ಜ್ ಎಲಿಯನ್, ಚೆನ್ನೈನ ಟಿಇಸಿಸಿ ಡೈರೆಕ್ಟರ್ ಜನರಲ್ ರಿಚರ್ಡ್ ಚೆನ್ ಮುಂತಾದವರಿದ್ದರು.