Home Uncategorized ಐಐಟಿ-ಬಿಎಚ್‌ಯು ಲೈಂಗಿಕ ದೌರ್ಜನ್ಯ ಪ್ರಕರಣ: ಕ್ಯಾಂಪಸ್‌ನಲ್ಲಿ ಇತರ ಮೂರು ಕಿರುಕುಳ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಆರೋಪಿಗಳು

ಐಐಟಿ-ಬಿಎಚ್‌ಯು ಲೈಂಗಿಕ ದೌರ್ಜನ್ಯ ಪ್ರಕರಣ: ಕ್ಯಾಂಪಸ್‌ನಲ್ಲಿ ಇತರ ಮೂರು ಕಿರುಕುಳ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಆರೋಪಿಗಳು

29
0

ವಾರಣಾಸಿ(ಉ.ಪ್ರ): ಐಐಟಿ-ಬಿಎಚ್‌ಯು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಯ ಮೂವರು ಆರೋಪಿಗಳು ಪೋಲಿಸರ ವಿಚಾರಣೆ ಸಂದರ್ಭದಲ್ಲಿ ತಾವು ಕ್ಯಾಂಪಸ್‌ನಲ್ಲಿ ಇತರ ಮೂರು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಭಾಗಿಯಾಗಿದ್ದೆವು ಮತ್ತು ಇತರ ‘ಅವಕಾಶಗಳನ್ನು’ ಹುಡುಕಲು ಕ್ಯಾಂಪಸ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೆವು ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳ ಕರೆ ವಿವರಗಳ ದಾಖಲೆ (ಸಿಡಿಆರ್)ಗಳ ವಿಶ್ಲೇಷಣೆಯೂ ಇದನ್ನು ಪುಷ್ಟೀಕರಿಸಿದೆ. ರಾತ್ರಿ 11 ಗಂಟೆ ಮತ್ತು ನಸುಕಿನ ಒಂದು ಗಂಟೆಯ ನಡುವೆ ಆಗಾಗ್ಗೆ ಕ್ಯಾಂಪಸ್‌ನಲ್ಲಿ ಆರೋಪಿಗಳ ಉಪಸ್ಥಿತಿಯನ್ನು ಅವು ತೋರಿಸಿವೆ ಎಂದು ತನಿಖೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬನಾರಸ ಹಿಂದು ವಿವಿ (ಬಿಎಚ್‌ಯು) ಕ್ಯಾಂಪಸ್‌ನಲ್ಲಿ ನ.1ರಂದು ನಡೆದಿದ್ದ ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ವಾರಣಾಸಿ (ಮಹಾನಗರ) ಐಟಿ ಸೆಲ್‌ನ ಪದಾಧಿಕಾರಿಗಳಾದ ಕುನಾಲ್ ಪಾಂಡೆ (28),ಸಕ್ಷಮ ಪಟೇಲ್ (20) ಮತ್ತು ಅಭಿಷೇಕ್ ಚೌಹಾಣ್ (22) ಅವರನ್ನು ವಾರಣಾಸಿ ಪೋಲಿಸರು ಶನಿವಾರ ಬಂಧಿಸಿದ್ದರು. ಮಾಧ್ಯಮ ವರದಿಯಂತೆ ಈ ಘಟನೆಗೆ ಎರಡು ದಿನಗಳ ಮುನ್ನ ಇನ್ನೋರ್ವ ವಿದ್ಯಾರ್ಥಿನಿಯೂ ಕಿರುಕುಳವನ್ನು ಎದುರಿಸಿದ್ದು,‌ ಅದನ್ನು ವಿವಿಯ ಶಿಸ್ತು ಪಾಲನಾಧಿಕಾರಿಯ ಕಚೇರಿಗೆ ವರದಿ ಮಾಡಿದ್ದಳು.

ಆದಾಗ್ಯೂ ಪೋಲಿಸರು ನ.1ರಂದು ದೌರ್ಜನ್ಯಕ್ಕೆ ಗುರಿಯಾಗಿದ್ದ ಮಹಿಳೆಯಿಂದ ಮಾತ್ರ ತಾವು ದೂರು ಸ್ವೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ. ತನ್ನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಆರೋಪಿಗಳು ಚಿತ್ರೀಕರಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಳು.

ಆರೋಪಿಗಳ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ್ದು, ಇಂತಹ ಯಾವುದೇ ವೀಡಿಯೊ ಮತ್ತು ಚಿತ್ರಗಳು ಕಂಡು ಬಂದಿಲ್ಲ. ಅವುಗಳನ್ನು ಆರೋಪಿಗಳು ಅಳಿಸಿದ್ದಿರಬಹುದು ಎಂದು ಅಧಿಕಾರಿಯೋರ್ವರು ತಿಳಿಸಿದರು.

ಅ.30ರಂದು ಓರ್ವ ವಿದ್ಯಾರ್ಥಿನಿ ಸೇರಿದಂತೆ ಇತರ ಮೂವರಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.

ಅ.30ರ ಘಟನೆಗೆ ಸಂಬಂಧಿಸಿದಂತೆ ಶಿಸ್ತುಪಾಲನಾಧಿಕಾರಿಯ ಕಚೇರಿಯು ದೂರನ್ನು ಸ್ವೀಕರಿಸಿದ್ದನ್ನು ದೃಢಪಡಿಸಿದ ಸಂಸ್ಥೆಯ ಡೀನ್, ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿಚಾರಣೆಯಲ್ಲಿ ತಿಳಿದುಬಂದಿರುವಂತೆ ಆರೋಪಿಗಳು ನ.1ರ ಘಟನೆಯ ಬಳಿಕ ಒಂದು ವಾರ ವಾರಣಾಸಿಯಲ್ಲಿಯೇ ಇದ್ದರು, ಆದರೆ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಬಳಿಕ ಪರಾರಿಯಾಗಿದ್ದರು. ವಿಷಯವು ಈಗ ತಣ್ಣಗಾಗಿರಬಹುದು ಎಂದು ಭಾವಿಸಿ 15 ದಿನಗಳ ಹಿಂದಷ್ಟೇ ವಾರಣಾಸಿಗೆ ಮರಳಿದ್ದರು. ಆರಂಭದಲ್ಲಿ ನಗರದ ವಿವಿಧೆಡೆಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಅವರು ಅಂತಿಮವಾಗಿ ತಮ್ಮ ಮನೆಗಳಲ್ಲಿಯೇ ವಾಸವಾಗಿದ್ದರು.

ಈ ನಡುವೆ ಬಿಜೆಪಿ ವಾರಣಾಸಿ (ಮಹಾನಗರ) ಅಧ್ಯಕ್ಷ ವಿದ್ಯಾಸಾಗರ ಅವರು,ಆರೋಪಿಗಳು ಬಿಜೆಪಿ ಐಟಿ ಸೆಲ್‌ನ ಸದಸ್ಯರಾಗಿ ಉಳಿದಿಲ್ಲ, ಅವರು ನವಂಬರ್‌ವರೆಗೆ ಪದಾಧಿಕಾರಿಗಳಾಗಿದ್ದರು. ಆದರೆ ಆ ತಿಂಗಳಲ್ಲಿ ಐಟಿ ಸೆಲ್‌ನ್ನು ವಿಸರ್ಜಿಸಲಾಗಿದ್ದು,ಅದನ್ನು ಪುನಃ ರಚಿಸಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

LEAVE A REPLY

Please enter your comment!
Please enter your name here