ಸಿದ್ಧಗಂಗಾ ಮಠದ ಗೋ ಕಟ್ಟೆಯಲ್ಲಿ ಮುಳುಗಿ ಮೃತಪಟ್ಟ ನಾಲ್ವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಘೋಷಿಸಿದ್ದಾರೆ. ತುಮಕೂರು: ಸಿದ್ಧಗಂಗಾ ಮಠದ ಗೋ ಕಟ್ಟೆಯಲ್ಲಿ ಮುಳುಗಿ ಮೃತಪಟ್ಟ ನಾಲ್ವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಘೋಷಿಸಿದ್ದಾರೆ.
ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಸಿದ್ದಗಂಗಾ ಮಠದಲ್ಲಿ ಇಂತಹ ಅವಘಡ ನಡೆಯಬಾರದಿತ್ತು. ಗೋ ಕಟ್ಟೆ ಸುತ್ತಲೂ ಮುಳ್ಳಿನ ತಂತಿ ಬೇಲಿ ಹಾಕಲು ಈಗಾಗಲೇ ಮಠದವರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಗೋಕಟ್ಟೆಯಲ್ಲಿ ಮುಳುಗಿ ಮಠದ ವಿದ್ಯಾರ್ಥಿ ನಿಲಯದ ಇಬ್ಬರು ವಿದ್ಯಾರ್ಥಿಗಳು ಹಾಗೂ ಅವರನ್ನು ರಕ್ಷಿಸಲು ನೀರಿಗಿಳಿದಿದ್ದ ಪೋಷಕರು ಸೇರಿದಂತೆ ನಾಲ್ವರು ಭಾನುವಾರ ಸಾವನ್ನಪ್ಪಿದ್ದರು. ಮಠದ ವಿದ್ಯಾರ್ಥಿನಿಲಯದಲ್ಲಿದ್ದ ರಾಮನಗರದ ಹರ್ಷಿತ್ (12) ಚಿಕ್ಕಮಗಳೂರಿನ ಶಂಕರ್ (12) ಹಾಗೂ ಮಕ್ಕಳನ್ನು ಕಾಣಲು ಬಂದಿದ್ದ ಬೆಂಗಳೂರಿನ ಬಾಗಲಗುಂಟೆ ನಿವಾಸಿ ಲಕ್ಷ್ಮಿ (33) ಯಾದಗಿರಿ ಜಿಲ್ಲೆಯ ಮಹದೇವಪ್ಪ (40) ಗೋಕಟ್ಟೆಯಲ್ಲಿ ಮುಳುಗಿ ಮೃತಪಟ್ಟಿದ್ದರು.
ಲಕ್ಷ್ಮಿ ಮತ್ತು ಹರ್ಷಿತ್ ಶವಗಳು ಭಾನುವಾರ ಪತ್ತೆಯಾಗಿದ್ದವು. ಶಂಕರ್, ಮಹದೇವಪ್ಪ ಮೃತದೇಹಗಳು ಸೋಮವಾರ ಬೆಳಗ್ಗೆ ಹೊರ ತೆಗೆಯಲಾಯಿತು. ಮತ್ತೊಂಡೆದೆ ಸಿದ್ದಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ಮೃತಪಟ್ಟ ಕುಟುಂಬಕ್ಕೆ ಶಾಸಕ ಬಿ. ಸುರೇಶ್ ಗೌಡ ವೈಯಕ್ತಿಕವಾಗಿ ತಲಾ 50,000 ರೂಪಾಯಿ ಪರಿಹಾರ ನೀಡಿದ್ದಾರೆ.