Home Uncategorized ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ: ದೂರು, ಪ್ರತಿದೂರು ದಾಖಲು

ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ: ದೂರು, ಪ್ರತಿದೂರು ದಾಖಲು

20
0

ಬೆಂಗಳೂರು: ಮಾಜಿ ಪ್ರೇಯಸಿಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿ ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ನಗರದ ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಜಿ ಪ್ರೇಯಸಿ ಕೂಡ ಕೆ.ಸಿ.ಕಾರಿಯಪ್ಪ ವಿರುದ್ಧ ನಗರದ ಆರ್.ಟಿ.ನಗರ ಪೊಲೀಸ್ ಠಾಣೆಗೆ ಪ್ರತಿದೂರು ಸಲ್ಲಿಸಿರುವ ಬಗ್ಗೆ ಸೋಮವಾರ ವರದಿಯಾಗಿದೆ.

ಒಂದೂವರೆ ವರ್ಷದ ಹಿಂದೆ ದಿಶಾ ಎಂಬುವವರ ಪರಿಚಯವಾಗಿತ್ತು. ಇಬ್ಬರು ಪರಸ್ಪರ ಪ್ರೀತಿಸಲಾರಂಭಿಸಿದ್ದೆವು. ಆಕೆ ಮದ್ಯವ್ಯಸನಿಯಾಗಿದ್ದಳು. ಅನೇಕ ಬಾರಿ ಬುದ್ಧಿವಾದ ಹೇಳಿದರೂ ಕೇಳದೇ ಇದ್ದಾಗ ಒಂದು ವರ್ಷದ ಹಿಂದೆ ನಮ್ಮ ನಡುವೆ ಬ್ರೇಕಪ್ ಆಗಿತ್ತು. ಆ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡಿದ್ದೆ. ನಂತರದ ದಿನಗಳಲ್ಲಿ ‘ನಿನ್ನ ಕ್ರಿಕೆಟ್ ಜೀವನ ಅಂತ್ಯಗೊಳಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ವಿರುದ್ಧ ಬರೆಯುತ್ತೇನೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ’ ಎಂದು ಆಕೆ ಮಾನಸಿಕ ಕಿರುಕುಳ ನೀಡುತ್ತಿದ್ದರು.

ಇವೆಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದರೂ ಡಿ. 22ರಂದು ಬಗಲಗುಂಟೆಯ ರಾಮಯ್ಯ ಲೇಔಟ್‍ನಲ್ಲಿರುವ ತಮ್ಮ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ, ಪೋಷಕರನ್ನು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಕೆ.ಸಿ.ಕಾರಿಯಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆ.ಸಿ.ಕಾರಿಯಪ್ಪ ವಿರುದ್ಧ ಮಾಜಿ ಪ್ರೇಯಸಿ ದಿಶಾ ಅವರು ಕೂಡ ಪ್ರತಿ ದೂರು ದಾಖಲಿಸಿದ್ದು, ನಾನು ಮತ್ತು ಕಾರಿಯಪ್ಪ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದೆವು. ಇಬ್ಬರು ಒಂದೇ ಸಮುದಾಯದವರು. ಸಂಬಂಧದಲ್ಲಿದ್ದಾಗ ಇಬ್ಬರ ನಡುವೆ ಪರಸ್ಪರ ಸಮ್ಮತಿಯ ಮೇರೆಗೆ ದೈಹಿಕ ಸಂಪರ್ಕ ಬೆಳೆದು ನಾನು ಗರ್ಭ ಧರಿಸಿದ್ದೆ. ನಂತರ ನನಗೆ ಗರ್ಭಪಾತ ಮಾತ್ರೆ ನೀಡಿದ್ದರು. ನಾನು ‘ನನಗೆ ಮಗು ಬೇಕು ಎಂದಾಗಲೂ ಬಲವಂತವಾಗಿ ಐದು ದಿನಗಳ ಕಾಲ ಮಾತ್ರೆ ನೀಡಿದ್ದರು ಎಂದು ದೂರಿ ನಲ್ಲಿ ಹೇಳಿದ್ದಾರೆ.

ಆ ನಂತರ ಗೋಲ್ಡನ್ ಫಾರ್ಮ್ ರೆಸಾರ್ಟ್‍ಗೆ ಹೋಗಿದ್ದೆವು. ಒಂದು ವಾರದ ಬಳಿಕ ಗರ್ಭಪಾತವೂ ಆಯಿತು. ಈ ಕುರಿತಾಗಿ ನಾನು ಹಿಂದೆಯೇ ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಕೆ.ಸಿ.ಕಾರಿಯಪ್ಪ ಅವರ ಮನವಿ ಮೇರೆಗೆ ದೂರನ್ನು ಹಿಂಪಡೆದಿದ್ದೆ. ಇಬ್ಬರೂ ಮದುವೆಯಾಗೋಣ ಎಂದು ನಂಬಿಸಿದ್ದ ಕಾರಿಯಪ್ಪ, ನನ್ನಿಂದ ಹಂತಹಂತವಾಗಿ 2 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ ಎಂದು ದೂರಿದ್ದಾರೆ.

ಆ ಸಂದರ್ಭದಲ್ಲಿ ನನಗೆ ಮಾಡೆಲಿಂಗ್ ಮಾಡೋದು ಏಕೆ, ಹುಡುಗರ ಜೊತೆ ಹೋಗುವುದು ಯಾಕೆ, ಎಂದೆಲ್ಲ ಕಿರುಕುಳ ನೀಡಲು ಆರಂಭಿಸಿದ್ದರು. ಒಂದು ಸಲ ಇಬ್ಬರ ಪೋಷಕರ ಭೇಟಿಯಾಯಿತು. ನೀವೇ ಮದುವೆ ಮಾಡಿಕೊಡಬೇಕು ಎಂದು ಹೇಳಿದ್ದಕ್ಕೆ, 2ಬಿಎಚ್‍ಕೆ ಫ್ಲಾಟ್ ಬೇಕು ಎಂದು ಬೇಡಿಕೆ ಇಟ್ಟರು. ಆ ನಂತರ ಗುಜರಾತ್ ಅಸೋಸಿಯೇಷನ್‍ಗೆ ಕರೆದುಕೊಂಡು ಹೋಗಿದ್ದಾಗ ನನ್ನನ್ನು ಹೆಂಡತಿ ಎಂದೇ ಎಲ್ಲರಿಗೂ ಪರಿಚಯಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಮೋಸ ಮಾಡಿದರು.

ಅನಂತರದಲ್ಲಿ ಅವರ ಪೋಷಕರು ‘ನೀನು ವಿಚ್ಛೇದಿತೆ. ನಮ್ಮ ಮಗನನ್ನು ಮದುವೆಯಾಗಬೇಡ’ ಎಂದು ಅವಾಚ್ಯವಾಗಿ ನಿಂದಿಸಿದರು. ಡಿಸೆಂಬರ್ 18ರಂದು ದಿಣ್ಣೂರು ಮುಖ್ಯರಸ್ತೆಯಲ್ಲಿರುವ ನಮ್ಮ ಮನೆಗೆ ಬಂದಿದ್ದ ಕಾರಿಯಪ್ಪ ‘ನೀನು ಈಗಾಗಲೇ ಡಿವೋರ್ಸ್ ಆದವಳು. ನಿನ್ನನ್ನು ಕಂಡರೆ ನನಗಿಷ್ಟವಿಲ್ಲ. ನಿನ್ನಿಂದ ನಾನು ಯಾವುದೇ ಹಣ ಪಡೆದಿಲ್ಲ’ ಎಂದು ನನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಎರಡು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಗೊತ್ತಾಗಿದೆ.

 ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ಪ್ರತಿಕ್ರಿಯೆ:

‘ದಿಶಾ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಮಾದಕ ಪದಾರ್ಥ ಸೇವಿಸುತ್ತಿದ್ದೆ ಎಂದು ಹೇಳಿದ್ದಾರೆ. ಇವೆಲ್ಲವೂ ಸಹ ನನ್ನ ಕ್ರಿಕೆಟ್ ಜೀವನವನ್ನು ಅಂತ್ಯಗೊಳಿಸುವ ಯತ್ನ. ಅಹಮದಾಬಾದಿಗೆ ಬಂದಿದ್ದಾಗ ಅವರು ನನ್ನ ರೂಮಿಗೆ ಮಾದಕ ವಸ್ತುಗಳನ್ನು ತರಿಸಿಕೊಂಡು ಸೇವಿಸಿದ್ದಾರೆ. ಆ ಸಂದರ್ಭದಲ್ಲಿ ನಾನು ಎಷ್ಟೇ ಹೇಳಿದರೂ ಸಹ ಕೇಳದೆ, ನನ್ನ ಕ್ರಿಕೆಟ್ ಜೀವನ ಅಂತ್ಯ ಮಾಡುವುದಾಗಿಯೂ, ನನ್ನ ಹೆಸರು ಹಾಳು ಮಾಡುವುದಾಗಿಯೂ ಮಾದಕ ಸೇವನೆ ಮುಂದುವರೆಸಿದ್ದರು ಎಂದು ತಿಳಿಸಿದ್ದಾರೆ.

ಓರ್ವ ಕ್ರೀಡಾಪಟುವಾಗಿ ನಾನು ಮಾದಕ ವಸ್ತುಗಳ ಸೇವನೆಯ ವಿರೋಧಿಯಾಗಿದ್ದೇನೆ. ಆದ್ದರಿಂದ ಆ ಸಂದರ್ಭದಲ್ಲಿ ನನ್ನ ರಕ್ಷಣೆಗಾಗಿ ಈ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಅದನ್ನು ಪೊಲೀಸರಿಗೂ ನೀಡುತ್ತಿದ್ದೇನೆ. ಅದಷ್ಟೇ ಅಲ್ಲದೇ, ಬೇರೆಯವರ ಜೊತೆ ಹೋಟೆಲ್‍ಗಳಲ್ಲಿ ಮಾದಕ ಸೇವನೆ ಮಾಡುತ್ತಿರುವ ವಿಡಿಯೋಗಳೂ ಸಹ ನನಗೆ ದೊರೆತಿದ್ದು, ಅವುಗಳನ್ನೂ ಪೊಲೀಸರಿಗೆ ನೀಡುತ್ತೇನೆ. ಈ ವಿಚಾರದಲ್ಲಿ ಸುಳ್ಳು ಆರೋಪಗಳ ಮೂಲಕ ನನಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ನನಗೆ ನ್ಯಾಯ ಬೇಕಿದೆ ಎಂದು ಕೆ.ಸಿ.ಕಾರಿಯಪ್ಪ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here