ದಾವಣಗೆರೆ: ಇತ್ತೀಚೆಗೆ ಭರ್ಜರಿ ಮಳೆಯಾದ ಹಿನ್ನೆಲೆ ಜಗಳೂರು ತಾಲೂಕಿನ ಹಿರೇಅರಕೆರೆ ಗ್ರಾಮ ಕೆರೆ ಭರ್ತಿಯಾಗಿದೆ. ಹೀಗೆ ಬಹು ದಿನಗಳ ಬಳಿಕ ಕೆರೆ ಭರ್ತಿ ಆಗಿರುವುದಕ್ಕೆ ಸುತ್ತಲಿನ ಗ್ರಾಮಸ್ಥರು ಸಂಭ್ರಮಿಸಿದ್ದರು. 125 ಎರಕೆ ಪ್ರದೇಶದ ಕೆರೆಯಲ್ಲಿ ಮೂರು ಲಕ್ಷ ಮೀನಿನ ಮರಿಗಳನ್ನ ಬಿಡಲಾಗಿತ್ತು. ಆದ್ರೆ ಇಂತಹ ಮೀನುಗಳು ಸಾವನ್ನಪ್ಪಿ ತೇಲಾಡುತ್ತಿವೆ. ಸತ್ತ ಮೀನುಗಳನ್ನ ತಿಂದ ನಾಯಿಗಳು, ಕೆರೆ ನೀರು ಕುಡಿದ ಜಾನುವಾರುಗಳು ಕೂಡ ಸಾವನ್ನಪ್ಪುತ್ತಿವೆ.
ಬಸವರಾಜ್ ಎಂಬುವವರು ಸಣ್ಣ ನೀರಾವರಿ ಇಲಾಖೆಯಿಂದ ಗುತ್ತಿಗೆ ಪಡೆದು ಕೆರೆಯಲ್ಲಿ ಮೂರು ಲಕ್ಷ ಮೀನಿನ ಮರಿಗಳನ್ನ ಬಿಟ್ಟಿದ್ದರು. ಇದಕ್ಕಾಗಿ ಆರು ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. ಈ ರೀತಿ ಮೀನು ಸಾವನ್ನಪ್ಪುವುದಕ್ಕೆ ನೀರಿನಲ್ಲಿ ದುಷ್ಕರ್ಮಿಗಳ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಬೇಜವಾಬ್ದಾರಿಗೆ ಮೀನುಗಳ ಜೊತೆಗೆ ಜಾನುವಾರು ಮೃತಪಟ್ಟಿವೆ. ಹೀಗೆ ಕೆರೆ ನೀರಿನಲ್ಲಿ ವಿಷ ಹಾಕಿದ ಪರಿಣಾಮ ಮೀನುಗಳು ಸಾವನ್ನಪ್ಪಿವೆ. ಈ ವಿಚಾರ ಸಂಬಂಧ ನಿನ್ನೆಯೇ ಗ್ರಾಮಸ್ಥರು ಪಿಡಿಓ ಹಾಗೂ ತಾಲೂಕಾ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ ನೀರು ಸಂಗ್ರಹಿಸಿ ಮೀನುಗಳ ಸಾವಿಗೆ ನಿಖರ ಕಾರಣ ಹೇಳಿ ಎಂದಿದ್ದಾರೆ. ಆದ್ರೆ ಬೇಜವಾಬ್ದಾರಿ ಎದ್ದು ಕಾಣುತ್ತಿದೆ.
ಇದನ್ನೂ ಓದಿ: ಕಲಬುರಗಿ: ಕುಟುಂಬದ ಯುವತಿಯ ಬೆನ್ನುಬಿದ್ದಿದ್ದ ಯುವಕನ ಬರ್ಬರ ಕೊಲೆ ಮಾಡಿಸಿದ ಮಾಲಗತ್ತಿ ಗ್ರಾಮ ಪಂಚಾಯತ್ ಸದಸ್ಯ
ಕೆರೆ ಅಂಗಳದಲ್ಲಿ ಕೆಟ್ಟ ವಾಸನೆ ಹರಡಿಕೊಂಡಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಜಗಳೂರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳನ್ನ ಪತ್ತೆ ಹಚ್ಚಿ ಎಂದು ಆಗ್ರಹಿಸಿದ್ದಾರೆ.
ನಿಜಕ್ಕೂ ಇದು ಬೇಸರದ ವಿಚಾರ. ಬಹು ದಿನಗಳ ಬಳಿಕ ಕೆರೆ ಭರ್ತಿಯಾಗಿದೆ. ಇಂತಹ ಕೆರೆಗೆ ವಿಷ ಸೇರಿಕೊಂಡಿದೆ ಅಂದ್ರೆ ಇಡೀ ಕೆರೆ ನೀರು ಖಾಲಿ ಮಾಡುವಂತಹ ಪ್ರಸಂಗ ಬಂದ್ರುಬರಬಹುದು. ಸದ್ಯ ಮೀನುಗಳು ಹಾಗೂ ಜಾನುವಾರುಗಳ ಸಾವಿಗೆ ಕಾರಣ ಗೊತ್ತಾಗಬೇಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ