ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆ ಮಾಡಿ, ಅತಿಯಾದ ಮದ್ಯಪಾನದಿಂದ ಸಾವನ್ನಪ್ಪಿದ್ದಾನೆಂದು ಬಿಂಬಿಸಿದ್ದ ಪತ್ನಿಯೊಬ್ಬಳನ್ನು ನಂದಿನಿ ಲೇಔಟ್ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆ ಮಾಡಿ, ಅತಿಯಾದ ಮದ್ಯಪಾನದಿಂದ ಸಾವನ್ನಪ್ಪಿದ್ದಾನೆಂದು ಬಿಂಬಿಸಿದ್ದ ಪತ್ನಿಯೊಬ್ಬಳನ್ನು ನಂದಿನಿ ಲೇಔಟ್ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಜಯನಗರದ ನಿವಾಸಿ ಆಂಜನೇಯ (45) ಹತ್ಯೆಯಾದ ಪತಿ. ಹತ್ಯೆಯ ಸಂಬಂಧ ಮೃತನ ಪತ್ನಿ ಅನಿತ (35) ಹಾಗೂ ಆಕೆಯ ಪ್ರಿಯಕರ ರಾಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಟೈಲ್ಸ್ ಕೆಲಸಗಾರನಾಗಿದ್ದ ಆಂಜನೇಯ, ನಿತ್ಯವೂ ಮದ್ಯಪಾನ ಮಾಡುತ್ತಿದ್ದುಸ ಕ್ಷುಲ್ಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಕೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅನಿತಾ ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದಳು. ಜೂನ್ 18ರಂದು ರಾತ್ರಿ ಆಂಜನೇಯ ಕುಡಿದ ಅಮಲಿನಲ್ಲಿ ಮನೆಗೆ ಬಂದು ಮಲಗಿದ್ದು, ಈ ವೇಳೆ ಅನಿತಾ ಪ್ರಿಯಕರ ರಾಕೇಶ್ ನನ್ನು ಮನೆಗೆ ಕರೆಸಿಕೊಂಡು, ತನ್ನ 14 ಮತ್ತು 11 ವರ್ಷದ ಇಬ್ಬರು ಮಕ್ಕಳ ಸಮ್ಮುಖದಲ್ಲಿಯೇ ತಲೆದಿಂಬು ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಳು.
ಮಕ್ಕಳಿಗೆ ತಂದೆ ಕೆಟ್ಟ ವ್ಯಕ್ತಿ ಎಂದು ಹೇಳಿ, ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿದ್ದಾಳೆ. ಮುರುದಿನ ಅತಿಯಾದ ಮದ್ಯಪಾನದಿಂದ ಸಾವನ್ನಪ್ಪಿದ್ದಾನೆಂದು ಬಿಂಬಿಸಿದ್ದಾಳೆ. ಈ ಬಗ್ಗೆ ಸಂಬಂಧಿಕರಿಗೂ ಯಾವುದೇ ಸಂಶಯಗಳು ಬಾರದಂತೆ ನಡೆದುಕೊಂಡಿದ್ದು, ಎಲ್ಲರೂ ಸೇರಿ ಅಂತಿಮ ಸಂಸ್ಕಾರ ಮಾಡಿದ್ದಾರೆ.
ಘಟನೆ ಬಳಿಕ ಮಕ್ಕಳನ್ನು ತೊರೆದಿದ್ದ ಅನಿತಾ, ರಾಕೇಶ್ ಜೊತೆಗೆ ಹೋಗಿದ್ದಾಳೆ. ನಂತರ ಮಕ್ಕಳು ತಮ್ಮ ಅಜ್ಜಿಯ ಮನೆಗೆ ಹೋಗಿದ್ದು, ಹತ್ಯೆ ಬಗ್ಗೆ ಅಜ್ಜಿಗೆ ಮಾಡಿಹಿ ನೀಡಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಅನಿತಾ ಬಗ್ಗೆ ಆಕೆಯ 14 ವರ್ಷದ ಪುತ್ರಿಯೇ ಪೊಲೀಸರಿಗೆ ದೂರು ನೀಡಿದ್ದೀ, ಆಕೆಯ ಹೇಳಿಕೆಯ ಆಧಾರದಲ್ಲಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ತನಿಖೆಯ ಭಾಗವಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆಂದು ತಿಳಿದುಬಂದಿದೆ.