ಸೆಂಚೂರಿಯನ್: ಅಹ್ಮದಾಬಾದ್ ನಲ್ಲಿ ನ.19ರಂದು ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಆಘಾತಕಾರಿ ಸೋಲನುಭವಿಸಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತವು ಆ ಸೋಲಿನ ಕಹಿ ನೆನಪನ್ನು ಮರೆತು ದಕ್ಷಿಣ ಆಫ್ರಿಕಾ ನೆಲದಲ್ಲಿ 31 ವರ್ಷಗಳ ನಂತರ ಮೊತ್ತ ಮೊದಲ ಬಾರಿ ಟೆಸ್ಟ್ ಸರಣಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.
ಮಂಗಳವಾರ ಸೂಪರ್ಸ್ಪೋರ್ಟ್ ಪಾರ್ಕ್ ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆರಂಭವಾಗಲಿದೆ. ದಕ್ಷಿಣ ಆಫ್ರಿಕಾವು 1992ರಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾದ ನಂತರ ಭಾರತವು ದಕ್ಷಿಣ ಆಫ್ರಿಕಾಕ್ಕೆ ಮಣ್ಣಿನಲ್ಲಿ ಆಡುತ್ತಿರುವ 9ನೇ ಸರಣಿ ಇದಾಗಿದೆ. ರೋಹಿತ್ ಶರ್ಮಾ ಬಳಗ ಸರಣಿ ಗೆಲ್ಲುವ ಕಠಿಣ ಸವಾಲು ಎದುರಿಸುತ್ತಿದೆ.
ಭಾರತ ಈ ಹಿಂದೆ 2010-11ರಲ್ಲಿ ಸರಣಿ ಗೆಲುವಿನ ಹೊಸ್ತಿಲಲ್ಲಿ ಎಡವಿತ್ತು. ಆಗ 3 ಪಂದ್ಯಗಳ ಸರಣಿಯು 1-1ರಿಂದ ಸಮಬಲಗೊಂಡಿತ್ತು. 1992ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಆಡಿದ ನಂತರ ಭಾರತವು 8 ಬಾರಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದು, ಈ ಪೈಕಿ ದಕ್ಷಿಣ ಆಫ್ರಿಕಾ 7 ಬಾರಿ ಸರಣಿ ಜಯಿಸಿತ್ತು. 2010-11ರಲ್ಲಿ ಒಂದು ಸರಣಿಯು ಡ್ರಾನಲ್ಲಿ ಕೊನೆಗೊಂಡಿತ್ತು. ದಕ್ಷಿಣ ಆಫ್ರಿಕಾ ಆರು ಬಾರಿ ಕಡಿಮೆ ಅಂತರದಿಂದ ಸರಣಿ ಗೆದ್ದುಕೊಂಡಿತ್ತು.
2021-2022ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಾರತವು ಸರಣಿ ಗೆಲ್ಲುವ ಉತ್ತಮ ಅವಕಾಶವಿದೆ ಎಂದು ನಂಬಲಾಗಿತ್ತು. ಸೆಂಚೂರಿಯನ್ನಲ್ಲಿ ಮೊದಲ ಪಂದ್ಯವನ್ನು ಭರ್ಜರಿ ಅಂತರದಿಂದ ಜಯಿಸಿದ್ದ ಭಾರತವು ಆ ನಂತರದ ಎರಡು ಪಂದ್ಯಗಳನ್ನು ಸೋತಿತ್ತು. ಈ ಬಾರಿ ಭಾರತವು ಸೆಂಚೂರಿಯನ್ ಹಾಗೂ ಕೇಪ್ಟೌನ್ನಲ್ಲಿ ಎರಡೇ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯ ಗೆಲ್ಲುವ ತಂಡ ಮುನ್ನಡೆ ಪಡೆಯಲಿದೆ. ಏಕದಿನ ವಿಶ್ವಕಪ್ನಲ್ಲಾದ ಭಾರೀ ನಿರಾಶೆ ಹಾಗೂ ಟ್ವೆಂಟಿ-20 ವಿಶ್ವಕಪ್ ತಯಾರಿಯ ಯೋಜನೆಯಲ್ಲಿರುವ ಭಾರತವು ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಭಾರತಕ್ಕೆ ಈ ಬಾರಿ ಸರಣಿ ಗೆಲ್ಲುವ ಉತ್ತಮ ಅವಕಾಶವಿದೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಮೊದಲಿನಷ್ಟು ಪ್ರತಿಭಾವಂತರಿಲ್ಲ. ವೇಗದ ಬೌಲರ್ಗಳಾದ ಕಾಗಿಸೊ ರಬಾಡ ಹಾಗೂ ಲುಂಗಿ ಗಿಡಿ ಮೊದಲ ಟೆಸ್ಟ್ ನಡೆಯುವ ಸೆಂಚೂರಿಯನ್ ಪಿಚ್ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಕೆಲವು ಆಟಗಾರರು ಗಾಯಗೊಂಡಿದ್ದರೂ ಭಾರತ ಈಗಲೂ ಬಲಿಷ್ಠ ತಂಡವಾಗಿದೆ. ಆಸ್ಟ್ರೇಲಿಯದಲ್ಲಿ ಸತತ ಎರಡು ಸರಣಿ ಗೆಲುವು ಭಾರತಕ್ಕೆ ಆತ್ಮವಿಶ್ವಾಸವನ್ನು ಮೂಡಿಸಿದೆ.
ವೇಗದ ಬೌಲರ್ ಮುಹಮ್ಮದ್ ಶಮಿ ಗಾಯದ ಸಮಸ್ಯೆಯ ಕಾರಣಕ್ಕೆ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಬ್ಯಾಟರ್ ಋತುರಾಜ್ ಗಾಯಕ್ವಾಡ್ ಕೂಡ ಸರಣಿಯಿಂದ ಹೊರಗುಳಿದಿದ್ದಾರೆ. ಈ ವಾರ ವಿರಾಟ್ ಕೊಹ್ಲಿ ಕೌಟುಂಬಿಕ ಕಾರಣಕ್ಕೆ ಸ್ವದೇಶಕ್ಕೆ ವಾಪಸಾಗಿದ್ದರು. ಅವರು ಮೊದಲ ಟೆಸ್ಟ್ ಗೆ ಲಭ್ಯವಿದ್ದಾರೆ.
2016ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯವು ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡ ನಂತರ ದಕ್ಷಿಣ ಆಫ್ರಿಕಾ ತಂಡ ತಾಯ್ನಾಡಿನಲ್ಲಿ ಆಡಿರುವ 32 ಪಂದ್ಯಗಳಲ್ಲಿ 24ರಲ್ಲಿ ಗೆಲುವು ಹಾಗೂ 8ರಲ್ಲಿ ಸೋಲನುಭವಿಸಿದೆ. ಒಂದೂ ಪಂದ್ಯವನ್ನು ಡ್ರಾ ಮಾಡಿಕೊಂಡಿಲ್ಲ.
ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ಮೊದಲ ಎರಡು ದಿನ ಭಾರೀ ಮಳೆ ಸುರಿಯುವ ಮುನ್ಸೂಚನೆ ಲಭಿಸಿದೆ. ಸೆಂಚೂರಿಯನ್ ಪಿಚ್ ಬೌನ್ಸ್ ಹಾಗೂ ಗರಿಷ್ಠ ವೇಗಕ್ಕೆ ಹೆಸರುವಾಸಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಡುವೆ ತೀವ್ರ ಸ್ಪರ್ಧೆಯ ಭರವಸೆ ನೀಡಿದೆ. ತಂಪಾದ ಗಾಳಿ ಬೀಸುತ್ತಿರುವ ವಾತಾವರಣದಲ್ಲಿ, ಮುಕ್ತ ಮೈದಾನದಲ್ಲಿ ಚೆಂಡು ಅನಿಶ್ಚಿತತೆಯಿಂದ ವರ್ತಿಸಬಹುದು.
50 ಓವರ್ ವಿಶ್ವಕಪ್ ನಲ್ಲಿ ರೋಹಿತ್ ಗೆ ಕಪಿಲ್ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಸರಿಗಟ್ಟುವ ಅವಕಾಶ ಲಭಿಸಿತ್ತು. ಒಂದು ವೇಳೆ ರೋಹಿತ್ ಹಾಗೂ ಅವರ ತಂಡ ಈ ಟೆಸ್ಟ್ ಸರಣಿಯನ್ನು ಜಯಿಸಿದರೆ ಹಿಂದಿನ ಯಾವ ತಂಡ ಮಾಡದ ಸಾಧನೆ ಮಾಡಿದಂತಾಗುತ್ತದೆ.
ಅತ್ಯಂತ ಮುಖ್ಯವಾಗಿ ಮುಹಮ್ಮದ್ ಅಝರುದ್ದೀನ್, ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ರಾಹುಲ್ ದ್ರಾವಿಡ್, ಎಂ.ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನು ಜಯಿಸಿದ್ದರು. ಆದರೆ ಸರಣಿ ಗೆಲ್ಲುವ ಹಂತದಲ್ಲಿ ಎಡವಿದ್ದರು.
ರೋಹಿತ್ಗೆ ಈ ಸರಣಿ ಗೆಲುವು ವಿಶ್ವಕಪ್ ಗಾಯಕ್ಕೆ ಮದ್ದು ಸವರಿದಂತಾಗುತ್ತದೆ. ಭಾರತದ ಕೆಲವು ಕ್ರಿಕೆಟಿಗರಿಗೆ ಇದು ಕೊನೆಯ ಆಫ್ರಿಕಾ ಸಫಾರಿಯಾಗಿದೆ. ಭಾರತದ ಇತರ ಟೆಸ್ಟ್ ತಂಡಗಳು ಹಿಂದಿನ 8 ಪ್ರವಾಸದಲ್ಲಿ ಮಾಡದ ಸಾಧನೆಗೈಯುವ ಸುವರ್ಣಾವಕಾಶ ಲಭಿಸಿದೆ.
ಭಾರತದ ಯುವ ಬ್ಯಾಟರ್ಗಳಿಗೆ ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲಿಂಗ್ ದಾಳಿ ಎದುರಿಸುವುದು ಸುಲಭದ ಮಾತಲ್ಲ. ಯಶಸ್ವಿ ಜೈಸ್ವಾಲ್ ಇದೇ ಮೊದಲ ಬಾರಿ ಕಾಗಿಸೊ ರಬಾಡ, ಲುಂಗಿ ಗಿಡಿ, ಮಾರ್ಕೊ ಜಾನ್ಸನ್ ಹಗೂ ಜೆರಾಲ್ಡ್ ಕೊಯೆಟ್ಝಿರಂತಹ ಬೌಲರ್ಗಳಿಂದ ಕಠಿಣ ಸವಾಲು ಎದುರಿಸಬೇಕಾಗಿದೆ.
ಉಪ ಖಂಡಗಳ ಪಿಚ್ನಲ್ಲಿ ಮಿಂಚುತ್ತಿರುವ ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ದಕ್ಷಿಣ ಆಫ್ರಿಕಾ ಪಿಚ್ನಲ್ಲಿ ಇನ್ನಷ್ಟ್ಟು ಶ್ರಮಪಡಬೇಕಾಗಿದೆ. ಶಾರ್ಟ್ ಬಾಲ್ಗೆ ಎಡವುತ್ತಿರುವ ಅಯ್ಯರ್ ತಮ್ಮ ಪ್ರದರ್ಶನ ಉತ್ತಮಪಡಿಸಬೇಕಾಗಿದೆ.
ತಮ್ಮ ಶೈಲಿಯನ್ನು ಉಳಿಸಿಕೊಳ್ಳುವಂತೆ ಜೈಸ್ವಾಲ್ ಹಾಗೂ ಗಿಲ್ ಗೆ ಕೋಚ್ ರಾಹುಲ್ ದ್ರಾವಿಡ್ ಉತ್ತೇಜನ ನೀಡುತ್ತಿದ್ದು, ಪಂದ್ಯದ ಮೇಲಿನ ಅರಿವು ಹಾಗೂ ಎದುರಾಗುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮಹತ್ವದ ಕುರಿತು ಒತ್ತಿ ಹೇಳಿದ್ದಾರೆ.
ನಾಯಕ ಬವುಮಾ, ನಿವೃತ್ತಿಯ ಅಂಚಿನಲ್ಲಿರುವ ಡೀನ್ ಎಲ್ಗರ್, ಐಡೆನ್ ಮಾರ್ಕ್ರಮ್ ಹಾಗೂ ಯುವ ಆಟಗಾರ ಟೋನಿ ಡಿ ರೆರ್ಝಿ, ವೇಗದ ಬೌಲರ್ ಪೀಟರ್ಸನ್ ಭಾರತಕ್ಕೆ ಸವಾಲಾಗಬಲ್ಲರು.
ಮೊದಲ ದಿನ ಮಳೆಗಾಹುತಿಯಾದರೆ ಎರಡನೇ ದಿನ ಟಾಸ್ ಚಿಮ್ಮಿದರೆ ಮೊದಲು ಬ್ಯಾಟಿಂಗ್ ಮಾಡುವುದು ಅತ್ಯಂತ ಸವಾಲಿನದ್ದಾಗಿದೆ.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:30
ತಂಡಗಳು:
ಭಾರತ: ರೋಹಿತ್ ಶರ್ಮಾ(ನಾಯಕ),ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್(ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಪ್ರಸಿದ್ಧ ಕೃಷ್ಣ, ಕೆ.ಎಸ್. ಭರತ್(ವಿಕೆಟ್ಕೀಪರ್).
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ(ನಾಯಕ), ಐಡೆನ್ ಮಾರ್ಕ್ರಮ್, ಟೋನಿ ಡಿ ರೊರ್ಝಿ, ಡೀನ್ ಎಲ್ಗರ್, ಕೀಗನ್ ಪೀಟರ್ಸನ್, ಕೈಲ್ ವೆರ್ರೆನ್ನೆ(ವಿಕೆಟ್ಕೀಪರ್), ಟ್ರಿಸ್ಟಾನ್ ಸ್ಟಬ್ಸ್(ವಿಕೆಟ್ಕೀಪರ್), ನಾಂಡ್ರೆ ಬರ್ಗೆರ್, ಮಾರ್ಕೊ ಜಾನ್ಸನ್, ವಿಯಾನ್ ಮುಲ್ದರ್, ಜೆರಾಲ್ಡ್ ಕೊಯೆಟ್ಝಿ, ಕೇಶವ ಮಹಾರಾಜ್, ಕಾಗಿಸೊ ರಬಾಡ, ಲುಂಗಿ ಗಿಡಿ, ಡೇವಿಡ್ ಬೆಡಿಂಗ್ಹ್ಯಾಮ್.
ಅಂಕಿ-ಅಂಶ
► ಒಟ್ಟು 500 ಟೆಸ್ಟ್ ವಿಕೆಟ್ಗಳನ್ನು ಪಡೆದ 9ನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಲು ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ಗೆ ಇನ್ನು 11 ವಿಕೆಟ್ ಬೇಕಾಗಿದೆ.
► ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ 50ಕ್ಕಿಂತ ಹೆಚ್ಚು ಸರಾಸರಿ(51.35)ಹೊಂದಿರುವ ಭಾರತದ ಏಕೈಕ ಬ್ಯಾಟರ್ ಆಗಿದ್ದಾರೆ. ಸಚಿನ್ ತೆಂಡುಲ್ಕರ್(46.44) ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
► ಹ್ಯೂಗ್ ಟೆಫೀಲ್ಡ್ (170 ವಿಕೆಟ್)ದಾಖಲೆಯನ್ನು ಮುರಿದು ಟೆಸ್ಟ್ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾದ ಪ್ರಮುಖ ಸ್ಪಿನ್ನರ್ ಎನಿಸಿಕೊಳ್ಳಲು ಕೇಶವ ಮಹಾರಾಜ್ ಗೆ ಇನ್ನು 13 ವಿಕೆಟ್ ಗಳ ಅಗತ್ಯವಿದೆ.
► ಟೆಸ್ಟ್ ಕ್ರಿಕೆಟ್ ನಲ್ಲಿ 3,000 ರನ್ ಪೂರೈಸಲು ಟೆಂಬಾ ಬವುಮಾ ಕೇವಲ 3 ರನ್ ಗಳಿಸಬೇಕಾಗಿದೆ.
► ಟೆಸ್ಟ್ ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಲು ಶುಭಮನ್ ಗಿಲ್ 34 ರನ್ ಕಲೆಹಾಕಬೇಕಾಗಿದೆ.