ಬಿಎಂಟಿಸಿ ಬಸ್ಗಳಲ್ಲಿನ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ಪರ್ಸ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಆಗ್ನೇಯ ವಿಭಾಗದ ಪೊಲೀಸರು, ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು: ನಗರದ ಬಿಎಂಟಿಸಿ ಬಸ್ಗಳಲ್ಲಿನ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ಪರ್ಸ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಆಗ್ನೇಯ ವಿಭಾಗದ ಪೊಲೀಸರು, ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 30 ಲಕ್ಷ ರೂಪಾಯಿ ಮೌಲ್ಯದ ಸುಮಾರು 150 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಸುಭಾಷ್ನಗರದ ಜಾಫರ್ ಸಿದ್ದಿಕ್ (26), ಬೇಗೂರು ಬೋಳಿಗುಡ್ಡದ ಸೈಯದ್ ಅಖಿಲ್ ಅಲಿಯಾಸ್ ಸಮೀರ್ (40), ಹಳೇಗುಡ್ಡದಹಳ್ಳಿಯ ರೆಹಮಾನ್ ಶರೀಫ್ (42), ಶಫಿಕ್ ಅಹಮ್ಮದ್ ಅಲಿಯಾಸ್ ಮೌಲಾ (38), ಪಾದರಾಯನಪುರದ ಮುಷ್ತಾಕ್ ಅಹಮ್ಮದ್ (45) ಹಾಗೂ ಪಾರ್ವತಿಪುರದ ಇಮ್ರಾನ್ ಪಾಷಾ (34) ಬಂಧಿತರು.
‘ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ತನಿಖೆ ಮುಂದುವರಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಶನಿವಾರ ‘ಪತ್ರಿಕಾಗೋಷ್ಠಿ‘ಯಲ್ಲಿ ತಿಳಿಸಿದ್ದಾರೆ.
‘ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಜಾಫರ್ ಹಾಗೂ ಸೈಯದ್, ವ್ಯವಸ್ಥಿತ ಜಾಲದ ಮೂಲಕ ಕೃತ್ಯ ಎಸಗುತ್ತಿದ್ದರು. ಯಾರಿಗೂ ಸಿಗದಂತೆ ತಪ್ಪಿಸಿಕೊಂಡು ಹೋಗುವ ಎಲ್ಲ ದಾರಿಗಳನ್ನೂ ಕಂಡುಕೊಂಡಿದ್ದರು. ಈ ಜಾಲದಿಂದ ಸದ್ಯ ₹ 30 ಲಕ್ಷ ಮೌಲ್ಯದ 150 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.