ಬೆಂಗಳೂರು:
ಸಮಾಜವನ್ನು ಸಕಾರಾತ್ಮಕವಾಗಿ ಪರಿವರ್ತಿಸಿ ಹೊಸತನವನ್ನು ತರಬಲ್ಲಂತಹ ಶಕ್ತಿ-ಸಾಮರ್ಥ್ಯಗಳಿರುವ ಯುವಜನರಿಗೆ ಈ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿದೆ. ಇದನ್ನು ಮನಗಂಡೇ ಯುವಜನರ ಭವಿಷ್ಯಕೇಂದ್ರಿತವಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಭಾನುವಾರ ಹೇಳಿದ್ದಾರೆ.
ಜಕ್ಕೂರಿನ ಸರಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಏರ್ಪಡಿಸಿದ್ದ ನೇತಾಜಿ ಸುಭಾಷಚಂದ್ರ ಬೋಸರ 125ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 75 ಪೈಲಟ್ ಗಳ ತರಬೇತಿಗೆ ಚಾಲನೆ ನೀಡಿದರು.
Also Read: Karnataka CM announces raising 7,500 NCC cadets, govt to bear their training expenses
ಸಮಾಜದಲ್ಲಿ ಇಂದು ಉನ್ನತ ಮೌಲ್ಯಗಳು ಹಿಂದಕ್ಕೆ ಸರಿದು, ಹಣಕ್ಕೆ ಪ್ರಾಧಾನ್ಯ ನೀಡಲಾಗುತ್ತಿದೆ. ಇಂತಹ ಪ್ರವೃತ್ತಿಗೆ ಕೊನೆ ಹಾಡಿ, ವಿದ್ಯಾರ್ಥಿಗಳ ಪರಿಪೂರ್ಣ ಮತ್ತು ಸಮಾಜೋಪಯೋಗಿ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ಇಪಿಯಲ್ಲಿ ಒತ್ತು ಕೊಡಲಾಗಿದೆ. ಈ ಮೂಲಕ ಯುವಜನರಲ್ಲಿ ಮೇಲ್ಮಟ್ಟದ ನೈತಿಕತೆಯನ್ನು ರೂಢಿಸಲಾಗುವುದು ಎಂದು ಅವರು ಹೇಳಿದರು.
#NetajiSubhashChandraBose ಅವರ 125ನೇ ಜಯಂತಿ ಅಂಗವಾಗಿ ನವೀಕೃತ ಜಕ್ಕೂರು ವೈಮಾನಿಕ ತರಬೇತಿ ಶಾಲೆಯ ಚಾಲನೆ, ಹೆಲಿಟೂರಿಸಂ, ಇನ್ನಿತರ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ @BSBommai ಅವರ ಜತೆ ಪಾಲ್ಗೊಂಡೆ.
— Dr. Ashwathnarayan C. N. (@drashwathcn) January 23, 2022
ಸಚಿವರಾದ @Rajeev_GoI @narayanagowdakc, @BCNagesh_bjp ಹಾಗೂ ಇತರರು ಉಪಸ್ಥಿತರಿದ್ದರು. pic.twitter.com/Xvb0DT2DhK
ಕೇವಲ 48 ವರ್ಷಗಳ ಕಾಲ ಬದುಕಿದ್ದ ಬೋಸರು ಹದಿನೈದನೆಯ ವರ್ಷದಲ್ಲೇ ದೇಶದ ಸ್ವಾತಂತ್ರ್ಯದ ಬಗ್ಗೆ ಆಲೋಚಿಸುತ್ತಿದ್ದರು. ನಮ್ಮ ಯುವಜನರು ಕೂಡ ಹೀಗೆಯೇ ಸಮಗ್ರ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ದೇಶವು ವಿಶ್ವಗುರುವಾಗಲು ಕೊಡುಗೆ ನೀಡಬೇಕು. ಜತೆಗೆ ಸಾಹಸಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.
ಯುವಜನರು ವೈಯಕ್ತಿಕವಾಗಿ ಸಾಧನೆ ಮಾಡುವುದು ಬಹಳ ದೊಡ್ಡ ಸಾಧನೆಯಲ್ಲ. ಒಂದು ತಂಡದ ಭಾಗವಾಗಿ ಕೆಲಸ ಮಾಡಿ, ದೇಶ-ಸಮಾಜಗಳ ಕಡೆಗೆ ಶ್ರದ್ಧೆ ಬೆಳೆಸಿಕೊಳ್ಳಬೇಕಾದ್ದು ಮುಖ್ಯವಾಗಿದೆ. ಸರಿಯಾದ ಶಿಕ್ಷಣ ವ್ಯವಸ್ಥೆಯೊಂದೇ ಸಮಾಜದ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಬಲ್ಲದು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಎನ್.ಸಿ.ಸಿ ಯಲ್ಲಿ 7500 ಹೊಸ ಕೆಡೆಟ್ಗಳಿಗೆ ಅವಕಾಶ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಉಳಿದಂತೆ, ಈ ಕಾರ್ಯಕ್ರಮದಲ್ಲಿ 75 ನೇತಾಜಿ ಅಮೃತ ಎನ್.ಸಿ.ಸಿ. ಶಾಲೆಗಳು, ನವೀಕೃತ ಸರಕಾರಿ ವೈಮಾನಿತ ತರಬೇತಿ ಶಾಲೆ, ಸಿದ್ಧಿ ಜನಾಂಗದ 75 ಕ್ರೀಡಾಪಟುಗಳ ತರಬೇತಿ, ಹೆಲಿ ಟೂರಿಸಂ ಮುಂತಾದ ಕಾರ್ಯಕ್ರಮಗಳಿಗೆ ಹಸಿರು ನಿಶಾನೆ ತೋರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ನಾರಾಯಣ ಗೌಡ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಶಾಸಕ ಕೃಷ್ಣ ಭೈರೇಗೌಡ, ಅಧಿಕಾರಿಗಳಾದ ಕುಮಾರ ನಾಯಕ್, ಶಾಲಿನಿ ರಜನೀಶ್ ಮುಂತಾದವರು ಉಪಸ್ಥಿತರಿದ್ದರು.